4 Mar 2014

ಇಂತಹ ಸಂಪ್ರದಾಯಗಳು ಬೇಕೆ?

 ನೈಶಿ ( Nyishi ) ಅರುಣಾಚಲ್ ಪ್ರದೇಶದ ಮುಖ್ಯ ಬುಡಕಟ್ಟು ಜನಾಂಗ. ಪ್ರಕೃತಿಯ ನಡುವೆ ವಾಸಿಸುವ ರೈತಾಪಿ ಜನ ಇವರು. ಇವರಲ್ಲೊಂದು ಆಚರಣೆಯಿತ್ತು . ಈ ಜನಾಂಗದ ಗಂಡಸರು ಮದುವೆಯಾಗಬೇಕೆಂದರೆ  ಅಲ್ಲಿ ಹೇರಳವಾಗಿದ್ದ ಮಂಗಟ್ಟೆ ಹಕ್ಕಿಯೊಂದನ್ನು( hornbill ) ಕೊಂದು ಅದರ ಬಲಿಷ್ಟವಾದ ಕೊಕ್ಕು ಮತ್ತು ಗರಿಗಳನ್ನು ಬೆತ್ತದಿಂದ ನೆಯ್ದ ಟೋಪಿಗೆ ( padam ) ಸಿಕ್ಕಿಸಿಕೊಂಡು ಹಾಕಿಕೊಳ್ಳಬೇಕಿತ್ತು.  
 
ಚಿತ್ರ ಕೃಪೆ - ಅಂತರ್ಜಾಲ

 
 ಈ ಸಂಪ್ರದಾಯವನ್ನು ಈ ದಶಕದಲ್ಲಿ ಆಚರಿಸುವುದು ಕಷ್ಟವಾಗುತ್ತಿತ್ತು  ಏಕೆಂದರೆ ಕಾನೂನಿನ ಪ್ರಕಾರ ಈ ಪಕ್ಷಿಯನ್ನು ಬೇಟೆಯಾಡುವುದು ಅಪರಾಧ . ಇದಕ್ಕಿಂತಲೂ ಕಷ್ಟವಾಗಿದ್ದು ಅವುಗಳ ಸಂಖ್ಯೆಯೇ ಕಡಿಮೆಯಾಗಿ ಬೇಟೆಯಾಡಲು ಸಿಗದೇ ಹೋಗುತ್ತಿದ್ದುದು.
ಇವೆಲ್ಲವುಗಳಿಂದ ಎಚ್ಚೆತ್ತು ನಾಶನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಸಂಸ್ಥೆಯವರು ನೈಶಿ ಇಂಡಿಜಿನಸ್ ಫೈತ್ ಅಂಡ್ ಕಲ್ಚರಲ್ ಸೊಸೈಟಿಯ ಸಹಯೋಗದಲ್ಲಿ ಮಂಗಟ್ಟೆ ಹಕ್ಕಿಗಳ ಕೊಕ್ಕಿನಂತೆಯೆ ತೋರುವ ಫೈಬರ್ ಗ್ಲಾಸ್ ನಿಂದ ಮಾಡಿದ ಕೃತಕ ಕೊಕ್ಕುಗಳನ್ನು ತಯಾರಿಸಿದರು.  ಬೇಟೆಯಾಡುವುದನ್ನು ನಿಲ್ಲಿಸಿ ಕೃತಕ ಕೊಕ್ಕುಗಳನ್ನು ಧರಿಸುವಂತೆ ನೈಶಿ ಜನಾಂಗದ ಪ್ರಮುಖರ   ಮನವೊಲಿಸಲಾಯಿತು. ಇದರಿಂದ ಮಂಗಟ್ಟೆ ಹಕ್ಕಿಗಳ ಬೇಟೆ ಗಣನೀಯವಾಗಿ ತಗ್ಗಿತು.

ಹೀಗೆ ಪ್ರಾಣಿ ಪಕ್ಷಿಗಳ ಚರ್ಮ , ಎಲುಬು , ದಂತ , ಕೊಂಬು , ಕೊಕ್ಕು ಇತ್ಯಾದಿಗಳನ್ನು ಅಲಂಕಾರಿಕವಾಗಿ ಬಳಸುವುದು ಪ್ರಪಂಚದಾದ್ಯಂತ ಕಂಡುಬರುತ್ತದೆ.   ಹಿಂದೆ ಮಾನವನ ಸಂಖ್ಯೆ ಕಡಿಮೆಯಿದ್ದು,  ಪ್ರಾಣಿಗಳು ಹೇರಳವಾಗಿದ್ದ ಕಾಲದಲ್ಲಿ , ಇನ್ಯಾವುದೇ ಅಲಂಕಾರಿಕ ವಸ್ತುಗಳಿಲ್ಲದ ಕಾಲದಲ್ಲಿ ಇದು ಬಳಕೆಗೆ ಬಂದ್ದಿದ್ದಿರಬಹುದು. ಅದೇ ನಂತರ ಸಂಪ್ರದಾಯವಾಯಿತು. ಆದರೆ ಇದು ಇವತ್ತಿನ ಕಾಲಕ್ಕೆ ಅವಶ್ಯಕವಲ್ಲದ ಅನಿಷ್ಟ ಪದ್ಧತಿ. ಇದರಿಂದಾಗಿ ಮೊದಲೇ ವಿರಳವಾಗಿರುವ ಪ್ರಾಣಿ ಪಕ್ಷಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಿ ಅವುಗಳು ಅಳಿಯುವಂತಹ ಅಪಾಯ ಉಂಟಾಗುತ್ತದೆ. 

ಇಂತಹುದೇ ಇನ್ನೊಂದು ಅನಿಷ್ಟ ಸಂಪ್ರದಾಯವನ್ನು ನೆನಪಿಸಿಕೊಳ್ಳುವುದು ಇಲ್ಲಿ ಸೂಕ್ತವೆನ್ನಿಸುತ್ತದೆ.  ಹಿಂದೆ ಸನ್ಯಾಸಿಗಳು , ಮಠಾಧಿಪತಿಗಳು ಕೃಷ್ಣಾಜಿನದ ಮೇಲೆ ಕುಳಿತುಕೊಳ್ಳುವ ರೂಢಿಯಿತ್ತು. ಕೃಷ್ಣಮೃಗಗಳನ್ನು , ಜಿಂಕೆ ಕಡವೆಗಳನ್ನು ಬೇಟೆಯಾಡುವುದನ್ನು ನಿಷೇಧಿಸಿದ ಮೇಲೆ ಈ ರೂಢಿ ಕಡಿಮೆಯಾಯಿತು.

 ಜನಮಾನಸದಲ್ಲಿ ನೆಲೆನಿಂತ ಯಾವುದೇ ಸಂಪ್ರದಾಯವೂ ಕೂಡ ಬದಲಾಗಲು ತುಂಬ ಸಮಯ ಬೇಕು.  ಹಿರಿಯರು , ವಿದ್ಯಾವಂತರು , ಪ್ರಸಿದ್ಧ ವ್ಯಕ್ತಿಗಳು ಅನಿಷ್ಟ ಸಂಪ್ರದಾಯವನ್ನು ಮೀರಿ ನಿಂತರೆ ಆಗ ಕಿರಿಯರು , ಜನಸಾಮಾನ್ಯರು ಅದನ್ನು ಬಲು ಬೇಗನೆ ಅನುಸರಿಸುತ್ತಾರೆ. ಪ್ರಸಿದ್ಧ ವ್ಯಕ್ತಿಗಳಿಗೆ , ಸಾರ್ವಜನಿಕ ಜೀವನದಲ್ಲಿರುವವರಿಗೆ ಇಂತಹ ಸೂಕ್ಷ್ಮತೆ ಇರಬೇಕಾಗುತ್ತದೆ .


ಇತ್ತೀಚೆಗೆ ಅರುಣಾಚಲಕ್ಕೆ ಭೇಟಿಯಿತ್ತ ಭಾರತ ಪ್ರಮುಖ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿತವಾಗಿರುವ ರಾಜಕಾರಣಿಯೊಬ್ಬರು ಮಂಗಟ್ಟೆಹಕ್ಕಿಯ ಕೊಕ್ಕು , ಗರಿ ಇದ್ದ ಟೋಪಿ ಧರಿಸಿದ್ದು ಕಂಡುಬಂತು.  ಅಂತಹ, ಇವತ್ತಿನ ಕಾಲಕ್ಕೆ ಪ್ರಸ್ತುತವಲ್ಲದ ಸಂಪ್ರಾದಾಯವನ್ನು ಪ್ರೋತ್ಸಾಹಿಸುವಂತಹ ವರ್ತನೆ ಬೇಡವಾಗಿತ್ತು. ಅದು ಕೃತಕವಾದದ್ದೇ ಇರಬಹುದು .  ಆದರೆ ಅದು ನಿಜವಾದದ್ದೇ ಎಂದು ಭಾವಿಸುವ ಅಪಾಯವೂ ಇರುತ್ತದೆ. ಎಷ್ಟಾದರೂ ಒರಿಜಿನಲ್ ಗಿರುವ ಬೆಲೆ ಕೃತಕವಾದದ್ದಕ್ಕೆ ಇಲ್ಲವಲ್ಲ , ಪ್ರಸಿದ್ಧ ವ್ಯಕ್ತಿಗಳ ಇಂತಹ ವರ್ತನೆ ಕಳ್ಳ ಸಾಗಾಣಿಕೆದಾರರಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಅಷ್ಟೆ .

4 comments:

  1. ee maahiti gotte irlilla akka... nija intaha aacharaNegaLi kaDivaNa aakabeku

    ReplyDelete
  2. ಪುರಾತನ ಮಾನವ ಹಸಿವಿಗಾಗಿ ಭೆೇಟೆಯಾಡಿದ. ಕಾಲಾಂತರದಲ್ಲಿ ಅವನು ಅಲಂಕಾರ, ಕ್ರೀಡೆಗಾಗಿ ಅಥವಾ ತನ್ನ ಹುದ್ದೆಯ ತೋರ್ಪಡಿಕೆಗಾಗಿ ಕಣ್ಣಿಗೆ ಬಿದ್ದ ಚೆಂದದ ಪ್ರಾಣಿಗಳನ್ನೆಲ್ಲ ಕೊಳ್ಳುತ್ತಾರೆ ಬಂದ. ಇನ್ನಾದರೂ ಇರಗೊಡುವನೇ ಚರಾ ಚರಗಳ? ವ್ಯಥೆ ತುಂಬಿದ ಕಳಕಳಿಯ ಬರಹ.

    ReplyDelete
  3. ಓಹ್ ಧನ್ಯವಾದಗಳು ಮಾಹಿತಿಗಾಗಿ.....
    ಖಂಡಿತ ಕಾಲಕ್ಕೆ ತಕ್ಕ ಹಾಗೆ ಸಂಪ್ರದಾಯಗಳಲ್ಲೂ ಬದಲಾವಣೆ ಅಗತ್ಯ :)

    ReplyDelete
  4. ಮಂಗಟೆ ಹಕ್ಕಿಯ ಬಗೆಗಿನ ಮತ್ತೊಂದು ವಿಷಯ ತಿಳಿಯಿತು. ಥ್ಯಾಂಕ್ಸ್ ಸುಮ.

    ReplyDelete