04-Feb-2010

ಕೀಟಗಳಲ್ಲಿ ಪಾಲಿಮಾರ್ಫಿಸಮ್

ಇದು ಕೊಣಜದ(wasp) ಗೂಡು.

ಟೈಲರ್ ಇರುವೆಯ ಬಗ್ಗೆ ನಾನು ಬರೆದ ಲೇಖನವನ್ನು ಮೆಚ್ಚಿ ಅನೇಕರು ಕಮೆಂಟಿಸಿದ್ದಾರೆ . ಮುರ್ತಿ ಹೊಸಬಾಳೆಯವರು ಸಾಗರದ ಕಡೆ ಇದಕ್ಕೆ ಕೊಣಜ ಎಂದೂ ಹೇಳುತ್ತಾರೆ ಎಂದಿದ್ದರು . ಆದರೆ ಅದನ್ನು ಅಲ್ಲಗೆಳೆದಿರುವ ಮನಸ್ವಿಯವರು ಕೊಣಜ ಸಗಣಿ ಮತ್ತು ಮಣ್ಣನ್ನು ಉಪಯೋಗಿಸಿ ಗೂಡು ಕಟ್ಟುವುದಾಗಿ ತಿಳಿಸಿದ್ದರು. ಇದು ನಿಜ . ಸಗಣಿ, ಮಣ್ಣು , ಮರದ ಪುಲ್ಪ್ ಜೊತೆಗೆ ಅದರ ಜೊಲ್ಲುರಸವನ್ನು ಸೇರಿಸಿ ಇದು ಗೂಡು ಕಟ್ಟುತ್ತದೆ. ಅನೇಕ ಪರಾವಲಂಬಿ ಕೀಟಗಳನ್ನು ತಿಂದು ಇದು ಜೀವಿಸುವುದರಿಂದ ರೈತರಿಗೆ ತುಂಬ ಉಪಕಾರಿ . ನೈಸರ್ಗಿಕ ಕೀಟನಾಶಕ.



ವಸಂತ್ ಅವರು ಟೈಲರ್ ಇರುವೆಯ ಗೂಡಿಗಿರುವ ವಿಶಿಷ್ಠ ವಾಸನೆಯ ಬಗ್ಗೆ ಕೇಳಿದ್ದರು. ಅನೇಕ ಜಾತಿಯ ಇರುವೆಗಳನ್ನು ಹೊಸಕಿದಾಗ ವಿಶಿಷ್ಠವಾದ ವಾಸನೆ ಹೊರಹೊಮ್ಮುತ್ತದೆ. ಇದು ಅದರಲ್ಲಿ ತಯಾರಾಗುವ ಎಚ್ಚರಿಕೆ ನೀಡುವ ರಸಾಯನಿಕಗಳಿಂದ (ಅಲರಾಂ ಫೆರಾಮೋನ್) ಬರುವ ವಾಸನೆಯಾಗಿದೆ . ಇತರ ಇರುವೆಗಳಿಗೆ ಇದರಿಂದ ಅಪಾಯದ ಸೂಚನೆ ದೊರೆಯುತ್ತದೆ.



ಇನ್ನು ಪಾಲಚಂದ್ರ ಅವರು ಇರುವೆ , ಜೇನು ಮೊದಲಾದವುಗಳಲ್ಲಿರುವ ಪಾಲಿಮಾರ್ಫಿಸಂ ಅಥವಾ ಬಹುರೂಪಗಳ ಬಗ್ಗೆ ವಿವರಣೆ ಬಯಸಿದ್ದರು . ನನಗೆ ತಿಳಿದ ಮಟ್ಟಿಗೆ ವಿವರಿಸಲು ಯತ್ನಿಸುತ್ತೇನೆ.



ಗೆದ್ದಲು , ಇರುವೆ, ಜೇನು ಮತ್ತು ಕೊಣಜ (wasp)ಗಳನ್ನು social insect ಎಂದು ಹೇಳುತ್ತಾರೆ. ಒಂದೇ ಗುಂಪಿನಲ್ಲಿ ಅಥವಾ ಗೂಡಿನಲ್ಲಿ ವಿವಿಧ ರೀತಿಯ ಕೆಲಸ ನಿರ್ವಹಿಸುವ , ದೈಹಿಕವಾಗಿಯೂ ವಿಭಿನ್ನವಾಗಿರುವ ಜೀವಿಗಳು ಒಟ್ಟಾಗಿ ಜೀವಿಸುತ್ತವೆ. ಇವುಗಳ ಒಂದು ಗುಂಪಿನ ಸದಸ್ಯರ ಸಂಖ್ಯೆ ಲಕ್ಷಕ್ಕೂ ಮೀರಿಯೂ ಇರಬಹುದು. ಅಷ್ಟೊಂದು ಸಂಖ್ಯೆಯಲ್ಲಿದ್ದರೂ ಪ್ರತಿಯೊಂದು ಸದಸ್ಯನೂ ನಿರ್ದಿಷ್ಟವಾದ, ಸಮುದಾಯದ ಹಿತಕ್ಕಾಗಿಯೆ ಕಾರ್ಯ ನಿರ್ವಹಿಸುತ್ತವೆಯಾದ್ದರಿಂದ ಇವುಗಳನ್ನು ಸೋಶಿಯಲ್ ಇನ್ಸೆಕ್ಟ್ ಎನ್ನುತ್ತಾರೆ.

ಜೀವನಚಕ್ರದಲ್ಲಿ ಮೊಟ್ಟೆ , ಲಾರ್ವ , ನಿಂಫ್ , ಅಡಲ್ಟ್ ಎಂಬ ನಾಲ್ಕು ಹಂತಗಳಿವೆ.

ಇವುಗಳ ಒಂದು ಗುಂಪಿನಲ್ಲಿ ಮುಖ್ಯವಾಗಿ ೩ ಜಾತಿಯಿರುತ್ತದೆ. ಗುಂಪಿನ ಮುಖ್ಯಸ್ಥೆ ರಾಣಿ , ಗಂಡು ಮತ್ತು ಕೆಲಸಗಾರ . ಕೆಲವೊಂದು ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಎಲ್ಲ ಸೊಶಿಯಲ್ ಇನ್ಸೆಕ್ಟ್ ಗಳಲ್ಲಿ ಇವುಗಳ ರೀತಿ ನೀತಿಗಳು ಒಂದೇ ಆಗಿವೆ.
ರಾಣಿ :
ದೈಹಿಕವಾಗಿ ಇದು ಉಳಿದ ಸದಸ್ಯರಿಗಿಂತ ದೊಡ್ಡದಿರುತ್ತದೆ.
ಇದು ಮೊಟ್ಟೆಯಿಡುವ ಕಾರ್ಖಾನೆ. ತನ್ನ ಜೀವಿತಾವಧಿಯಲ್ಲಿ ಲಕ್ಷಾಂತರ ಮೊಟ್ಟೆಯಿಡುತ್ತವೆ .
ಒಂದು ಮರಿ ರಾಣಿಯಾಗಿ ಬೆಳೆಯುವುದು ಅದಕ್ಕೆ ಕೆಲಸಗಾರರು ನೀಡುವ ವಿಶಿಷ್ಠವಾದ ಆಹಾರದಿಂದ.
ತನ್ನ ಜೀವಿತಾವಧಿಯಲ್ಲಿ ಕೇವಲ ಒಂದೇ ಬಾರಿ ಗಂಡಿನೊಂದಿಗೆ ಮಿಲನಗೊಳ್ಳುವ ರಾಣಿ ಅದರ ವೀರ್ಯವನ್ನು ತನ್ನ ದೇಹದಲ್ಲಿನ ಚೀಲದಲ್ಲಿ ಸಂಗ್ರಹಿಸಿಟ್ಟುಕೊಂಡು ಮೊಟ್ಟೆಯಿಡುವಾಗ ಉಪಯೋಗಿಸುತ್ತದೆ.
ಮೊಟ್ಟೆಯಿಡುವುದು ಮತ್ತು ಕೆಲ ಹಾರ್ಮೋನುಗಳ ಮುಖಾಂತರ ಕೆಲಸಗಾರನ್ನು ನಿಯಂತ್ರಿಸುವುದು ಬಿಟ್ಟರೆ ಬೇರಾವ ಕೆಲಸವನ್ನೂ ರಾಣಿ ಮಾಡಾಲಾರದು . ಆಕೆ ಗೂಡನ್ನು ಬಿಟ್ಟು ಹೊರಬರುವುದು ಕೂಡಾ ಮಿಲನಕ್ರಿಯೆಗಾಗಿ ಮತ್ತು ಹೊಸ ಗೂಡು ಕಟ್ಟುವುದಕ್ಕಾಗಿಯಷ್ಟೆ.
ಜೇನು ಹುಳುಗಳಲ್ಲಿ ರಾಣಿಯ ಜೀವಿತಾವಧಿ ಆಕೆಯ ಮೊಟ್ಟೆಯಿಡುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಅದು ಸಂಗ್ರಹಿಸಿದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಂತೆ ಮೊಟ್ಟೆಯಿಡುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಆಗ ಅದನ್ನು ಉಳಿದ ಕೆಲಸಗಾರ ಹುಳುಗಳೇ ಸಾಯಿಸಲೂಬಹುದು.

ಗಂಡು :
ಒಂದು ಗುಂಪಿನಲ್ಲಿ ಕೆಲವೆ ಗಂಡು ಇರುತ್ತವೆ.
ಗುಂಪಿನ ಪರಮ ಸೋಮಾರಿ ಜೀವಿ.
ರಾಣಿಯ ಜೊತೆ ಒಂದೇ ಬಾರಿ ನಡೆಸುವ ಮಿಲನಕ್ರಿಯೆಯೆ ಇದರ ಜೀವನದ ಪರಮೋದ್ದೇಶ. ಅನೇಕ ಜಾತಿಯಲ್ಲಿ ಮಿಲದ ನಂತರ ಸತ್ತೇ ಹೋಗುತ್ತವೆ.
ಬೇರಾವುದೇ ಕೆಲಸವನ್ನೂ ಇದು ಮಾಡುವುದಿಲ್ಲ .

ಕೆಲಸಗಾರ:
ಗುಂಪಿನ ಆತ್ಯಂತ ಕ್ರಿಯಾಶೀಲ ಹೆಣ್ಣು ಜೀವಿ.
ನರ್ಸಿಂಗ್ , ಕ್ಲೀನಿಂಗ್ , ಗೂಡುಕಟ್ಟುವುದು , ರಕ್ಷಣೆ , ಆಹಾರ ಸಂಗ್ರಹಣೆ , ಮೊದಲಾದ ಎಲ್ಲ ಜವಾಬ್ದಾರಿ ಇವುಗಳದ್ದು .
ಲೈಂಗಿಕ ಸಾಮರ್ಥ್ಯವಿಲ್ಲ.
ಅದರ ಕೆಲಸಗಳಿಗೆ ಅನುಕೂಲವಾಗುವಂತೆಯೆ ಅದರ ದೇಹರಚನೆಯಿರುತ್ತದೆ.
ಅಡಲ್ಟ್ ಆಗಿ ಬೆಳೆದ ಪ್ರಥಮ ದಿನದಿಂದಲೇ ಅದರ ಕೆಲಸಗಳು ಪ್ರಾರಂಭಾವಾಗುತ್ತವೆ. ಮೊದಲ ಕೆಲ ದಿನಗಳು ಮೊಟ್ಟೆ ಮರಿಗಳನ್ನು ನೋಡಿಕೊಳ್ಳುವುದು ಅವಕ್ಕೆ ಆಹಾರ ನೀಡುವ ಕೆಲಸ ಮಾಡುತ್ತವೆ . ನಂತರ ಗೂಡಿನ ಸ್ವಚ್ಛತೆ ,ಗೂಡು ನಿರ್ಮಿಸುವುದು ಮೊದಲಾದ ಕೆಲಸ ಮಾಡುತ್ತವೆ . ಸ್ವಲ್ಪ ದಿನಗಳಾದ ಮೇಲೆ ಗೂಡಿನ ರಕ್ಷಣೆ ಮಾಡುತ್ತವೆ . ನಂತರ ಆಹಾರ ಸಂಗ್ರಹಿಸಲು ಹೊರಹೋಗುತ್ತವೆ. ಹೀಗೆ ವಯಸ್ಸಿಗೆ ತಕ್ಕಂತೆ ಕೆಲಸದ ಹಂಚಿಕೆ ನಡೆಯುತ್ತದೆ.
ಯಾವುದೋ ಕಾರಣದಿಂದ ರಾಣಿ ಇಲ್ಲವಾದರೆ ತಕ್ಷಣ ಮರಿಗೆ ರಾಯಲ್ ಫುಡ್ ನೀಡಿ ರಾಣಿಯನ್ನು ತಯಾರು ಮಾಡುತ್ತವೆ.
ವೈರಿಗಳಿಂದ ಗೂಡಿಗೆ ತೊಂದರೆಯುಂಟಾದಾಗ ತಮ್ಮನ್ನು ಬಲಿಕೊಟ್ಟಾದರೂ ಮೊಟ್ಟೆ ಮರಿಗಳನ್ನು , ರಾಣಿಯನ್ನು ರಕ್ಷಿಸಲು ಪ್ರಯತ್ನಿಸುತ್ತವೆ.
ಬಹುಶಃ ಮಾನವನಿಗೆ ವಾಸಕ್ಕಾಗಿ ಮನೆ ನಿರ್ಮಿಸಿಕೊಳ್ಳುವ ಯೋಚನೆ ಬರುವುದಕ್ಕಿಂತಲೂ ಎಷ್ಟೋ ವರ್ಷ ಮೊದಲೇ ಈ ಕೀಟಗಳು ತಮಗಾಗಿ ಸುಂದರ ಗೂಡು ಕಟ್ಟಲು ಕಲಿತಿವೆ. ಗೂಡಿನ ಉಷ್ಣತೆಯನ್ನು ನಿಯಂತ್ರಿಸುವ ವಿಧಾನ ತಿಳಿದಿದೆ . ಜೇನಿನ ಗೂಡಿನಲ್ಲಿ ಕೆಲಸಗಾರ ಹುಳುಗಳು ತಮ್ಮ ರೆಕ್ಕೆ ಬೀಸುವುದರಿಂದ ಉಷ್ಣತೆಯನ್ನು ನಿಯಂತ್ರಿಸುತ್ತವೆ!!
ಸಮುದಾಯಕ್ಕಾಗಿ ಆಹಾರ ಸಂಗ್ರಹಿಸುವುದು , ಅವುಗಳನ್ನು ಕಾಯ್ದಿಡುವುದನ್ನು ಅರಿತಿವೆ. ಅನೇಕ ಇರುವೆಗಳು, ಗೆದ್ದಲುಗಳು ತಮ್ಮ ಗೂಡಿನಲ್ಲಿ ಆಹಾರಕ್ಕಾಗಿ ಶಿಲೀಂದ್ರಗಳನ್ನು ಬೆಳೆಸುತ್ತವೆ.

ಪ್ರಕೃತಿಯಲ್ಲಿ ತನ್ನ ಉಳಿವಿಗಾಗಿ ಪ್ರತಿಯೊಂದು ಜೀವಿಯು ಅನೇಕ ರೀತಿಯಲ್ಲಿ ಹೋರಾಟ ನಡೆಸುತ್ತದೆ . ಇಂತಹ ಹೋರಾಟವೇ ಬಹುಶಃ ಈ ಕೀಟಗಳ ಸಂಘಜೀವನಕ್ಕೆ ಕಾರಣವಿರಬಹುದು.

27-Jan-2010

ಸುಧಾರಿಸಬೇಕಾಗಿರುವ ದೂರ-ಶಿಕ್ಷಣ ವ್ಯವಸ್ಥೆ

ಆಮೀರ್ ಖಾನ್ ಸಿನೆಮಾ "ತ್ರೀ ಈಡಿಯಟ್ಸ್"....ಗಂಭೀರವಾದ ವಿಷಯವೊಂದನ್ನು ತಿಳಿಹಾಸ್ಯದೊಂದಿಗೆ ನಿರೂಪಿಸಿದೆ . ನಮ್ಮ ಶಿಕ್ಷಣವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿತೋರಿಸಿದೆ. ಇತ್ತೀಚೆಗೆ ಈ ಸಿನೆಮಾ ನೋಡುತ್ತಿದ್ದಾಗ , ನಾನು ದೂರಶಿಕ್ಷಣ(corespondence)ದಲ್ಲಿ ಎಮ್ ಎಸ್ಸಿ ಮಾಡುವಾಗ ಕಾಡಿದ ಕೆಲ ವಿಚಾರಗಳು ಪುನಃ ನೆನಪಾಯಿತು.
ಈಗ ಎಲ್ಲಾ ವಿಶ್ವವಿದ್ಯಾಲಯಗಳೂ ದೂರ-ಶಿಕ್ಷಣದ ಮುಖಾಂತರ ಅನೇಕ ವಿಧದ ಡಿಗ್ರಿ , ಡಿಪ್ಲೊಮಾ ಕೋರ್ಸ್ ನಡೆಸುತ್ತಿವೆ.
ಇದು ಅನೇಕರಿಗೆ ವರದಾನವಾಗಿದೆ. ಕೆಲಸ ಮಾಡುತ್ತಲೇ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಗಳಿಸಬಹುದು . ಕಾರಣಾಂತರಗಳಿಂದ ಮಧ್ಯದಲ್ಲೇ ಓದು ಬಿಟ್ಟವರು ಮುಂದುವರೆಸಿ , ಆತ್ಮವಿಶ್ವಾಸ ಉದ್ಯೋಗ ಗಳಿಸಿಕೊಳ್ಳಬಹುದು.
ಇವೆಲ್ಲ ದೂರ-ಶಿಕ್ಷಣದ ಒಂದು ಮುಖ . ಇನ್ನೊಂದು ಮುಖ ಆತಂಕ ಹುಟ್ಟಿಸುವಂತಿದೆ.
ಆರ್ಟ್ಸ್ , ಕಾಮರ್ಸ್ ನಂತಹ ವಿಷಯಗಳಾದರೆ ಪರವಾಗಿಲ್ಲ . ಆದರೆ ವಿಜ್ಞಾನದ ವಿಷಯಗಳಾದ ಭೌತಶಾಸ್ತ್ರ , ರಸಾಯನಶಾಸ್ತ್ರ , ಜೀವಶಾಸ್ತ್ರ, ಬಯೋಟೆಕ್ನಾಲಜಿ , ಮೊದಲಾದವುಗಳನ್ನು ದೂರಶಿಕ್ಷಣದ ಮುಖಾಂತರ ಕಲಿಯುವುದು , ಕಲಿಸುವುದು ಕಷ್ಟ. ಈ ವಿಷಯಗಳಿಗೆ ಥಿಯರಿಯಷ್ಟೇ ಅಲ್ಲ , ಪ್ರಾಕ್ಟಿಕಲ್ ಜ್ಞಾನವೂ ತುಂಬ ಮುಖ್ಯವಾದುದು. ವಿದ್ಯಾರ್ಥಿಗಳು ಪ್ರಯೋಗ ಮಾಡಿ ನೋಡಿಯೆ ಎಷ್ಟೋ ಥಿಯರಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಈ ದೂರ -ಶಿಕ್ಷಣ ಪದ್ದತಿಯಲ್ಲಿ ವಿಶ್ವವಿದ್ಯಾಲಯಕ್ಕೆ ನೇರವಾಗಿ ಅಥವಾ ಆಯಾ ಊರುಗಳಲ್ಲಿರುವ ಸ್ಟಡಿ ಸೆಂಟರ್ ಗಳ ಮೂಲಕ ಫೀಸ್ ಕಟ್ಟಿ , ಅವರು ಕಳಿಸುವ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯಬೇಕು. ಸ್ಟಡಿ ಸೆಂಟರ್ ನವರು ವರ್ಷದ ಕೊನೆಯಲ್ಲಿ ನಡೆಸುವ ಕೆಲವೇ ಘಂಟೆಗಳ ಥಿಯರಿ ತರಗತಿಗಳಿಗೆ ಹಾಜರಾಗದಿದ್ದರೂ ನಡೆಯುತ್ತದೆ. ಪ್ರಾಕ್ಟಿಕಲ್ಸ್ ನಲ್ಲಿ ಸುಲಭಸಾಧ್ಯವಾದ ಕೆಲ ಪ್ರಯೋಗಗಳನ್ನಷ್ಟೇ ಮಾಡಿಸಿ , ನಂತರ ಅದನ್ನೇ ಪರೀಕ್ಷೆಗೂ ಕೊಟ್ಟು ಮುಗಿಸುತ್ತಾರೆ.

ಅನೇಕ ಶಿಕ್ಷಕರು ಪ್ರಮೋಶನ್ ಗಾಗಿ ಇಂತಹ ಪದವಿ ಪಡೆಯುತ್ತಾರೆ. ಹೆಚ್ಚಿನವರಿಗೆ ಪದವಿಪತ್ರ ಪಡೆಯುವುದಷ್ಟೇ ಗುರಿ . ಹೇಗೋ ೫೨% ನಷ್ಟು ಅಂಕ ಗಳಿಸಿದರೆ ಭಡ್ತಿ ಸಲೀಸು.
ಪರೀಕ್ಷೆಗಳು ನಡೆಯುವ ಚೆಂದ ನೋಡಬೇಕು . ಚೀಟಿಗಳು ಹರಿದಾಡುವುದು , ಉತ್ತರಪತ್ರಿಕೆಯೇ ಹರಿದಾಡುವುದು ಮಾಮೂಲು . ಕಷ್ಟಪಟ್ಟು ಓದಿ ಬರೆಯುವವರೇ ನಾಚಬೇಕು . ಅನೇಕ ಕೇಂದ್ರಗಳಲ್ಲಿ ಸ್ಟಡಿ ಸೆಂಟರ್ ನವರೆ ಸಾಮೂಹಿಕವಾಗಿ ನಕಲು ಮಾಡಿಸುತ್ತಾರಂತೆ. ನಾನು ಓದಿದ ಸೆಂಟರ್ ಹೀಗೆ ಮಾಡಿಸಲಿಲ್ಲವೆಂದು ಬೇಸರ ಪಟ್ಟುಕೊಂಡ ಶಿಕ್ಷಕರೊಬ್ಬರು ಮರುವರ್ಷ ಗುಲ್ಬರ್ಗದ ಯಾವುದೋ ಸೆಂಟರ್ ನಿಂದ ಎಮ್ ಎಸ್ಸಿಯ ಎರಡೂ ವರ್ಷದ ಪರೀಕ್ಷೆ ಒಟ್ಟಿಗೇ ಬರೆದು ಪಾಸಾದರು!!

ಹೀಗೆ ಬರೆದು ಪದವಿ ಗಳಿಸಿದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಹೇಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಬಲ್ಲರು? ಕೇವಲ ಪರೀಕ್ಷಾದೃಷ್ಟಿಯಿಂದಷ್ಟೇ ಪಾಠ ಮಾಡಬಲ್ಲರು.

ಈಗಾಗಲೇ ನಮ್ಮ ಯುವಜನತೆಗೆ pure scince ನ ಬಗ್ಗೆ ಆಸಕ್ತಿ ಕುಂದಿದೆ. ವೃತ್ತಿಪರ ಕೋರ್ಸ್ ಗಳನ್ನು ಮಾಡಿ ಹೆಚ್ಚು ಹೆಚ್ಚು ದುಡಿಯುವುದಷ್ಟೇ ಮುಖ್ಯವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ತುಂಬ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಕುತೂಹಲ ಕೆರಳಿಸಿ ಹೆಚ್ಚಿನ ಸಾಧನೆಗೆ ಪ್ರೇರೇಪಿಸುವ ಹೊಣೆ ಶಿಕ್ಷಕರ ಮೇಲಿದೆ.
ಆದ್ದರಿಂದ ಶಿಕ್ಷಕರಾಗುವವರ ಶಿಕ್ಷಣದ ಗುಣಮಟ್ಟವೂ ಸರಿಯಾಗಿರುವುದು ತುಂಬ ಅವಶ್ಯಕ. ದುಡ್ಡಿಗಾಗಿ ಪದವಿ ಮಾರಿಕೊಳ್ಳುವ ಕೆಲಸವನ್ನು ವಿಶ್ವವಿದ್ಯಾಲಯಗಳು ನಿಲ್ಲಿಸಬೇಕಾಗಿದೆ.
ಹಾಗೆಂದು ನಾನು ದೂರಶಿಕ್ಷಣವೇ ಬೇಡವೆಂದು ಹೇಳುತ್ತಿಲ್ಲ . ಆದರೆ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಂತು ಖಂಡಿತಾ ಇದೆ. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಣತಜ್ಞರೂ ಯೋಚಿಸಬೇಕು.

20-Jan-2010

ಟೈಲರ್ ಇರುವೆ !!

"ಅಯ್ಯಪ್ಪ ಆ ಮರ ಮತ್ರ ನಾನು ಹತ್ತದಿಲ್ಲೆ.... ಅದರ ತುಂಬ ಚಿಗಳಿ ಕೊಟ್ಟೆ ಇದ್ದು ಗೊತ್ತಾ!! " ತೋಟದ ಬಳಿ ಇಂಚರಳ ಪುಟ್ಟ ಗೆಳೆಯ ಹೇಳುತ್ತಿದ್ದ .
ಚಿಗಳಿ ಕಚ್ಚುವುದರ ಅನುಭವವಿಲ್ಲದ ಇವಳು ... "ಏ ಹೋಗೊ ಸಾಕು , ಆ ಇರುವೆಗೆ ಹೆದರ‍್ತ್ಯಲೋ .. ಸುಮ್ನೆ ಹತ್ತಿ ಪುನ್ನೇರಲ ಹಣ್ಣು ಕೊಯ್ಯಿ.." ಎಂದು ದಬಾಯಿಸುತ್ತಿದ್ದಳು.

ಅವನೇನೂ ಸುಮ್ಮನಿರುವ ಅಸಾಮಿಯೇನಲ್ಲ "ಹೆದರದು ಯಾಕೆ ತೋರಿಸ್ತಿ ತಡಿ " ಎಂದು ಇರುವೆಗಳಿದ್ದ ಎಲೆಯನ್ನು ಕಿತ್ತು ಅವಳ ಮೈಮೇಲೆಸೆದ . ಕೊಡವಿಕೊಂಡಳಾದರೂ ಉಳಿದ ಒಂದೆರಡು ಇರುವೆಗಳು ಕಚ್ಚಿದಾಗ ಮಗಳು ಅಲ್ಲೇ ಇದ್ದ ನನ್ನ ಬಳಿ ಓಡಿ ಬಂದಳು . " ಇದೆಂತಾ ಉರಿ ಅಮ್ಮಾ ಅದು ಹ್ಯಾಗೆ ಇಷ್ಟು ಉರಿಯಾಗುವ ಹಾಗೆ ಕಚ್ಚುತ್ತೆ? ....’ ಅವಳ ತನಿಖೆ ಪ್ರಾರಂಭವಾಯಿತು.


ಬೇರೆ ಇರುವೆಗಳಂತೆ ಈ ಕೆಂಜಿರುವೆ ಅಥವ ಚಿಗಳಿಗೆ ಸ್ಟಿಂಗ್ ಇರುವುದಿಲ್ಲ . ಅದು ಕಚ್ಚಿದ ಜಾಗದಲ್ಲಿ "ಫಾರ್ಮಿಕ್ ಆಸಿಡ್ " ಸ್ರವಿಸುವುದರಿಂದ ಹೆಚ್ಚಿನ ಉರಿಯಾಗುತ್ತದೆ.


ಅವಳಿಗೆ ಅಲ್ಲೇ ಬಳಿಯಲ್ಲಿದ್ದ ಆ ಇರುವೆಯ ಗೂಡನ್ನು ತೋರಿಸಿದೆ . ಅದನ್ನು ನೋಡಿ ತನ್ನ ದೊಡ್ಡ ಕಣ್ಣುಗಳನ್ನು ಇನ್ನಷ್ಟು ದೊಡ್ಡದು ಮಾಡಿಕೊಂಡು "ಈ ಚಿಕ್ಕ ಜೀವಿ ಹ್ಯಾಗೆ ಇಷ್ಟು ದೊಡ್ಡ ಗೂಡು ಕಟ್ಟುತ್ತಮ್ಮ? ನಾವಿಷ್ಟು ದೊಡ್ಡ ಇದ್ದರು ನಮಗೆ ಆಟ ಆಡಲು ಮನೆ ಕಟ್ಟೋಣವೆಂದರೆ ಬರಲಿಲ್ಲವಲ್ಲ?" ಎಂದಳು.


ಟೈಲರ್ ಅಥವಾ ವೀವರ್ ಇರುವೆ ಎಂಬ ಅನ್ವರ್ಥನಾಮವಿರುವ ಈ ಇರುವೆಗಳು ಹನ್ನೆರಡುಸಾವಿರಕ್ಕೂ ಹೆಚ್ಚಿರುವ ಇರುವೆಗಳ ಜಾತಿಯಲ್ಲೆ ಬೇರಾವ ಇರುವೆಗಳೂ ರಚಿಸದ ಅತೀ ವಿಶಿಷ್ಟವಾದ ಗೂಡನ್ನು ನಿರ್ಮಿಸುತ್ತವೆ.




ಎಲ್ಲ ಇರುವೆಗಳಂತೆಯೆ ಸಂಘಜೀವಿಗಳಾದ ಈ ಚಿಗಳಿಗಳ ಒಂದು ಗುಂಪಿನಲ್ಲಿ - ಒಂದೆರಡು ರಾಣಿ ಯರು , ಕೆಲವು ಗಂಡು ಮತ್ತು ಲಕ್ಷಗಟ್ಟಲೆ ಹಿರಿ ,ಕಿರಿಯ ಕೆಲಸಗಾರ ಇರುವೆಗಳಿರುತ್ತವೆ.
ಮೊಟ್ಟೇಯಿಡುವುದಷ್ಟೇ ರಾಣಿಯ ಕೆಲಸ.
ಗೂಡು ಕಟ್ಟುವುದು , ಆಹಾರ ತರುವುದು , ವೈರಿಗಳಿಂದ ಗೂಡನ್ನು ರಕ್ಷಿಸುವುದು ಮೊದಲಾದ ಕೆಲಸಗಳು ಹಿರಿಯ ಕೆಲಸಗಾರರದು.

ಮೊಟ್ಟೆಗಳು ,ಮರಿಗಳನ್ನು ಪೋಷಿಸುವುದು ರಾಣಿಗೆ ಆಹಾರ ನೀಡುವುದು , ಗೂಡನ್ನು ಸ್ವಚ್ಛಗೊಳಿಸುವುದು ಮೊದಲಾದ ಕೆಲಸಗಳು ಕಿರಿಯ ಕೆಲಸಗಾರ ಇರುವೆಗಳದು.

ಹೆಚ್ಚಾಗಿ ಮರ ಗಿಡಗಳ ಮೇಲೆ ವಾಸಿಸುವ ಇವುಗಳ ಆಹಾರ ಸಸ್ಯಗಳು ಮತ್ತು ಕೆಲ ಕೀಟಗಳು ಸ್ರವಿಸುವ ಸಿಹಿದ್ರವ , ಚಿಕ್ಕ ಪುಟ್ಟ ಕೀಟಗಳು ಇತ್ಯಾದಿ.

ಸಾವಿರಾರು ಇರುವೆಗಳು ಕೂಡಿ ಜೀವಂತ ಎಲೆಗಳಿಂದ ಗೂಡು ಕಟ್ಟುವ ಪರಿ ನಿಜಕ್ಕೂ ಅನನ್ಯ. ದೃಡವಾದ ಎಲೆಗಳನ್ನು ಆಯ್ದುಕೊಂಡು ಅವುಗಳನ್ನು ಸೇರಿಸಿ ಗೂಡು ಕಟ್ಟುತ್ತವೆ.

ಮೊದಲಿಗೆ ಎಲೆಯ ಅಂಚಿನುದ್ದಕ್ಕೂ ಸಾಲಾಗಿ ಸೇರುವ ಇರುವೆಗಳು ತಮ್ಮ ಶಕ್ತಿಯನ್ನು ಪ್ರಯೋಗಿಸಿ ಆ ಎಲೆಯನ್ನು ಬೇಕಾದ ಹಾಗೆ ಬಾಗಿಸುತ್ತವೆ. ಒಂದು ಇರುವೆ ಮರಿ(ಲಾರ್ವ)ಯನ್ನು ಹಿಡಿದು ಮೃದುವಾಗಿ ತಟ್ಟುತ್ತದೆ ಆಗ ಆ ಮರಿ ಸ್ರವಿಸುವ ಸಿಲ್ಕ್ ನಿಂದ ಎರಡು ಎಲೆಗಳ ಅಂಚನ್ನು ಜೋಡಿಸುತ್ತವೆ. ಹೀಗೆ ಅನೇಕ ಎಲೆಗಳನ್ನು ಬಳಸಿ ದೊಡ್ದ ಗೂಡನ್ನು ಸಹ ನಿರ್ಮಿಸಬಲ್ಲವು.

ಲಾರ್ವ್ ಸ್ರವಿಸುವ ಸಿಲ್ಕ್ ನಿಂದ ಎಲೆಗಳನ್ನು ಜೋಡಿಸಿರುವುದು
ಈ ರೀತಿಯ ಕ್ಲಿಷ್ಟ ಕಾರ್ಯವನ್ನು ಕರಾರುವಕ್ಕಾಗಿ ಸಾಂಘಿಕವಾಗಿ ನಿರ್ವಹಿಸಲು ಸಾಧ್ಯವಾಗುವುದು ಕೆಮಿಕಲ್ ಮೆಸೆಂಜರ್ ಗಳಾದ ಹಾರ್ಮೋನ್ ಗಳಿಂದ. ಇವುಗಳ ಈ ಗುಣವೀಗ ರೊಬೊಟಿಕ್ ವಿಜ್ಞಾನಿಗಳ ಗಮನ ಸೆಳೆದಿದೆ , ಇದೇ ತತ್ವವನ್ನಾಧರಿಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ರೊಬೊಟ್ ರಚಿಸುವದರಲ್ಲಿದ್ದಾರಂತೆ
"ಅಮ್ಮ ಅದೆಲ್ಲಾ ಸರಿ ಆದರೆ ಈ ಮರಕ್ಕೆ ಅದರಿಂದ ತೊಂದರೆಯಲ್ವಾ" ಮಗಳ ಪ್ರಶ್ನೆ ತಾಯಾರಿತ್ತು.
ಹಾಗನ್ನಿಸುತ್ತದೆ ನಿಜ ಆದರೆ ಅದರಿಂದ ಉಪಯೋಗವೇ ಹೆಚ್ಚು. ಸಸ್ಯಗಳನ್ನು ಬಾಧಿಸುವ ಕೆಲ ಕೀಟಗಳನ್ನು ಇದು ತಿನ್ನುತ್ತದೆ. ಅಲ್ಲದೆ ಇವುಗಳ ಭಯದಿಂದ ಸೊಪ್ಪು ತಿನ್ನುವ ಸಸ್ತನಿಗಳೂ ಇವಿರುವ ಮರಗಿಡಗಳ ಬಳಿ ಸುಳಿಯುವುದಿಲ್ಲ.

ಆದ್ದರಿಂದಲೇ ಪುರಾತನ ಚೀನೀಯರು ತಮ್ಮ ತೋಟದಲ್ಲಿ ಈ ಇರುವಗೆಳ ಬೆಳವಣಿಗೆಗೆ ಸಹಕರಿಸುತ್ತಿದ್ದರಂತೆ. ಈಗಲೂ ಸಹ ಕೆಲವು ಕಡೆ ಇವುಗಳನ್ನು ನೈಸರ್ಗಿಕ ಕೀಟನಾಶಕಗಳಂತೆ ಬಳಸುತ್ತಾರಂತೆ.
ಅನೇಕ ಕಡೆಗಳಲ್ಲಿ ಈ ಇರುವೆ ಮತ್ತು ಇವುಗಳ ಮೊಟ್ಟೆಗಳಾನ್ನು ಆಹಾರವಾಗಿಯೂ ಬಳಸುತ್ತಾರೆ.
ಆದರೆ ಕೆಲವು ಸಸ್ಯಗಳಿಗೆ ಇವು ಮಾರಕವೂ ಹೌದು. "ಎಪಿಡ್ " ಎಂಬ ಸಸ್ಯರಸವನ್ನು ಹೀರುವ ಪರಾವಲಂಬಿ ಕೀಟಗಳೊಡನೆ ಈ ಟೈಲರ್ ಇರುವೆಗಳಿಗೆ ಗೆಳೆತನವಿದೆ. ಎಪಿಡ್ ಗಳು ಸ್ರವಿಸುವ ಸಿಹಿದ್ರವ ಇವುಗಳಿಗೆ ತುಂಬ ಪ್ರಿಯವಾದ ಸತ್ವಯುತ ಆಹಾರ. ಬದಲಿಗೆ ಇವು ಆ ಕೀಟಗಳನ್ನು ಅವುಗಳ ನೈಸರ್ಗಿಕ ವೈರಿಗಳಿಂದ ರಕ್ಷಿಸಿ ಅವುಗಳ ಸಂಖ್ಯೆ ಹೆಚ್ಚಿಸುತ್ತವೆ. ಇದು ಆ ಸಸ್ಯಕ್ಕೆ ಮಾರಕವಾಗುತ್ತದೆ.


ಇರುವೆ , ಜೇನುಹುಳು , ಗೆದ್ದಲು ಮುಂತಾದ ಕೀಟಗಳ ಸಾಂಘಿಕ ಜೀವನಕ್ರಮ ,ಶಿಸ್ತು , ಸಾಮುದಾಯಿಕ ಹಿತಚಿಂತನೆ , ಗೂಡು ನಿರ್ಮಿಸುವ ಕೌಶಲ , ಮರಿಗಳ ಪೋಷಣೆಯಲ್ಲಿ ತೋರುವ ಜವಾಬ್ದಾರಿ - ನಾವೇ ದೊಡ್ಡ ಸಂಘಜೀವಿಗಳು, ನಾಗರೀಕರು ಎಂದು ಜಂಬ ಪಡುವ ಮಾನವರಿಗೆ ಬುದ್ಧಿಹೇಳುವಂತಿದೆ.








14-Jan-2010

ಕಾಲ


ನಿನ್ನೆ .....
ಮಹಾಕಾವ್ಯಗಳ ಸಾಲುಗಳನ್ನೇ ಉದಾಹರಿಸುತ್ತ
ಅನೇಕರ ಗೊಂದಲಗಳನ್ನು ಪರಿಹರಿಸುತ್ತ
ಮೊಮ್ಮಕ್ಕಳ ನಡುವೆ ನಲಿಯುತ್ತ
ಜೀವಂತಿಕೆಯೇ ಮೂರ್ತಿವೆತ್ತಂತ್ತಿದ್ದವರು
ಇಂದು ....
ಸದ್ದಿಲ್ಲದೇ ಮಾತು ಬಾರದವರಂತೆ ಮಲಗಿದ್ದಾರೆ
ಹೃದಯಕ್ಕೆ ಸುಸ್ತಾಗಿದೆ ವೈದ್ಯರೆನೋ ಹೇಳುತ್ತಾರೆ
ನಿನಗೊಂದು ನೆಪ ಬೇಕಿದೆ ಅಷ್ಟೇ
ನಿನ್ನ ಶಕ್ತಿಗೆ ಸಮನಾರು?
ಎಂತಹ ವ್ಯಕ್ತಿತ್ವವನ್ನೂ ಮಸುಕಾಗಿಸಬಲ್ಲೆ
ಸೂರ್ಯನನ್ನೇ ಮರೆಮಾಚುವ ಮೋಡದಂತೆ
ಇರಬಹುದು ನಮ್ಮಲ್ಲಿ ವಿಜ್ಞಾನ , ತಂತ್ರಜ್ಞಾನ , ದುಡ್ಡು ಕಾಸು
ತರಲಾದೀತೆ ಸಂದ ಕಾಲವನ್ನು ವಾಪಸು?

04-Jan-2010

ಕೊಡಚಾದ್ರಿ - ಪ್ರಕೃತಿಕಾವ್ಯ

ಕೊಡಚಾದ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಶ್ಚಿಮ ಘಟ್ಟಗಳ ನಡುವೆಯಿದೆ. ನನ್ನವರ ತವರೂರು ನಿಟ್ಟೂರಿಗೆ ಕೇವಲ ೧೫ ಕಿಮಿ ದೂರದಲ್ಲಿದ್ದರೂ ,ಮದುವೆಯಾಗಿ ೧೨ ವರ್ಷಗಳಾದರೂ ಕೊಡಚಾದ್ರಿಗೆ ಚಾರಣ ಮಾಡಬೇಕು ಎಂಬ ಆಸೆ ನೆರವೆರಿರಲಿಲ್ಲ . ಮೊನ್ನೆ ಅಂತೂ ಆ ಅಸೆ ನೆರವೇರಿತು.

ಕೊಡಚಾದ್ರಿಗೆ ಚಾರಣ ಮಾಡಬಯಸುವವರಿಗೆ ಎರಡುs ಮೂರು ದಾರಿಯಿದೆ . ನಾವು ನಾಗೂಡಿ ಗ್ರಾಮದb ಮೂಲಕ ಬೆಟ್ಟದ ಬುಡ ತಲುಪಿ ಅಲ್ಲಿಂದ ಚಾರಣ ಪ್ರಾರಂಭಿಸಿದೆವು. ಅದಲ್ಲದೆ ಜೀಪಿನಲ್ಲಿ ಕೂಡ ಕೊಡಚಾದ್ರಿ ತಲುಪಬಹುದು.

ಚಾರಣದ ಹಾದಿಯಲ್ಲಿ


ಕೆಲವೊಮ್ಮೆ ದಟ್ಟ್ಟ ಕಾಡು , ಕೆಲವೊಮ್ಮೆ ಹುಲ್ಲುಗಾವಲಿನಂತಹ ಬೆಟ್ಟಗಳ ನಡುವೆ ಸಾಗುವ ಕಾಲುದಾರಿಯಲ್ಲಿ ಸಾಗುವಾಗ ಆಗುವ ದಿವ್ಯ ಅನುಭೂತಿಯನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ . ಆಕಾಶಕ್ಕೆ ಚಾಚಿದಂತೆ ಇರುವ ಮರಗಳು , ಅವುಗಳನ್ನಶ್ರಯಿಸಿ ಬೆಳೆದಿರುವ ಪರಾವಲಂಬಿ ಸಸ್ಯಗಳು , ಸುಂದರ ಕಾಡು ಹೂಗಳು , ಪಕ್ಷಿಗಳ ಇಂಚರ , ಎಲ್ಲದರ ಜೊತೆಗೆ ಎಲ್ಲಾದರೂ ಕಾಡು ಪ್ರಾಣಿಗಳು ಎದುರಾದರೆ ಎಂಬ ಭಯ ......ಒಹ್ ಬಿಡಿ ......ಕುವೆಂಪು , ಕಾರಂತರ ..ಕಾಡಿನ ವರ್ಣನೆಯ ಸಾಕ್ಷಾತ್ಕಾರವಾಯಿತು .

ಪಶ್ಚಿಮ ಘಟ್ಟ ಸಾಲು

ಕೊಡಚಾದ್ರಿ ಸಮುದ್ರ ಮಟ್ಟದಿಂದ ಸುಮಾರು ೧೩೦೦ ಅಡಿಗಳಷ್ಟು ಎತ್ತರದಲ್ಲಿದೆ. ದಾರಿಯಲ್ಲಿ ಸಾಗುವಾಗ ೧೫ - ೨೦ ವರ್ಷಗಳ ಹಿಂದೆ ದಟ್ಟ್ಟ ಕಾಡು , ಪ್ರಾಣಿ ಪಕ್ಷಿಗಳು , ದಾರಿಯಲ್ಲೇ ಎದುರಾಗುತ್ತಿದ್ದ ನೀರಿನ ತೊರೆಗಳು ಈಗಿಲ್ಲವೆಂದು ನನ್ನವರು ಬೇಸರ ಪಟ್ಟುಕೊಂಡರು. ಪ್ರಪಂಚದ ಎಂಟು ಅತಿ ಮುಖ್ಯ ಜೈವಿಕ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಈ ಪಶ್ಚಿಮ ಘಟ್ಟಗಳ ಭವಿಷ್ಯ ಹೇಗಿದೆಯೋ?



ಕಾಡುಕೋಣ ಇಲ್ಲಿ ಕುಳಿತಿತ್ತೋ ಏನೋ!!!


ಚಾರಣದ ನಡುವೆ ವಿರಾಮ



ಕಾಡು ಕುಸುಮ



ಬೃಹದಾಕಾರದ ಮರಗಳು

ಸುಮಾರು ಎರಡು ಘಂಟೆಗಳ ಪ್ರಯಾಣದ ನಂತರ ನಾವು ಕೊಡಚಾದ್ರಿಯಾ ದೇವಸ್ಥಾನವನ್ನು ತಲುಪಿದೆವು. ಕೊಲ್ಲೂರು ಮೂಕಾಂಬಿಕೆಯ ಮೂಲ ಇದೆ ಎಂದು ಭಟ್ಟರು ಕೊಲ್ಲೂರಿನಿಂದ ಬಂದ ಭಕ್ತರಿಗೆ ಹೇಳುತ್ತಿದ್ದರು .

ಭಟ್ಟರ ಮನೆಯಲ್ಲಿ ಊಟ ಮುಗಿಸಿ 'ಸರ್ವಜ್ಞ ಪೀಠ' ನೋಡಲು ಹೊರಟೆವು.


ಸರ್ವಜ್ಞ ಪೀಠಕ್ಕೆ ದಾರಿ

ಪಕ್ಕದಲ್ಲಿ ಕಣ್ಣಿಗೆ ಕಾಣದಷ್ಟು ಆಳದ ಪ್ರಪಾತ , ಉರಿವ ಬಿಸಿಲಿನ ಜೊತೆ ಇಕ್ಕಟ್ಟಾದ ದಾರಿಯಲ್ಲಿ ಬೆಟ್ಟವನ್ನು ಏರುವಾಗ ಉಸಿರು ಸಿಕ್ಕಿಹಾಕಿಕೊಂಡ ಅನುಭವ. ಶಂಕರಾಚಾರ್ಯರು ಇಲ್ಲಿ ತಪಸ್ಸು ಮಾಡಿದ್ದರೆಂಬ ಪ್ರತೀತಿಯಿದೆ. ಸಾವಿರಾರು ವರ್ಷಗಳಷ್ಟು ಹಿಂದೆ ಈ ಗೊಂಡಾರಣ್ಯಕ್ಕೆ ಬಂದು ಇಂತಹ ದುರ್ಗಮವಾದ ಪ್ರದೇಶದಲ್ಲಿ ತಪಃ ಗೈದ ಅವರ ಧಿಶಕ್ತಿ ಎಂತದ್ದಿರಬೇಕು?


ಸರ್ವಜ್ಞ ಪೀಠದಿಂದ ಕಾಣುವ ದೃಶ್ಯ

ಇಲ್ಲಿ ಕಲ್ಲಿನ ಒಂದು ಮಂಟಪವಿದೆ. ಸೌತೆಕಾಯಿ, ಮಜ್ಜಿಗೆ , ಬಿಸ್ಕೆಟ್ ಮೊದಲಾದವುಗಳನ್ನು ಮಾರುವ ಅಂಗಡಿಗಳು ನಡುವೆ ಇವೆ. ದಿನಾ ಅವನ್ನೆಲ್ಲ ಹೊತ್ತು ಇಲ್ಲಿಯವರೆಗೆ ತರುವ ಅವರ ಮುಂದೆ ಖಾಲಿ ಕೈಯಲ್ಲಿ ಹತ್ತಿ ಎದುಸಿರುಬಿಡುವ ನಮ್ಮ ಬಗ್ಗೆ ನಾಚಿಕೆಯೆನಿಸಿತು .


ಸರ್ವಜ್ಞ ಪೀಠದ ಇರುವುದು ಈ ಬೆಟ್ಟದಲ್ಲಿ.

ಇಲ್ಲಿಂದ ಸುಮಾರು ಒಂದೂವೆರೆ ಕಿಮಿ ಇಳಿಜಾರಿನಲ್ಲಿ ಇಳಿದರೆ ಚಿತ್ರಮೂಲ. ಇಳಿಯುವಾಗ ನನಗೆ ತುಂಬ ಭಯವಾಯಿತು. ಜಾರಿದರೆ ಎಲುಬು ಪುದಿಯಾಗುವಷ್ಟು ಆಳದ ಪ್ರಪಾತ . ನಾನು ಕಷ್ಟಪಟ್ಟು ಇಳಿಯುತ್ತಿದ್ದರೆ , ಮಗಳು ಇಂಚರ, ಆರು ವರ್ಷದ ಸಿಂಚನ {ಸ್ನೇಹಿತರ ಮಗಳು} ಆರಾಮವಾಗಿ ಇಳಿದು ಹತ್ತಿದ್ದರು.


ಚಿತ್ರಮೂಲದ ದಾರಿಯಲ್ಲಿ

ಚಿತ್ರಮೂಲದ ಕಲ್ಲು ಬಂಡೆಯ ನಡುವೆ ಹನಿಯುವ ಸಿಹಿಯಾದ ನೀರು ಕುಡಿದು ಸುಧಾರಿಸಿಕೊಂಡು ಸರ್ವಜ್ಞ ಪೀಠಕ್ಕೆ ವಾಪಾಸಾಗುವ ವೇಳೆಗೆ ಬಾನಿನಲ್ಲಿ ಸೂರ್ಯಾಸ್ತದ ತಯಾರಿ ನಡೆಯುತ್ತಿತ್ತು.


ಚಿತ್ರಮೂಲ -ಇಲ್ಲಿ ಕುಳಿತು ತಪಸ್ಸು ಮಾಡುವವರಿದ್ದಾರೆ

ಮೋಡ ಮುಸುಕಿದ್ದರೂ ನೆರೆದವರನ್ನು ಪೂರ್ಣ ನಿರಾಸೆಗೊಳಿಸದೆ ಸೂರ್ಯ ಇಣುಕುತ್ತಿದ್ದ. ಯಾವುದೇ ಅವಸರವಿಲ್ಲದೆ ಎಲ್ಲರ ಕ್ಯಾಮರಕ್ಕೆ ಫೋಸ್ ಕೊಡುತ್ತ ಬಣ್ಣ ಬದಲಿಸುತ್ತ ಸೂರ್ಯ ಮುಳುಗುವುದನ್ನು ಕಣ್ತುಂಬಿಕೊಂಡು ವಾಪಾಸ್ ಭಟ್ಟರ ಮನೆಗೆ ಹೊರಟೆವು.


ಸೂರ್ಯಾಸ್ತ ಎಂಬ ನಾಟಕಕ್ಕೆ ಸಿಧ್ಧವಾದ ಬಾನಂಗಳ


ತೂರಿ ಬಾ ..... ಜಾರಿ ಬಾ .....



ಮೋಹಕ ಸೂರ್ಯಾಸ್ತ

ಇಲ್ಲಿಯ ದೇವಸ್ಥಾನದ ಪೂಜೆ ಮಾಡಿಕೊಂಡು ಪ್ರವಾಸಿಗರಿಗೆ ಊಟ ವಸತಿಯ ವ್ಯವಸ್ಥೆ ಮಾಡುವ ಭಟ್ಟರ ಮನೆಯವರದು ನಿಜಕ್ಕೂ ಹೋರಾಟದ ಬದುಕು."ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ , ಕೊಲ್ಲೂರು ಜಿಪುಗಳು ನಿರಂತರವಾಗಿ ಓಡಾಡುತ್ತವೆಯಾದರಿಂದ ಮೊದಲಿನ ಕಷ್ಟವಿಲ್ಲ. ಮೊದಲೆಲ್ಲ ತಲೆಹೊರೆಯ ಮೇಲೆ ದಿನಸಿ ಸಾಮಾನುಗಳನ್ನು ಹೊತ್ತು ಬೆಟ್ಟ ಹತ್ತುತ್ತಿದ್ದರು . ಘೋರ ಮಳೆಗಾಲ , ಮರಗಟ್ಟಿಸುವ ಚಳಿಗಾಲ ,ಸದಾ ಕಾಡು ಪ್ರಾಣಿಗಳ ಭಯ , ನೆರೆಹೊರೆ ಯಾರು ಇಲ್ಲದ ಒಂಟಿ ಮನೆ. ಅಬ್ಬ ನೆನೆಸಿಕೊಂಡರೆ ಭಯವಾಗುತ್ತದೆ "
೮೦ ವರ್ಷದ ನಮ್ಮೂರಿನ ರಾಮಜ್ಜ ನೆನಪಿಸಿಕೊಳ್ಳುತ್ತಾರೆ.


ಕಣ್ಣಾಮುಚ್ಚಾಲೆ

ರಾತ್ರಿ ಭಟ್ಟರ ಮನೆಯಲ್ಲಿ ಊಟ ಮಾಡಿ ಮಲಗಿ ಕಣ್ಣು ಮುಚ್ಚಿದರೆ ಪ್ರಪಾತಕ್ಕೆ ಕಾಲಿಟ್ಟಂತೆ ಭಾಸವಾಗಿ ನಿದ್ದೆಯೇ ಬರಲಿಲ್ಲ . ನಡೆದು ಕಾಲುಗಳು ಪದ ಹೇಳಲು ಪ್ರಾರಂಭಿಸಿದ್ದವು. ಅಂತೂ ಹೇಗೋ ರಾತ್ರಿ ಕಳೆದು ಬೆಳಗ್ಗೆ ೪.೩೦ ರ ನಸುಕಿನಲ್ಲಿ ಸೂರ್ಯೋದಯ ನೋಡಲು ಟಾರ್ಚ್ ಹಿಡಿದು ವೆಂಕತರಾಯನ ದುರ್ಗಕ್ಕೆ ಹೊರಟೆವು.(ಯಾರು ಹೇಳಿದ್ದು ಸೂರ್ಯನನ್ನು ನೋಡಲು ದೀಪ ಬೇಕೇ ಎಂದು!!!))




ವೆಂಕತರಾಯನ ದುರ್ಗಕ್ಕೆ ದಾರಿ

ಕತ್ತಲಲ್ಲಿ ಸುಲಭವಾಗಿ ಬೆಟ್ಟ ಹತ್ತಬಹುದಾದ ದಾರಿ ಬಿಟ್ಟು ದುರ್ಗಮವಾದ ದಾರಿಯಲ್ಲಿ ಅಕ್ಷರಶಃ ನಾಲ್ಕು ಕಾಲಿನಲ್ಲಿ ಹತ್ತಿದ ಥ್ರಿಲ್ ಚೆನ್ನಾಗಿತ್ತು. ಆದರೆ ಸೂರ್ಯ ಮುನಿಸಿಕೊಂಡಂತೆ ಮೋಡದ ನಡುವೆ ಮರೆಯಾಗಿದ್ದ. ಬೆಳಕಾಯಿತೆ ವಿನಃ ಸೂರ್ಯೋದಯದ ದೃಶ್ಯಗಳು ಕಾಣಲೇ ಇಲ್ಲ.




ಮುಂಜಾನೆಯ ಮಂಜಿನಲಿ ಪರ್ವತಶ್ರೇಣಿ

ಅಂತೂ ಇನ್ನು ಕಾಯುವುದು ವ್ಯರ್ಥವೆನ್ನಿಸಿದ ಮೇಲೆ ಕೆಳಗಿಳಿದೆವು . ನಡೆಯುವ ಉಮ್ಮೇದಿ ನನಗಂತೂ ಕಡಿಮೆಯಾಗಿತ್ತು. ಎಲ್ಲರೂ ಜೀಪಿನಲ್ಲಿ ಹೊರಟೆವು. ಜೀಪಿನ ಪ್ರಯಾಣ ಮಾಡಿದ ನಂತರ ನಡೆಯುವುದೇ ಹೆಚ್ಚು ಸುಲಭವೆಂದು ಅನಿಸಿತು. ಅಷ್ಟು ಕೆಟ್ಟ ರಸ್ತೆ ಊಹಿಸಿಕೊಳ್ಳುವುದೂ ಕಷ್ಟ



ಪ್ರಕೃತಿಗೆ ಮಾನವನ ಕೊಡುಗೆ - ಪ್ಲಾಸ್ಟಿಕ್ , ಕಸ , ಕೊಳಕು

ನೋವಿನ ಸಂಗತಿಯೆಂದರೆ ಹೆಚ್ಚು ಜನಪ್ರಿಯವಾಗುತ್ತಿರುವ ಈ ಸುಂದರ ಸ್ಥಳ ಮಾನವನಿಂದ ಕಸದ ಕೊಂಪೆಯಾಗುತ್ತಿದೆ. ಎಲ್ಲಿ ನೋಡಿದರೂ ಕುಡಿದು ಬಿಸಾಡಿದ ಬಾಟಲ್ ಗಳು, ಪ್ಲಾಸ್ಟಿಕ್ ಕವರ್ ಗಳು ಕಣ್ಣಿಗೆ ರಾಚುತ್ತವೆ. ನಮ್ಮ ಪರಿಸರದ ರಕ್ಷಣೆ ನಮ್ಮ ಹೊಣೆಯೆಂದು ಮಾನವರಿಗೆ ಅರಿವಾಗುವುದು ಯಾವಾಗಲೋ??
( ಹಾಂ ... ಅಂದ ಹಾಗೆ ಕೊಡಚಾದ್ರಿಯಲ್ಲಿ ನನಗೊಂದು ಸತ್ಯ ಸಕ್ಷಾತ್ಕಾರವಾಯ್ತು ನೋಡಿ . ನಾನು ದಪ್ಪ ಇದ್ದೇನೆ ಅಂತ ತಿಳಿದಿತ್ತು. ಆದರೆ ಎಷ್ಟು ಎನ್ನುವುದರ ಅರಿವು ಅಲ್ಲಾಯ್ತು. ಉತ್ತರ ಕರ್ನಾಟಕದ ಕಡೆಯವನೊಬ್ಬ ತನ್ನ ಹೆಂಡತಿಗೆ ನನ್ನನ್ನು ತೋರಿಸಿ ಹೇಳುತ್ತಿದ್ದ " ಲೇ ನೋಡು ಎಷ್ಟು ಫ್ಯಾಟ್ ಇದ್ದಾರ ಅದರೂ ಹೆಂಗ ನಡಿತಾರ !!! ನೀನೇನು ಹಿಂಗ ಕುಂತಿ ಏಳು ಲಗೂ ನಡೆ ...."
ಚಿತ್ರಮೂಲದಿಂದ ಮೇಲೇರುತ್ತಿದ್ದಾಗ ಸಿರಸಿಯ ಕಡೆಯ ಹುಡುಗರು " ಛೆ !! ಇದಕ್ಕೆ ಎಂತಕ್ಕೆ ಬೇಕಿತ್ತೋ ಮಾರಾಯ!!" ಎಂದು ಸಂತಾಪ ವ್ಯಕ್ತಪಡಿಸುತ್ತಿದ್ದರು.)

























22-Dec-2009

ಅಳಲು

ಬೇಕಿರಲಿಲ್ಲ ವ್ಯಕ್ತಿತ್ವ ವಿಕಸನದ ಬಗ್ಗೆ ನಿನ್ನ
ದೀರ್ಘ ಭಾಷಣ
ಕೈಹಿಡಿದೊಮ್ಮೆ ಪ್ರೀತಿಯಿಂದ ಹೇಳಿದ್ದರೆ ಸಾಕಿತ್ತು
"ನೀನೆನ್ನ ಜೀವ ಪ್ರಿಯೆ"
ಈ ನಿನ್ನ ಜೀವವೆಂದೂ ನಿರ್ಜಿವವಾಗುತ್ತಿರಲಿಲ್ಲ .

11-Dec-2009

ಹೆಣ್ಣಿಗಿರುವ ಆಯ್ಕೆಯ ಅವಕಾಶ!!

ಮೊನ್ನೆ ಊರಿಗೆ ಹೋದಾಗ ಅಕ್ಕ ಪಕ್ಕದ ಮನೆಯ ಕೆಲ ಹುಡುಗರು ಬಂದಿದ್ದರು . " ಏನ್ರೋ ಈ ವರ್ಷನಾದ್ರೂ ಮದುವೆ ಮಾಡಿಕೊಂಡು ಸಿಹಿ ಊಟ ಹಾಕಿಸ್ತೀರ " ಅವರನ್ನ ಛೇಡಿಸಿದೆ. ಶುರುವಾಯ್ತು ನೋಡಿ ವಾಕ್ ಪ್ರವಾಹ , ಒಬ್ಬೊಬ್ಬರು ಎಳೆ ಎಳೆಯಾಗಿ ತಮ್ಮ ಸಮಸ್ಯೆಗಳನ್ನು ಹೆಳಲು ಪ್ರಾರಂಭಿಸಿದರು .ಅದನ್ನೆಲ್ಲ ಬರೆದರೆ ದೊಡ್ಡ ಕಾದಂಬರಿಯಾದೀತು . ಆದ್ದರಿಂದ ಮುಖ್ಯಾಂಶವನ್ನಷ್ಟೇ ಹೇಳಿ ಮುಂದುವರೆಯುತ್ತೇನೆ.

ಇತ್ತೀಚೆಗೆ ನಮ್ಮ ಊರ ಕಡೇ ಯಾರನ್ನು ಕೇಳಿದರೂ ಹೇಳುವ ಸುದ್ದಿಯೆಂದರೆ "ನಮ್ಮನೆ ಮಾಣಿಗೊಂದು ಹೆಣ್ಣು ಸಿಕ್ತಲ್ಲೆ" . ಹಾಗೆಂದು ಹೆಣ್ಣುಮಕ್ಕಳೇ ಇಲ್ಲವೆಂದೇನೂ ಅಲ್ಲ. ಆದರೆ ಇರುವ ಹುಡುಗಿಯರು ಹೆಚ್ಚು ಹೆಚ್ಚು ಚೂಸಿಯಾಗಿದ್ದಾರೆ. ಗಂಡು ಸಿಕ್ಕರೆ ಸಾಕು , ಹೇಗಿದ್ದರೂ ಹೊಂದಿಕೊಳ್ಳಬಲ್ಲೆ ಎಂಬ ಮನಸ್ಥಿತಿಯಿಂದ ಹೊರಬಂದಿದ್ದಾರೆ. ಹೆಚ್ಚಿನ ಹೆಣ್ಣುಮಕ್ಕಳೀಗ ಸುಶಿಕ್ಷಿತರು . ಅಪ್ಪ ತೋರಿಸಿದ ಗಂಡಿನ ತಾಳಿಗೆ ಕೊರಳೊಡ್ಡಲು ಆಕೆಯೀಗ ತಯಾರಿಲ್ಲ. ಆಕೆಯ ಬೇಡಿಕೆಗಳ ಪಟ್ಟಿಯೀಗ ದೊಡ್ಡದಿದೆ.
ಗಂಡು ಕೆಲಸದಲ್ಲಿರಬೇಕು(ಬೆಂಗಳೂರಿನಲ್ಲಿದ್ದರೆ ಪ್ರಾಶಸ್ತ್ಯ!)
ಊರಲ್ಲಿ ಅಡಕೆ ತೋಟ ಇರಬೇಕು (ರಜೆ ಕಳೆಯಲು ಫಾರ್ಮ್ ಹೌಸ್ ಬೇಡವೆ?)
ಅಪ್ಪ ,ಅಮ್ಮ ಇದ್ದರೂ ಊರಿನಲ್ಲಿರಬೇಕು (ಮಕ್ಕಳಾದ ಮೇಲೆ ನೋಡಿಕೊಳ್ಳಲು ಬರಬಹುದು)
ಅಕ್ಕ ತಂಗಿಯರಿದ್ದರೆ ಮದುವೆಯಾಗಿರಬೇಕು (ಯಾಕೆ ತಲೆನೋವು!!)
ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು
ಎಲ್ಲ ಕೆಲಸಗಳಲ್ಲಿ ಸಹಕರಿಸಬೇಕು, ..................ಹೀಗೆ ಪಟ್ಟಿ ಮುಂದುವರೆಯುತ್ತದೆ.

ಸರಿ , ನಾನು ಹೆಣ್ಣಾಗಿ ಅವರ ವ್ಯಂಗವನ್ನು ಸಹಿಸಬಲ್ಲೆನೆ? ನನ್ನ ಕೊರೆತ ಪ್ರಾರಂಭಿಸಿದೆ.
" ಹೌದು ಅದರಲ್ಲೇನು ತಪ್ಪು? ಹೆಣ್ಣಿಗೆ ತನಗೆ ಬೇಕಾದ ಗಂಡನ್ನು ಆರಿಸಿಕೊಳ್ಳುವ ಅವಕಾಶವನ್ನು ಪ್ರಕೃತಿಯೇ ನೀಡಿದೆ ಗೊತ್ತೇ. ಇಷ್ಟೆಲ್ಲ ವರ್ಷ ಅವಳ ಆ ಹಕ್ಕನ್ನು ನೀವು ಕಸಿದುಕೊಂಡಿದ್ದಿರಿ , ಈಗ ಅವಳಿಗೆ ಅದರ ಅರಿವಾಗಿದೆ. ಅವಳು ಪ್ರಕೃತಿಯ ನಿಯಮದಂತೆ ನಡೆಯುತ್ತಿದ್ದಾಳಷ್ಟೇ ಎಂದೆ."
"ಅಕ್ಕಾ ಅದೇನು ಹೇಳಬೇಕೂಂತಿದ್ದಿ ಸ್ವಲ್ಪ ಬಿಡಿಸಿ ಹೇಳೆ " ಬೇಸರದಿಂದ ನುಡಿದನೊಬ್ಬ.
"ನೋಡಿ ಹೆಚ್ಚಿನ ಪ್ರಾಣಿಗಳಲ್ಲಿ ಆಯ್ಕೆಯ ಅವಕಾಶವಿರುವುದು ಹೆಣ್ಣಿಗೇ. ಅವಳನ್ನು ಒಲಿಸಿಕೊಳ್ಳಲು ಗಂಡು ಕಷ್ಟಪಡಲೇಬೇಕು. ಕೆಲವು ಉದಾಹರಣೆ ಹೇಳುತ್ತೇನೆ ಕೇಳಿ.
  • ನವಿಲು ಮುಂತಾದ ಪಕ್ಷಿಗಳಲ್ಲಿ breeding season ಪ್ರಾರಂಭವಾಗುತ್ತಿದ್ದಂತೆ ಬಣ್ಣಬಣ್ಣದ ಗರಿಗಳಿಂದ ಗಂಡು ಅಲಕೃತವಾಗುತ್ತದೆ . ತನ್ನ ಸೌಂದರ್ಯವನ್ನು ಹೆಣ್ಣಿನ ಮುಂದೆ ನೃತ್ಯದ ಮೂಲಕವೋ ಹಾಗೇ ಸುಳಿದಾಡಿಯೊ ಪ್ರದರ್ಶಿಸುತ್ತದೆ . ಹೆಣ್ಣಿಗೆ ಅದರ ಸೌಂದರ್ಯ ಮೆಚ್ಚಿಗೆಯಾದರೆ ಮಾತ್ರ ಒಲಿಯುತ್ತದೆ.
  • ಕೋಗಿಲೆಯಂತಹ ಪಕ್ಷಿಗಳು ತಮ್ಮ ಇಂಪಾದ ಧ್ವನಿಯಿಂದ ಹೆಣ್ಣನ್ನು ಒಲಿಸಿಕೊಳ್ಳುತ್ತವೆ.
  • ಗೀಜಗ (wearver bird) ಸುರಕ್ಷಿತವಾದ ಸ್ಥಳದಲ್ಲಿ ಗೂಡನ್ನು ಅರ್ಧ ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ. ಆಕೆಗೆ ಇಷ್ಟವಾದರೆ ಮಾತ್ರ ಒಪ್ಪಿಗೆ ಸೂಚಿಸುತ್ತದೆ ,ಮತ್ತು ಗೂಡನ್ನು ಪೂರ್ಣಗೊಳಿಸಲು ಸಹಕರಿಸುತ್ತದೆ. ಗೂಡು ಸುರಕ್ಷಿತ ಜಾಗದಲ್ಲಿಲ್ಲದಿದ್ದರೆ , ಸರಿಯಾಗಿ ನಿರ್ಮಿಸದಿದ್ದರೆ ಗಂಡನ್ನೇ ತಿರಸ್ಕರಿಸುತ್ತದೆ.
  • ಕೆಲವು ಜಾತಿಯ ಮೀನುಗಳು ಗೂಡನ್ನು ನಿರ್ಮಿಸಿ ಹೆಣ್ಣನ್ನು ಆಕರ್ಷಿಸುತ್ತವೆ.
  • ಜಿಂಕೆಯಂತಹ ಕೆಲ ಸಸ್ತನಿಗಳಲ್ಲೂ ಗಂಡು ತನ್ನ ಸುಂದರವಾದ ಕೋಡುಗಳಿಂದ ಹೆಣ್ಣನ್ನು ಆಕರ್ಷಿಸುತ್ತದೆ. ಹೆಣ್ಣನ್ನು ಒಲಿಸಿಕೊಳ್ಳುವುದಕ್ಕಾಗೇ ಎರಡು ಗಂಡುಗಳ ಮಧ್ಯೆ ಬಲಪ್ರದರ್ಶನ , ಹೋರಾಟಗಳೂ ನಡೆಯುತ್ತವೆ. ಗೆದ್ದ ಶಕ್ತಿಶಾಲಿಗಷ್ಟೇ ಹೆಣ್ಣು ಒಲಿಯುತ್ತದೆ.
  • ಇನ್ನು ಕೀಟಪ್ರಪಂಚದಲ್ಲಂತೂ ಹೆಣ್ಣೇ ಸಾರ್ವಭೌಮಿಣಿ. ಹೆಚ್ಚಿನ ಗಂಡುಕೀಟಗಳು ಪ್ರಥಮ ಮಿಲನದ ನಂತರ ಪ್ರಾಣವನ್ನೇ ಬಿಡುತ್ತವೆ. ಜೇನುಹುಳುಗಳು , ಗೆದ್ದಲು ಮೊದಲಾದ ಕೀಟಗಳಲ್ಲಿ ಹೆಚ್ಚು ವೇಗವಾಗಿ ಹಾರುವ ಗಂಡಿಗೆ ಹೆಣ್ಣು ಒಲಿಯುತ್ತದೆ .
  • ಕೆಲವು ಜಾತಿಯ ಜೇಡಗಳಲ್ಲಿ ಗಂಡು ಬೇಟೆಯನ್ನು ಹಿಡಿದು ತನ್ನ ಸಿಲ್ಕಿನಲ್ಲಿ ಸುತ್ತಿ ಹೆಣ್ಣಿಗೆ ಗಿಫ್ಟ್ ಕೊಟ್ಟು ಒಲಿಸಿಕೊಳ್ಳುತ್ತದೆ. ಹೆಣ್ಣಿಗೆ ಒಪ್ಪಿಯಾದರೆ ಸರಿ , ಇಲ್ಲವಾದರೆ ಅದನ್ನು ತಿಂದುಬಿಡುವ ಸಾಧ್ಯತೆಯೂ ಉಂಟು.

ಹೀಗೆ ಪ್ರಕೃತಿ ಹೆಣ್ಣಿಗೇ ಆಯ್ಕೆಯ ಅವಕಾಶ ನೀಡಿರುವುದು . ಅದನ್ನು ಈಗ ಅವಳು ಉಪಯೋಗಿಸುತ್ತಿದ್ದಾಳಷ್ಟೇ."

ನನ್ನ ದೀರ್ಘ ಭಾಷಣ ಮುಗಿದಾಗ ಅವರೆಲ್ಲ ಎದ್ದು ಅಲ್ಲಿಂದ ಓಡಿದ್ದರು ನಾನು ಇನ್ನೆಲ್ಲಿ ಮತ್ತೆ ಕೊರೆಯಲು ಪ್ರಾರಂಭಿಸುತ್ತೇನೊ ಎಂದು.

(ಮುಂದುವರಿದ ಪ್ರಾಣಿಗಳೆನಿಸಿಕೊಳ್ಳುವ ಸಸ್ತನಿಗಳಲ್ಲಿ ,ಅದರಲ್ಲೂ ಮನುಷ್ಯನನ್ನು ಒಳಗೊಂಡಿರುವ ಪ್ರೈಮೇಟ್ ಗಳಲ್ಲಿ ಗಂಡೇ ಡಾಮಿನೆಂಟ್ ಅನ್ನುವ ವಿಚಾರವನ್ನು ಮಾತ್ರ ನಾನು ಉದ್ದೇಶಪೂರ್ವಕವಾಗಿ ಮರೆತೆ.)

04-Dec-2009

ಸೌಮ್ಯ - ಭಾಗ ೨

ಒಂದು ದಿನ ಶ್ರೀನಾಥ ತನ್ನ ಫ್ರೆಂಡ್ ಗಿರೀಶನ ಪರಿಚಯ ಮಾಡಿಸಿದ. ಅವನ ತಂದೆ ನನ್ನ ತಂದೆಯ ಸಹೋದ್ಯೋಗಿಯಾಗಿದ್ದರೆಂದು ಅವನು ತಿಳಿಸಿದಾಗ ನನಗೆ ನನ್ನ ತಂದೆ ಸಿಕ್ಕಷ್ಟೇ ಸಂತಸವಾಗಿತ್ತು. ನಾನು ಶ್ರೀನಾಥನ ಬಳಿ ಗಿರೀಶನ ತಂದೆಯನ್ನು ಭೇಟಿಯಾಗೋಣ ಎಂದೆ . ಆದರೆ ಅವರಿಬ್ಬರು ಒಕ್ಕೊರಲಿನಲ್ಲಿ ಅವರು ಈಗ ಊರಲಿಲ್ಲ , ಬಂದ ಮೇಲೆ ಭೇಟಿಯಾಗೋಣ ಎಂದರು.
ಗಿರೀಶ ಹೇಳಿದ ಪ್ರಕಾರ , ಪ್ರೀತಿಸಿ ಮದುವೆಯಾಗಿದ್ದ ನನ್ನ ತಂದೆ ಮತ್ತು ತಾಯಿ ನಾನು ಹುಟ್ಟಿದ ಮೇಲೆ ಯಾವುದೋ ಭಿನ್ನಾಭಿಪ್ರಾಯದಿಂದ ಬೇರಾಗಿದ್ದರು. ಯಾವುದೋ ಹೆಂಗಸಿನ ಜೊತೆ ಅಪ್ಪನಿಗೆ ಸಂಭಂಧವಿತ್ತೆಂದು ಸುದ್ದಿಯಾಗಿತ್ತು. ಅಮ್ಮನಿಂದ ಡೈವೊರ್ಸ್ ಆದ ನಂತರ ಅಪ್ಪ ಗೋವಾಕ್ಕೆ ವರ್ಗ ಮಾಡಿಸಿಕೊಂಡು ಹೊರಟು ಹೋದರು. ಆಮೇಲೆ ಗಿರೀಶನ ತಂದೆಗೂ ಅವರ ಸಂಪರ್ಕವಿರಲಿಲ್ಲ .
ಕೇಳುತ್ತಿದ್ದ ನನಗೆ ಕತ್ತಲೆಯಲ್ಲಿರುವವರಿಗೆ ದೀಪ ಸಿಕ್ಕಂತಾಗಿತ್ತು. ಗೋವಾದಲ್ಲಿ ಅವರು ಕೆಲಸ ಮಾಡುತ್ತಿರುವ ಸಂಸ್ಥೆಗೆ ಹೋಗಿ ಸುಲಭವಾಗಿ ಅವರನ್ನು ಭೇಟಿ ಮಾಡಬಹುದೆಂದುಕೊಂಡೆ. ಶ್ರೀನಾಥ ನೀನೊಬ್ಬಳೇ ಅಷ್ಟು ದೂರದ ಊರಿಗೆ ಹೋಗುವುದು ಒಳ್ಳೆಯದಲ್ಲ ನಾನೂ ಬರುತ್ತೇನೆ ಎಂದ. ಬೇಸಗೆ ರಜೆ ಪ್ರಾರಂಭವಾಗಿತ್ತಿದ್ದಂತೆ ಹೋಗುವುದೆಂದು ತೀರ್ಮಾನಿಸಿದೆವು.
ಪರೀಕ್ಷೆ ಹತ್ತಿರ ಬರುತ್ತಿತ್ತು . ತುಂಬ ಚೆನ್ನಾಗಿ ಓದುತ್ತಿದ್ದ ನನ್ನ ಬಗ್ಗೆ ಟೀಚರ್ ಗಳಿಗೆ ಬಾರೀ ನಿರೀಕ್ಷೆಗಳಿದ್ದವು. ನಾನೂ ಚೆನ್ನಾಗೆ ತಯಾರಿ ನಡೆಸಿದ್ದೆ. ದಿನಕ್ಕೊಮ್ಮೆ ಶ್ರೀನಾಥನ ಭೆಟಿಯಾಗುತ್ತಿತ್ತು. ನಮ್ಮ ಸಲುಗೆ ಸಾಮಿಪ್ಯ ನೋಡಿದ ಅಮ್ಮನಿಗೆ ಕಸಿವಿಸಿಯಾಗಿ ರಾತ್ರಿ ಮಲಗಿದ್ದ ನನ್ನ ಬಳಿ ಬಂದು ತಲೆ ನೇವರಿಸುತ್ತ ಬುಧ್ಧಿವಾದ ಹೇಳಿದ್ದಳು . ಅವಳ ಪ್ರಕಾರ ಗಂಡು ಜಾತಿ ನಂಬುಗೆಗೆ ಅರ್ಹವಾಗಿರಲಿಲ್ಲ. ಆದರೆ ನಾನು ಅವನು ನನ್ನ ಒಳ್ಳೆಯ ಗೆಳೆಯನಷ್ಟೇ ಎಂದು ಅವಳ ಮಾತನ್ನು ತಳ್ಳಿಹಾಕಿದ್ದೆ. ಮಗಳ ಮೇಲೆ ತುಂಬ ನಂಬಿಕೆಯನ್ನಿಟ್ಟಿದ್ದ ಅವಳು ಸುಮ್ಮನಾಗಿದ್ದಳು.
ಅಮ್ಮನಲ್ಲಿ ನಿಜ ವಿಷಯ ತಿಳಿಸಿಬಿಡಬೇಕೆಂದು ಎಷ್ಟೋ ವೇಳೇ ಅನ್ನಿಸಿತ್ತು . ಆದರೆ ಅವಳೆಲ್ಲಿ ನೊಂದುಕೊಳ್ಳುತ್ತಾಳೊ , ಅಪ್ಪನ ವಿಷಯವೆತ್ತಬೇಡವೆಂದುಬಿಡುತ್ತಾಳೊ ಎಂದು ಸುಮ್ಮನಾಗಿಬಿಡುತ್ತಿದ್ದೆ.
ನಮ್ಮಿಬ್ಬರ ಪರೀಕ್ಷೆಗಳು ಮುಗಿದ ನಂತರ ಒಂದು ದಿನ ನಾವು ಗೋವಾಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಮ್ಮನ ಹತ್ತಿರ ಏನು ಹೇಳುವುದು? ಶ್ರೀನಾಥನೇ ಒಂದು ಉಪಾಯ ಸೂಚಿಸಿದ . ನನ್ನ ಫ್ರೆಂಡ್ ರೇಖಾಳಲ್ಲಿ ನಮ್ಮ ವಿಷಯವನ್ನೆಲ್ಲ ತಿಳಿಸಿದೆ. ನನ್ನ ನೋವಿನ ಅರಿವಿದ್ದ ಆವಳು ನನಗೆ ಸಹಾಯ ಮಾಡಲು ಒಪ್ಪಿದಳು. ಅವಳೊಂದಿಗೆ ಅವಳ ಅಜ್ಜಿಯ ಊರು ಮಂಗಳೂರಿಗೆ ಹೋಗುತ್ತೇನೆಂದು ಅಮ್ಮನನ್ನು ಒಪ್ಪಿಸಿದೆವು. ಅಮ್ಮನಲ್ಲಿ ಸುಳ್ಳು ಹೇಳುತ್ತಿದ್ದೇನಲ್ಲಾ ಎಂದು ದುಖಃವಾದರೂ ಅಪ್ಪನನ್ನು ಕಾಣುವ ತವಕದ ಕೈ ಮೇಲಾಗಿತ್ತು.
ಅಂದು ನಾನು ಶುಭದಿನವೆಂದುಕೊಂಡಿದ್ದ ಭಾನುವಾರ ಬೆಳಗಿನ ಬಸ್ಸಿಗೆ ನನ್ನನ್ನು ಕಳುಹಿಸಲು ಅಮ್ಮ ಬಂದಿದ್ದಳು. ನಾನು ಮತ್ತು ರೇಖ ಮಂಗಳೂರಿನ ಬಸ್ ಹತ್ತಿ ಕುಳಿತ ನಂತರ ಕನಿಷ್ಠ ಹತ್ತು ಬಾರಿ ಹುಷಾರಾಗಿ ಹೋಗಿ ಬಾ ಎಂದು ಹೇಳಿ ಮನೆಗೆ ಹೊರಟಳು . ಅಮ್ಮ ಮರೆಯಾದ ನಂತರ ಬಂದ ಶ್ರೀನಾಥನೊಡನೆ ನಾನು ಗೋವಾದ ಬಸ್ಸನ್ನೇರಿದೆ. ಬಸ್ಸಿನಲ್ಲಿದ್ದ ಶ್ರೀನಾಥ ನಾಲ್ವರು ಗೆಳೆಯರನ್ನು ನೋಡಿದಾಗ ಇವರೆಲ್ಲ ಯಾಕೆ ಬಂದರು ಎನಿಸಿದ್ದು ನಿಜ. ನನ್ನ ಅನುಮಾನ ಪರಿಹರಿಸಲೆಂಬಂತೆ , ಅವರೆಲ್ಲ ನಮಗೆ ಸಹಾಯ ಮಾಡಲು ಬಂದಿದ್ದಾರೆ , ಗೋವಾದ ಪರಿಚಯ ಇವರಿಗೆ ಚೆನ್ನಾಗಿದೆ ಅಲ್ಲದೆ ಈ ಅಜಯ್ ಫಾರ್ಮ್ ಹೌಸ್ ಗೋವಾದ ಬಳಿಯಲ್ಲಿದೆ ಎಂದ ಶ್ರೀನಾಥ. ಏನೋ ಒಂದು ರೀತಿಯ ಭಯವಾದರೂ ಶ್ರೀನಾಥನ ಮೇಲಿದ್ದ ವಿಶ್ವಾಸದಿಂದ ಸುಮ್ಮನೆ ಕುಳಿತೆ.
ಬಸ್ಸು ಗೋವಾ ತಲುಪಿದಾಗ ರಾತ್ರಿಯಾಗಿತ್ತು. ಹೋಟೆಲ್ ಒಂದರಲ್ಲಿ ಊಟ ಮುಗಿಸಿ ದ ಮೇಲೆ ಭೂತಬಂಗಲೆಯಂತಹ ತೋಟದ ಮನೆಯೊಂದಕ್ಕೆ ಕರೆತಂದರು. ನಿರ್ಮಾನುಷವಾಗಿದ್ದ ಆ ಮನೆಯ ಬಳಿ ಇದ್ದ ಕಾವಲುಗಾರನೊಬ್ಬ ಬಾಗಿಲು ತೆಗೆದು ವಿಚಿತ್ರ ನೋಟದಿಂದ ನನ್ನನ್ನು ನೋಡಿ ಹೊರಟುಹೋದ. ವಿಶಾಲವಾದ ಮನೆಯ ಮಹಡಿಯ ರೂಮಿಗೆ ಕರೆದೊಯ್ದ ಶ್ರೀನಾಥ ಇದು ನಿನ್ನ ರೂಮು . ನೀನು ಫ್ರೆಶ್ ಆಗಿ ಮಲಗು. ನಾವೆಲ್ಲ ಕೆಳಗಿನ ರೂಮಿನಲ್ಲಿರುತ್ತೇವೆ. ನಾಳೆ ಬೆಳಗ್ಗೆ ನಿನ್ನ ಅಪ್ಪನನ್ನು ನೋಡಲು ಹೋಗೋಣ ಎಂದು ಕೆನ್ನೆಹಿಂಡಿದ. ನನಗಾಗಿ ಇಷ್ಟೆಲ್ಲ ಮಾಡುತ್ತಿರುವ ಅವನ ಬಗ್ಗೆ ಅಭಿಮಾನ ಉಕ್ಕಿತ್ತು.
ತುಂಬ ದಿನಗಳ ತನ್ನ ಕನಸು ಈಡೇರಲಿದೆ , ಬೆಳಗ್ಗೆ ನಾನು ನನ್ನ ಅಪ್ಪನನ್ನು ನೋಡುತ್ತೇನೆಂಬ ಸಂಭ್ರಮದಲ್ಲಿ ತೇಲುತ್ತಾ ಮಲಗಿದ್ದ ನನ್ನ ಬಳಿ ಯಾರೋ ಬಂದಂತಾಯಿತು. ಗಾಭರಿಯಲ್ಲಿ ಯಾರು ಎಂದೆ , ನಾನೇ ಏಕೆ ಭಯ ಚಿನ್ನು ಎಂದ ಶ್ರೀನಾಥ ಏನೇನೋ ಮಾತನಾಡುತ್ತ ಹತ್ತಿರ ಬಂದು ದೇಹವನ್ನಾವರಿಸಿದ. ಅವನೇನು ಮಾಡುತ್ತಿದ್ದಾನೆಂಬ ಅರಿವಾದರೂ ನನ್ನವನೆಂಬ ಅಭಿಮಾನದಲ್ಲಿ ಸುಮ್ಮನುಳಿದೆ. ಸ್ವಲ್ಪ ಹೊತ್ತಿನ ಬಳಿಕ ಅವನೆದ್ದು ಹೋದ. ನೋವು , ಏನೋ ಕಳೆದುಕೊಂಡೆನೆಂಬ ಭಾವದಲ್ಲಿ ಅಳುತ್ತಿದ್ದಾಗ ಶ್ರೀನಾಥನ ಗೆಳೆಯ ಗಿರೀಶ ಒಳಬಂದು ಮೈ ಕೈ ಸವರಲಾರಂಭಿಸಿದ. ಸಿಟ್ಟಿನಿಂದ ಎದ್ದು ಕೆಳಗೋಡಿ ಬಂದೆ . ಅರಾಮವಾಗಿ ನಗುತ್ತ ಉಳಿದ ಗೆಳೆಯರೊಡನೆ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಾ ಕುಡಿಯುತ್ತಾ ಕುಳಿತಿದ್ದ ಅವನನ್ನು ನೋಡಿದಾಗ ನಾನೆಂಥ ಅಪಾಯದಲ್ಲಿದ್ದೇನೆಂಬ ಅರಿವಾಗಿತ್ತು. ಹೊರಗೋಡಲು ಪ್ರಯತ್ನಿಸಿದೆ. ಆದರೆ ಎಲ್ಲರೂ ಸುತ್ತುವರಿದಿದ್ದರು. ಹತ್ತಿರದಲ್ಲಿದ್ದ ಕಂಚಿನ ಹೂದಾನಿಯಿಂದ ನನ್ನನ್ನು ಹಿಡಿಯಲು ಬಂದ ಶ್ರೀನಾಥನ ತಲೆಗೆ ಬಡಿದೆ. ರಕ್ತ ಸುರಿಸುತ್ತಾ ಕೆಳಗೆ ಬಿದ್ದ ಆತ ಸತ್ತೇ ಹೋದ . ಅವನು ಸತ್ತದ್ದನ್ನು ಕಂಡು ಹೆದರಿ ಉಳಿದವರೆಲ್ಲ ಓಡಿಹೋದರು. ಕೂಗಿದ ಶಬ್ದಕ್ಕೆ ಓಡಿ ಬಂದ ಕಾವಲುಗಾರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಾಥನನ್ನೂ , ನಡುಗುತ್ತಾ ನಿಂತಿದ್ದ ನನ್ನನ್ನೂ ನೋಡಿ ಪೋಲೀಸರನ್ನು ಕರೆಸಿದ.
ನಂತರ ಏನಾಯಿತೋ ನನಗೊಂದೂ ತಿಳಿಯದು . ನಾನು ಹೇಳಿದ್ದನ್ನಂತೂ ಯಾರೂ ನಂಬಲಿಲ್ಲ . ಶ್ರೀನಾಥನ ಗೆಳೆಯರು , ಕಾವಲುಗಾರ ಎಲ್ಲರೂ ಬರೀ ಸುಳ್ಳುಗಳ ಸರಮಾಲೆಯನ್ನೇ ಹೇಳಿದರು . ಕೊನೆಗೆ ನನ್ನ ಅಮ್ಮನೂ ಸಹ ನಾನು ಹೇಳಿದ್ದನ್ನು ನಂಬದೆ ಅಳುತ್ತ ಹೊರಟುಹೋದಳು.
ಈಗ ನಾನು ಈ ರಿಮ್ಯಾಂಡ್ ಹೋಂ ನಿವಾಸಿ . ಎಂದಾದರೊಮ್ಮೆ ನನ್ನ ಅಮ್ಮ ನನ್ನ ಅಪ್ಪನನ್ನು ಕರೆದುಕೊಂಡು ನನ್ನನ್ನು ನೋಡಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಹೇಳಿ ಬರಬಹುದಲ್ಲವೆ?

01-Dec-2009

ಸೌಮ್ಯ - ಭಾಗ ೧

ನಾನು ಸೌಮ್ಯ. ವಯಸ್ಸು ೧೭ ವರ್ಷ. ನನ್ನ ವಾಸಸ್ಥಾನ ಬಾಲಾಪರಾಧಿಗಳನ್ನಿರಿಸುವ ರಿಮ್ಯಾಂಡ್ ಹೋಂ. ಇಲ್ಲಿನ ಗೇಟ್ ಸರಳುಗಳ ಬಳಿ ನಿಂತು ನಾನು ನನ್ನ ಅಪ್ಪ ಅಮ್ಮನಿಗಾಗಿ ಕಾಯುತ್ತಿದ್ದೇನೆ . ಎಂದಾದರೊಂದು ದಿನ ಅವರು ನನ್ನನ್ನು ನೋಡಲು ಬರುತ್ತಾರೆಂಬ ನಂಬಿಕೆ ನನಗಿದೆ.
ನಾನು ಇಲ್ಲಿಗೆ ಹೇಗೆ ಬಂದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ ಎಂದು ಗೊತ್ತು. ಹೇಳುತ್ತೇನೆ , ನನ್ನ ಬಾಲ್ಯದಿಂದ ಈವರೆಗಿನ ಘಟನೆಗಳನ್ನು.
ಚಿಕ್ಕ ಮಗುವಾಗಿದ್ದಾಗ ನನ್ನ ಪ್ರಪಂಚದಲ್ಲಿದ್ದವಳು ನನ್ನ ಅಮ್ಮ ಮಾತ್ರ . ನನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತಿದ್ದ ಅಮ್ಮನ ಚಿತ್ರಣ ಮಸುಕು ಮಸುಕಾಗಿ ಇನ್ನೂ ನನ್ನ ಕಣ್ಣಲ್ಲಿದೆ. ನರ್ಸರಿಗೆ ಹೋಗಲು ಪ್ರಾರಂಭಿಸಿದಾಗ ನನಗೆ ಪ್ರತಿಯೊಬ್ಬರಿಗೂ ತಂದೆ ಎಂಬ ವ್ಯಕ್ತಿ ಇರುತ್ತಾರೆಂಬ ವಿಷಯ ತಿಳಿಯಿತು .ಆಗೆಲ್ಲ ನನಗೆ ನನ್ನ ಅಪ್ಪ ಬೇಕು ಎಂದು ಅಮ್ಮನನ್ನು ಪೀಡಿಸುತ್ತಿದ್ದೆ. ಅಮ್ಮ ಎತ್ತಿಕೊಂಡು , ನಿನ್ನ ಅಪ್ಪ ದೂರದ ಊರಲ್ಲಿದ್ದಾರೆ ಸಲ್ಪ ದಿನಗಳಾದ ಮೇಲೆ ಬರುತ್ತಾರೆ ಪುಟ್ಟ ಎಂದು ಹೇಳುತ್ತಾ ಕೆನ್ನೆಗೆ ಮುತ್ತನ್ನಿಡುತ್ತಿದ್ದಳು . ಅವಳ ಪ್ರೀತಿಯ ನುಡಿಗಳಿಗೆ ಶಾಂತಳಾಗುತ್ತಿದ್ದ ನನಗೆ ಇನ್ನೊಮ್ಮೆ ನನ್ನ ಗೆಳತಿಯರು ವಿಷಯ ಎತ್ತುವ ವರೆಗೂ ಅಪ್ಪನ ನೆನಪೇ ಬರುತ್ತಿರಲಿಲ್ಲ. ಆದರೆ ಅಮ್ಮ ಹೇಳಿದ ಆ ಸ್ವಲ್ಪ ದಿನಗಳು ಮುಗಿಯಲೇ ಇಲ್ಲ . ನಾನು ಮಾತ್ರ ಬೆಳೆಯುತ್ತಿದ್ದೆ .
ಸ್ಕೂಲ್ ಸೇರಿದಾಗ ಮೊದಲ ದಿನ ಮಿಸ್ ಎಲ್ಲರಲ್ಲೂ ಅವರ ಅಪ್ಪ ಅಮ್ಮನ ಹೆಸರು ಕೇಳಿದರು. ನಾನು ಮಾತ್ರ ಅಮ್ಮನ ಹೆಸರೊಂದೆ ಹೇಳಿದೆ . ’ಅಪ್ಪನ ಹೆಸರೇನು ಮರಿ’ ಮಿಸ್ ಕೇಳಿದಾಗ ನಂಗೆ ಮರೆತುಹೋಗಿದೆ ಎಂದೆ. ಆಗ ಎಲ್ಲರೂ ನಕ್ಕ ನಗೆಯ ಶಬ್ದ ಇನ್ನೂ ನನ್ನ ಕಿವಿಗಳಲ್ಲಿದೆ.
ನನ್ನ ಗೆಳತಿಯರು ಅವರ ಅಪ್ಪನ ಬಗ್ಗೆ ಮಾತನಡಲು ಪ್ರಾರಂಭಿಸಿದರೆ ನಾನು ಮೌನವಾಗುಳಿಯುತ್ತಿದ್ದೆ . ಆಗೆಲ್ಲ ಅವರು ನನ್ನನ್ನು ನೊಡುತ್ತಿದ್ದ ರೀತಿಯನ್ನು ನಾನೆಂದೂ ಮರೆಯಲಾರೆ. ಪೇರೆಂಟ್ಸ್ ಡೇ ದಿನವಂತೂ ಅಮ್ಮನ ಹತ್ತಿರ ಅಪ್ಪನನ್ನು ಈಗಲೆ ಕರೆಸು ಅವರೆ ಸ್ಕೂಲಿಗೆ ಬರಲಿ ಎಂದು ಜಗಳವನ್ನೆ ಮಾಡುತ್ತಿದ್ದೆ. ಅಮ್ಮ ಏನೊ ಹೇಳಿ ಸಮಾಧಾನಪಡಿಸುತ್ತಿದ್ದಳು.
ಇನ್ನೂ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಅಮ್ಮ ನನಗೆ ಅಪ್ಪನ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ ಎನಿಸತೊಡಗಿತ್ತು. ಅಜ್ಜಿಯ ಬಳಿ ನಿಜ ಹೇಳುವಂತೆ ಪೀಡಿಸುತ್ತಿದ್ದೆ. ಅಜ್ಜಿ ಕಣ್ಣೀರಿಡುತ್ತ ಎಲ್ಲ ನನ್ನ ಕರ್ಮ ಎನ್ನುತ್ತಿದ್ದಳು. ನನ್ನ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕುತ್ತಿರಲಿಲ್ಲ.
ಅದೊಂದು ದಿನ , ನನ್ನ ಈಗಿನ ಸ್ಥಿತಿಗೆ ಕಾರಣೀಭೂತವಾದ ದಿನ , ನಾನಾಗ ಐದನೇ ತರಗತಿಯಲ್ಲಿದ್ದೆ. ಓದಿನಲ್ಲಿ ತುಂಬ ಚುರುಕು. ಕ್ಲಾಸಿಗೆ ಯಾವಾಗಲೂ ನಾನೇ ಫಸ್ಟ್. ಹೇಗಾದರೂ ತಾನು ಕ್ಲಾಸಿಗೆ ಫಸ್ಟ್ ಬರಬೇಕೆಂದು ಶೋಭ ಪ್ರಯತ್ನಿಸುತ್ತಿದ್ದಳು. ನನ್ನನ್ನು ಆಡಿಕೊಂಡು ನಗುವುದೆಂದರೆ ಅವಳಿಗೆ ತುಂಬ ಇಷ್ಟ. ಆ ದಿನ ಅವಳು ಮತ್ತು ಅವಳ ಗೆಳತಿಯರು ಏನೋ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದರು. ನಾನೂ ಜಗಳವಾಡಿದೆ . ಅವಳು "ನನ್ನ ಅಪ್ಪನಲ್ಲಿ ಹೇಳಿಕೊಡುತ್ತೇನೆ ’ಎಂದು ಹೆದರಿಸಿದಳು. ನಾನೇನು ಕಡಿಮೆ? "ನಿನಗೊಬ್ಬಳಿಗೇನಾ ಅಪ್ಪ ಇರೋದು , ನಾನೂ ಅಪ್ಪನನ್ನು ಕರೆದುಕೊಂಡು ಬರುತ್ತೇನೆ ನೋಡು " ಎಂದೆ. ಅವರೆಲ್ಲ ಒಮ್ಮೆಲೆ ನಗತೊಡಗಿದರು. ಯಾಕ್ರೆ ನಗ್ತೀರ ಎಂದದ್ದಕ್ಕೆ "ನೀನು ನಿನ್ನ ಅಪ್ಪನನ್ನು ಹೇಗೆ ಕರೆದುಕೊಂಡು ಬರುತ್ತೀಯ? ಅವರು ನಿನ್ನಮ್ಮನಿಗೆ ಡೈವೋರ್ಸ್ ಕೊಟ್ಟಿದ್ದಾರೆ ಗೊತ್ತಾ? ಇನ್ಯಾವತ್ತು ಅವರು ಇಲ್ಲಿಗೆ ಬರಲ್ಲ ಅಂತ ನಿನ್ನೆ ನನ್ನಪ್ಪ ಹೇಳುತ್ತಿದ್ದರು"ಎಂದುಬಿಟ್ಟಳು ಶೋಭಾ. ನನಗೆ ಅದೇನೆಂದು ಸರಿಯಾಗಿ ಅರ್ಥವಾಗಲಿಲ್ಲ .
ಅಮ್ಮ ಆಫೀಸಿಂದ ಒಳಬರುತ್ತಿದ್ದಂತೆ "ಅಮ್ಮ ನೀನಿವತ್ತು ಅಪ್ಪನನ್ನು ಕರೆಸಲೇ ಬೇಕು . ಆ ಶೋಭ ಹೇಳುತ್ತಾಳೇ ಅವರು ನಿನಗೆ ಡೈವೋರ್ಸ್ ಕೊಟ್ಟಿದ್ದಾರೆ ಇನ್ಯವತ್ತೂ ಇಲ್ಲಿಗೆ ಬರಲ್ಲ ಅಂತ , ನಿಜವಾ ಅಮ್ಮ? ಅದೇನದು ನನಗೂ ತೋರಿಸು , ಅದನ್ನು ಕೊಟ್ಟರೆ ಅವರು ಇಲ್ಲಿಗೆ ಯಾಕೆ ಬರೊಲ್ಲಮ್ಮ?" ಎಂದು ಅಳುತ್ತಾ ಕೇಳಿದ ನನ್ನನ್ನು ಅಮ್ಮ ಗಟ್ಟಿಯಾಗಿ ತಬ್ಬಿಕೊಂಡು ತಾನೂ ಅಳತೊಡಗಿದಳು. "ನಿನಗೆ ಅಪ್ಪ ಅಮ್ಮ ಇಬ್ಬರೂ ನಾನೆ ಕಂದ . ದಯವಿಟ್ಟು ಇನ್ನು ಅಪ್ಪನ ಬಗ್ಗೆ ಕೇಳಬೇಡ . ಅವರಿಗೆ ನಾವು ಬೇಕಾಗಿಲ್ಲ ." ಅಳುತ್ತಲೆ ಹೇಳಿದ ಅಮ್ಮನನ್ನು ನೋಡಿ ಅವಳು ಅತ್ತದ್ದನ್ನೇ ನೋಡಿರದ ನಾನು , ಇನ್ನೆಂದೂ ಅವಳ ಬಳಿ ಅಪ್ಪನ ಬಗ್ಗೆ ಕೇಳಬಾರದೆಂದು ನಿರ್ಧರಿಸಿದ್ದೆ. ಆದರೆ ಅಪ್ಪನ ಹಂಬಲ ಮಾತ್ರ ಕಡಿಮೆಯಾಗಲಿಲ್ಲ . ನಾವೇಕೆ ಅವರಿಗೆ ಬೇಡವಾದೆವೆಂಬ ಹೊಸ ಕುತೂಹಲವೂ ಈಗ ಹುಟ್ಟಿಕೊಂಡಿತ್ತು. ಎಂದಾದರೊಂದು ದಿನ ಅಪ್ಪನನ್ನು ಕಂಡು ನನ್ನ ಪ್ರಶ್ನೆಗಳನ್ನಿಡಬೇಕು , ಸಾಧ್ಯವಾದರೆ ಅವರನ್ನು ಅಮ್ಮನ್ನೆದುರು ನಿಲ್ಲಿಸಿ ಅವಳನ್ನು ಸಂತೋಷಪಡಿಸಬೇಕೆಂದು ಅಂದೇ ನಿರ್ಧರಿಸಿದ್ದೆ.
ದಿನಗಳು ಉರುಳುತ್ತಿತ್ತು. ಕ್ರಮೇಣ ನಾನು ಗಟ್ಟಿಯಾಗಿದ್ದೆ, ’ ಅಪ್ಪ ಇಲ್ಲ ಅಮ್ಮನ ಮಗಳು’ ಇತ್ಯಾದಿ ಲೋಕದ ಟೀಕೆಗಳಿಗೆ ಕಿವುಡಾದೆ.
ನಾನಾಗ ಹೈಸ್ಕೂಲ್ ಕೊನೆ ವರ್ಷದಲ್ಲಿದ್ದೆ . ಯೌವ್ವನಕ್ಕೆ ಕಾಲಿರಿಸುತ್ತಿದ್ದುದರಿಂದ ಒಮ್ಮೆ ನೋಡಿದವರು ಇನ್ನೊಮ್ಮೆ ತಿರುಗಿ ನೋಡುವಷ್ಟು ಸುಂದರವಾಗಿದ್ದೆ. ದಿನಾ ಸ್ಕೂಲಿಗೆ ಹೋಗಿ ಬರುವಾಗ ಹತ್ತಾರು ಕಣ್ಗಳು ನನ್ನನ್ನೇ ಹಿಂಬಾಲಿಸುವುದರ ಅರಿವಾಗಿ ಹೆಮ್ಮೆಯೆನ್ನಿಸುತ್ತಿತ್ತು. ಹೀಗಿದ್ದಾಗಲೊಂದು ದಿನ ಪಕ್ಕದಲ್ಲಿದ್ದ ಖಾಲಿ ಮನೆಗೆ ಒಂದು ಪುಟ್ಟ ಸಂಸಾರ ಬಂದಿಳಿಯಿತು. ಗಂಡ , ಹೆಂಡತಿ , ನನ್ನದೇ ವಯಸ್ಸಿನ ಮಗಳು , ಕಾಲೇಜಿಗೆ ಹೋಗುತ್ತಿದ್ದ ಮಗ ಇರುವ ಆ ಸಂಸಾರವನ್ನು ನೋಡಿದಾಗ ನನಗೆ ಸಂತೋಷವಾಗುತ್ತಿತ್ತು . ನನಗಿರುವ ಕೊರತೆ ಮತ್ತಷ್ಟು ಕಾಡುತ್ತಿತ್ತು. ನನ್ನದೇ ವಯಸ್ಸಿನ ರೂಪ ಮತ್ತೆರಡು ದಿನದಲ್ಲೇ ನನ್ನ ಗೆಳತಿಯಾಗಿದ್ದಳು . ಅವಳ ಅಣ್ಣ ಶ್ರೀನಾಥನ ಪರಿಚಯವೂ ಅವಳ ಮೂಲಕ ಆಗಿತ್ತು. ನನ್ನನ್ನು ಕಂಡಾಗ ಮಿನುಗುವ ಅವನ ಕಣ್ಣುಗಳು ನನ್ನಲ್ಲಿ ಕನಸು ಮೂಡಿಸುತ್ತಿದ್ದವು.
ಸ್ವಲ್ಪ ದಿನಗಳಲ್ಲೇ ಅತ್ಮೀಯತೆಯಿಂದ ನನ್ನ ಮನಗೆದ್ದ ಶ್ರೀನಾಥನಲ್ಲಿ ನನ್ನೆಲ್ಲ ಕನಸುಗಳನ್ನು ಹಂಚಿಕೊಂಡಿದ್ದೆ. ನನ್ನ ಅಪ್ಪನನ್ನು ಕಾಣುವ ಬಯಕೆಯನ್ನೂ ಸಹಾ. ನನ್ನ ತಂದೆಯನ್ನು ಹೇಗಾದರೂ ಪತ್ತೆಹಚ್ಚಿ ಭೇಟೀ ಮಾಡಿಸುವೆನೆಂದು ಭರವಸೆಯಿತ್ತ ಅವನ ಮೇಲೆ ನನಗೂ ನಂಬಿಕೆ ಹುಟ್ಟಿತು. ಅವನ ಪ್ರೀತಿಯ ಮಾತುಗಳು ನನ್ನನ್ನು ಸುಂದರ ಲೋಕದಲ್ಲಿ ವಿಹರಿಸುವಂತೆ ಮಾಡುತ್ತಿತ್ತು.
....ಇನ್ನೂ ಇದೆ

23-Nov-2009

ಬಳುಕುವ ಬಳ್ಳಿಯ ಜಾಣ್ಮೆ

ಬಳುಕುವ ಬಳ್ಳಿಯೆಂದೊಡನೆ ಶಿಲ್ಪಾ ಶೆಟ್ಟಿಯನ್ನೋ ಐಶ್ವರ್ಯ ರ‍ೈಯನ್ನೊ ಕಲ್ಪಿಸಿಕೊಳ್ಳಬೇಡಿ . ನಾನು ಹೇಳಹೊರಟಿರುವುದು ನಿಜವಾದ ಬಳ್ಳಿಗಳ ಜಾಣ್ಮೆಯ ಬಗ್ಗೆ.

ಸಸ್ಯಗಳಿಗೆ ಅವುಗಳ ಕಾಂಡ , ನಮಗೆ ನಮ್ಮ ಬೆನ್ನೆಲುಬಿದ್ದಂತೆ. ಆಧಾರನೀಡುವುದರೊಂದಿಗೆ ಬೇರಿನಿಂದ ಹೀರಿದ ಪೋಷಕಾಂಶಗಳನ್ನು ಸಸ್ಯದ ಎಲ್ಲ ಭಾಗಗಳಿಗೆ ಮತ್ತು ಎಲೆಗಳಲ್ಲಿ ತಯಾರಾದ ಆಹಾರವನ್ನು ಉಳಿದೆಲ್ಲ ಭಾಗಗಳಿಗೆ ತಲುಪಿಸುವ ಕಾರ್ಯವು ಅದರದ್ದೆ. ಹೂವು ಎಲೆ ಕಾಯಿ ಹಣ್ಣುಗಳನ್ನು ಹಿಡಿದಿಡುವ ಅಂಗ ಕೂಡ. ಇಂತಿಪ್ಪ ಕಾಂಡಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ದೃಡವಾದ ಕಾಂಡಗಳು(ಮರಗಳ ಕಾಂಡಗಳು) ಮತ್ತು ಮೃದು ಅಥವ ದೃಡವಲ್ಲದ ಕಾಂಡಗಳು (ಬಳ್ಳಿಗಳ ಕಾಂಡಗಳು).

ದೃಡವಾದ ಕಾಂಡಗಳನ್ನುಳ್ಳ ಸಸ್ಯಗಳು ಹೆಚ್ಚು ಎತ್ತರವಾಗಿದ್ದು ಬಲಿಷ್ಠವಾಗಿರುತ್ತವೆ. ಆದರೆ ಮೃದುವಾದ ಕಾಂಡಗಳುಳ್ಳ ಸಸ್ಯಗಳು ಹೆಸರೆ ಸೂಚಿಸುವಂತೆ ದುರ್ಬಲವಾಗಿರುವುದರಿಂದ ಆಧಾರವಿಲ್ಲದೆ ಇರಲಾರವು. ಇವು ಬೆಳೆಯಲು ಬೇರೆ ಸಸ್ಯ, ಗೋಡೆ , ಕಲ್ಲು , ನೆಲ ಮುಂತಾದ ಯವುದಾದರರೂ ಆಧಾರ ಬೇಕೇಬೇಕು.

ಮೃದುವಾದ ಕಾಂಡಗಳುಳ್ಳ ಸಸ್ಯಗಳಲ್ಲಿ ಪ್ರಮುಖವಾದವುಗಳೆಂದರೆ ಬಳ್ಳಿಗಳು. ಈ ಬಳ್ಳಿಗಳಲ್ಲಿ ಅವುಗಳ ರಚನೆಯ ಆಧಾರದ ಮೇಲೆ ಅನೇಕ ಜಾತಿಗಳಿವೆ.

ಅವುಗಳಲ್ಲಿ ತನ್ನ ಯಾವುದೇ ಭಾಗದಿಂದ ಆಧಾರಕ್ಕೆ ಸುತ್ತಿಕೊಂಡು ಬೆಳೆಯುವ ಬಳ್ಳಿಗಳನ್ನು "climbers"ಎನ್ನುತ್ತಾರೆ.



ಇಂತಹ ಬಳ್ಳಿಗಳಲ್ಲಿ ಕೆಲವು ಮುಖ್ಯವಾದ ಕಾಂಡದಿಂದಲೆ ಆಧಾರವನ್ನು ಬಳಸಿರುತ್ತವೆ. ಇನ್ನು ಕೆಲವು ಬಳ್ಳಿಗಳಲ್ಲಿ ಸಸ್ಯದ ಕೆಲವು ಎಲೆ, ಎಲೆಯ ತುದಿ, ಮೊಗ್ಗು, ಮೊದಲಾದವುಗಳು ಮಾರ್ಪಾಡಾಗಿ ಸುರಳಿ ಸುರಳಿಯಾದ ತೆಳ್ಳನೆಯ ಸ್ಪ್ರಿಂಗ್ ನಂತಹ ರಚನೆಯಾಗಿ , ಅದರ ಸಹಾಯದಿಂದ ಆಧಾರವನ್ನು ಬಳಸಿ ನಿಲ್ಲುತ್ತವೆ. ಇಂತಹ ರಚನೆಗಳನ್ನು "tendril "ಎನ್ನುತ್ತಾರೆ.

ಈ ಟೆಂಡ್ರಿಲ್ ಗಳು ಹುಟ್ಟುವಾಗ ನೆಟ್ಟಗಿದ್ದು ನಂತರ ನಿಧಾನವಾಗಿ ಸುರಳಿಯಾಗುತ್ತವೆ. ಆಧಾರವನ್ನು ಇವು ಅದೆಷ್ಟು ಗಟ್ಟಿಯಾಗಿ ಹಿಡಿಯುತ್ತವೆಂದರೆ ಜೋರಾದ ಗಾಳಿ ಬೀಸಿದರೂ ಸಹ ಆಧಾರವಾಗಿರುವ ವಸ್ತು ಬೀಳಬಹುದೇ ಹೊರತು , ಬಳ್ಳಿ ಬೀಳುವುದಿಲ್ಲ.
ಆಧಾರವಾಗಿರುವ ಸಸ್ಯಗಳಿಂದ ಇವು ಬೇರೇನನ್ನೂ ಪಡೆಯುವುದಿಲ್ಲವಾದ್ದರಿಂದ ಅದಕ್ಕೆ ಅಪಾಯವಾಗುವುದಿಲ್ಲ.

ಇಂತಹ ಮಾರ್ಪಾಡುಗಳಿಂದ ಸಸ್ಯಗಳಿಗೆ ಗಟ್ಟಿಯಾದ ಕಾಂಡ ಪಡೆಯಲು ವ್ಯಯಿಸಬೇಕಾಗಿದ್ದ ಶಕ್ತಿಯ ಉಳಿತಾಯವಾಗುತ್ತದಲ್ಲದೆ , ಬಿರುಗಾಳಿ , ಬಿರುಮಳೆಯಂತಹ ಅವಗಡಗಳಿಂದ ಹಾನಿಯಾಗುವುದು ತಪ್ಪುತ್ತದೆ.


ಇಂತಹ ಸಸ್ಯಗಳಿಂದ ನಾವು ಮಾನವರು ಕಲಿಯಬೇಕಾದದ್ದೆಷ್ಟಿದೆಯಲ್ಲವೆ? ಕಷ್ಟದಲ್ಲಿರುವಾಗ ಯಾರಾದರು ಬಂದು ನಮ್ಮನ್ನು ಮೆಲೆತ್ತಲಿ ಎಂದು ಬಯಸುತ್ತೆವೆ ವಿನಃ , ಸಿಕ್ಕ ಆಧಾರವನ್ನು ಹಿಡಿದು ಮೇಲೆಬರಲು ಬೇಕಾದ "ಟೆಂಡ್ರಿಲ್" ನಂತಹ ಗುಣಗಳನ್ನು ಬೆಳೆಸಿಕೊಳ್ಳುವುದಿಲ್ಲ.



Posted by Picasa

16-Nov-2009

ಕಂಪ್ಯೂಟರ್ ಎಂಬ ಮಾಯಾವಿ

ಕಳೆದ ವಾರ ಏನೂ ಬರೆಯಲಾಗಲಿಲ್ಲ. ಬ್ಲಾಗ್ ಆರಂಭಿಸಿದ ನಂತರ ಪ್ರಥಮ ಬಾರಿಗೆ ತಪ್ಪಿಸಿಕೊಂಡಿದ್ದು ನನಗೇ ನಾನು ಹಾಕಿಕೊಂಡ ನಿಯಮ ಮುರಿದಂತಾಗಿ ಬೇಸರವಾಗಿತ್ತು. ಆದ್ರೆ ಇದಾಗಿದ್ದು ನನ್ನ ಸೋಮಾರಿತನದಿಂದೇನೂ ಅಲ್ಲ ಎಂದು ನನಗೆ ನಾನೇ ಸಮಾಧಾನ ಪಟ್ಟುಕೊಳ್ಳುತ್ತಿದ್ದೇನೆ.


ಇದ್ದಕಿದ್ದಂತೆ ಒಂದು ದಿನ ನನ್ನ ಕಂಪ್ಯೂಟರ್ , ಬೇಡಿಕೆ ಈಡೇರದಾಗ ಗಂಡನಬಳಿ ಅಸಹಕಾರ ಚಳುವಳಿ ನಡೆಸುವ ಹೆಂಡತಿಯಂತಾಡಲು ಪ್ರಾರಂಭಿಸಿತು. ಬರಹ ,ನುಡಿ, ಯಾವುದೂ ನನ್ನ ಮಾತು ಕೇಳುತ್ತಿರಲಿಲ್ಲ. ಕೈಕಾಲು ಕಟ್ಟಿಹಾಕಿದ ಮಂಗನಂತಾಗಿತ್ತು ನನ್ನ ಪರಿಸ್ಥಿತಿ.


ಸರ್ವೀಸ್ ಮ್ಯಾನ್ ಗೆ ಫೋನ್ ಮಾಡಿದಾಗ ಇನ್ನರ್ಧ ಘಂಟೆಯಲ್ಲಿ ಬರುತ್ತೇನೆಂದವನು ನಾಲ್ಕು ದಿನದ ನಂತರ ಬಂದ. ಸದಾ ನಗು ಮರೆತ ರಾಜಕುಮಾರಿಯ ಮುಖಭಾವದಲ್ಲೇ ಇರುವ ಅವನಲ್ಲಿ ನನ್ನ ಕಂಪ್ಯೂಟರಿಗೇನಾಗಿದೆ ಎಂದು ತಿಳಿದುಕೊಳ್ಳುವುದು ಸಿಡುಕ ವೈದ್ಯರಲ್ಲಿ ನಮ್ಮ ರೋಗದ ಬಗ್ಗೆ ವಿಚಾರಿಸಿದಷ್ಟೇ ಕಷ್ಟ ಎಂಬ ಅರಿವಿದ್ದುದರಿಂದ ಹೇಗಾದರೂ ರಿಪೇರಿ ಮಾಡಿಕೊಡಪ್ಪ ಎಂದಷ್ಟೇ ವಿನಂತಿಸಿದೆ.


ಕೆಲಹೊತ್ತು ಏನನ್ನೋ ಪರೀಕ್ಷಿಸಿ "ಇದನ್ನು ರಿಪೇರಿ ಮಾಡಲು ನಾಲ್ಕಾರು ಘಂಟೆಗಳೇ ಬೇಕು . ಸಿಪಿಯು ತೆಗೆದುಕೊಂಡು ಹೋಗಬೇಕು " ಎಂದು ಆತ ಹೇಳುತ್ತಿದ್ದಂತೆ ನನಗೆ ಅರ್ಥವಾಗಿತ್ತು ಇನ್ನು ಇದು ನನಗೆ ಸಿಗುವುದು ವಾರದ ನಂತರವೇ ಎಂದು.


ಅಂತೂ ವಾರದ ನಂತರ ಮನೆಗೆ ವಾಪಾಸ್ ಬಂದಿತು.(ಗಂಡನ ಜೇಬಿಗೂ ಸ್ವಲ್ಪ ದೊಡ್ಡ ಕತ್ತರಿಯೇ ಬಿತ್ತೆನ್ನಿ.) ಅಂತೂ ಕಳೆದುಹೋದ ನಿಧಿ ಸಿಕ್ಕಂತಾಗಿತ್ತು.

ಅಂದಹಾಗೆ ಕಂಪ್ಯೂಟರ್ ಮೇಲಿನ ನನ್ನ ಈ ಅವಲಂಬನೆ ನನಗೇ ನಗು ತರಿಸುತ್ತಿದೆ. ಸುಮ್ಮನೇ ಬಿಡುವಿನ ವೇಳೆ ಕಳೆಯಲೆಂದು ಇದರ ಸಹವಾಸಕ್ಕೆ ಬಿದ್ದವಳು ನಾನು. ಈಗ ಅಂತರ್ಜಾಲದಲ್ಲಿ , ಬ್ಲಾಗ್ ಲೋಕದಲ್ಲಿ ಅಲೆಯುವುದು ಚಟವಾಗಿಬಿಟ್ಟಿದೆ. ಟೆಲಿಧಾರಾವಾಹಿಗಳನ್ನು ಪರಮಭಕ್ತಿಯಿಂದ ನೋಡುವ ಹೆಂಗಸರನ್ನು ಗೇಲಿ ಮಾಡುತ್ತಿದ್ದ ನಾನು ಈಗ ಅದರ ಅಪ್ಪನಂತಿರುವ ಈ ಮಾಯಾಲೋಕಕ್ಕೆ ಅಂಟಿಕೊಂಡಿರುವುದನ್ನು ಅರಿತು ನನಗೇ ನಗು ಬರುತ್ತಿದೆ.

ಈ ಮಾಯಾವಿಯ ತಾಕತ್ತೆ ಅಂತಹುದು ಅಲ್ಲವೆ . ಈಗ ಕಂಪ್ಯೂಟರ್ ಉಪಯೋಗಿಸದವರನ್ನು ಅನಕ್ಷರಸ್ತರಂತೆಯೆ ಕಾಣುತ್ತಾರೆ.
ಫೋನ್ ನಂಬರನ್ನು ಕೇಳುವಷ್ಟೇ ಸಹಜವಾಗಿ ಇಮೇಲ್ ಅಡ್ರೆಸ್ ಕೇಳುವ ದಿನಗಳಿವು. ಮದುವೆಯಾಗುವ ಹೆಣ್ಣಿಗೆ ಹಾಡು ಹಸೆ ಅಡಿಗೆ ಬರುತ್ತದಾ ಎಂದು ನೋಡುವ ಕಾಲ ಹೋಗಿ ಕಂಪ್ಯೂಟರ್ ಕಲಿತಿದ್ದಾಳ ಎಂದು ಕೇಳುತ್ತಾರೆ. ನಮ್ಮ ಜನಾಂಗದಲ್ಲಂತೂ ಕಂಪ್ಯೂಟರ್ ಕಲಿತ ವರನಿಗೆ ಮಾತ್ರ ಡಿಮ್ಯಾಂಡ್.
ನಾವು ಚಿಕ್ಕವರಿದ್ದಾಗ ಅಡಲು ಸೈಕಲ್ ಕೊಡಿಸು ಎಂದು ಅಪ್ಪನಲ್ಲಿ ದುಂಬಾಲು ಬೀಳುತ್ತಿದ್ದಂತೆ ಈಗಿನ ಮಕ್ಕಳು ಆಡಲು ಕಂಪ್ಯೂಟರ್ ಕೊಡಿಸು ಎಂದು ಕೇಳುತ್ತವೆ.
ಒಂದು ಕಡೆ ಜಗತ್ತಿನೆಲ್ಲಡೆ ಹೊಸ ಹೊಸ ತಂತ್ರಜ್ಞಾನ ಅಭಿವೃಧ್ಧಿಗೊಳಿಸಲು ಪಂಡಿತರಿಂದ ಬಳಸಲ್ಪಡುವ ಕಂಪ್ಯೂಟರ್ ಅದೇವೇಳೆಗೆ ಜನಸಾಮಾನ್ಯರ ಸಂಪರ್ಕ ಸಾಧನವಾಗಿ, ಮಕ್ಕಳಾಟಿಕೆಯ ವಸ್ತುವಾಗಿಯೂ ಬಳಕೆಯಲ್ಲಿರುವುದು ಆಶ್ಚರ್ಯವಲ್ಲವೆ ? ಬಹುಶಃ ಬೇರಾವುದೇ ವಸ್ತುವೂ ಸಹ ಇಷ್ಟೊಂದು ವ್ಯಾಪಕವಾಗಿ ಪಂಡಿತ ಪಾಮರರ ಬಳಕೆಗೆ ಒದಗುವುದಿಲ್ಲವೇನೊ .

03-Nov-2009

ಮಹಾನ್ ಮೊಸಳೆ

ಮೊಸಳೆಗಳು ಅತ್ಯಂತ ಪುರಾತನ ಕಾಲದಿಂದ ಅಂದರೆ ಸುಮಾರು ಇನ್ನೂರು ಮಿಲಿಯನ್ ವರ್ಷಗಳಿಂದ ಭೂಮಿಯಲ್ಲಿ ವಾಸವಾಗಿವೆ. ಜೀವವಿಜ್ಞಾನಿಗಳು ಇವನ್ನು Reptile ಗಳ ಜಾತಿಗೆ ಸೇರಿಸುತ್ತಾರೆ. ಆ ಕಾಲದಲ್ಲಿ ಭೂಮಿಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ದೈತ್ಯೋರಗಗಳು ಅರವತ್ತೈದು ಮಿಲಿಯನ್ ವರ್ಷಗಳ ಹಿಂದೆ ಕಾರಣಾಂತರಗಳಿಂದ ಸಾಮೂಹಿಕವಾಗಿ ನಾಶಹೊಂದಿದರೂ ಈ ಮೊಸಳೆಯ ಜಾತಿಗೆ ಸೇರಿದ ಜೀವಿಗಳು ಮಾತ್ರ ಇದುವರೆಗೂ ಉಳಿದಿವೆ.

ನದಿ, ಹೊಳೆ ,ಆಳವಾದ ಕೆರೆ ಮುಂತಾದ ಸಿಹಿನೀರಿಲ್ಲಿ ಮತ್ತು ಉಪ್ಪುನೀರಿರುವ ಜೌಗು ಪ್ರದೇಶದಲ್ಲಿ ವಾಸವಾಗಿರುವ ಇವು ನೆಲ ನೀರೆರಡರಲ್ಲೂ ವಾಸಿಸಬಲ್ಲ ಉಭಯವಾಸಿಗಳು.

ದೇಹವು ನೀರಿನಲ್ಲಿ ವಾಸಿಸಲು ಅನುಕೂಲಕರವಾದ ಎಲ್ಲ ಮಾರ್ಪಾಡುಗಳಿವೆ. ಈಜಲು ಅನುಕೂಲಕರವಾದ ಮೀನಿನಾಕಾರದ ದೇಹ, ನೀರಿನಲ್ಲಿ ವೇಗವಾಗಿ ತಿರುಗಲು ಸಹಾಯಕವಾದ ಜಾಲಪಾದಗಳು, ಶಕ್ತಿಶಾಲಿ ಬಾಲ, ನೀರುನಿರೋಧಕ ಪೊರೆಗಳಿರುವ ಕಣ್ಣು, ಇವುಗಳ ಸಹಾಯದಿಂದ ಇದು ನೀರುನಲ್ಲಿ ಈಜಬಲ್ಲದು,ಮುಳುಗಿ ನೆಲಕ್ಕೆ ಕಾಲನ್ನೂರಿ ನೆಡೆಯಬಲ್ಲದು.


ಇವುಗಳ ಹೊಟ್ಟೆಯ ಅಂದರೆ ಕೆಳಭಾಗದ ಚರ್ಮ ಮೃದುವಾಗಿದೆ. ಆದರೆ ಬೆನ್ನ ಚರ್ಮವು ಎಷ್ಟು ದಪ್ಪವೆಂದರೆ ಬಾಣ ,ಗುಂಡಗಳಿಂದ ಕೂಡ ಇದನ್ನು ಭೇಧಿಸುವುದು ಕಷ್ಟ.

ಮೊಸಳೆಗಳು ಬೇಟೆಯನ್ನು ಕಚ್ಚಿ ಹಿಡಿದು ಹರಿದು ತಿನ್ನುತ್ತವೆ . ಬೇಟೆ ಹಿಡಿಯಲು ಬೇಕಾದ ವೇಗವಾದ ಚಲನಾ ಸಾಮರ್ಥ್ಯ ಬಲವಾದ ಕಾಲಿನ ಸ್ನಾಯುಗಳಿಂದ ಲಭ್ಯ. ಮೊಸಳೆಗಳು ಬೇಟೆಯನ್ನು ಒಮ್ಮೆ ಕಚ್ಚಿ ಹಿಡಿದರೆ ಬಿಡಿಸುವುದು ತುಂಬಾ ಕಷ್ಟ. ನಮ್ಮ ಪುರಾಣಗಳಲ್ಲಿ ಬರುವ ಗಜೇಂದ್ರ ಮೋಕ್ಷದ ಕಥೆ ನೆನಪಿಸಿಕೊಳ್ಳಿ. ಆನೆಯಂತಹ ಶಕ್ತಿಶಾಲಿ ಪ್ರಾಣಿಗೂ ಬಿಡಿಸಿಕೊಳ್ಳಲು ಸಾಧ್ಯವಾಗದಷ್ಟು ಬಲವಾದ ಹಿಡಿತವದು. ಅದರ biting force 5000 pounds/sq inch ಗಳಿಗಿಂತಲೂ ಹೆಚ್ಚಂತೆ. ಇತರ ಶಕ್ತಿಶಾಲಿ ಬೇಟೆಗಾರರಾದ ಚಿರತೆ, ಹೈನಗಳಿಗಿರುವ ೧೦೦೦-೧೫೦೦ ಪೌಂಡ್ /ಸ್ಕೈರ‍್ ಇಂಚ್ ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಎಷ್ಟು ಹೆಚ್ಚೆಂದು ಅರಿವಾಗುತ್ತದೆ.

ಬಲವಾದ ದವಡೆಯ ಸ್ನಾಯುಗಳಿಂದ ಈ ಕಾರ್ಯ ಸಾದ್ಯವಾಗಿದೆ. ಆದರೆ ಅವು ಬಾಯಿತೆರೆಯಲು ಸಹಾಯಕವಾಗುವ ಸ್ನಾಯುಗಳು ತುಂಬ ದುರ್ಬಲವಾಗಿದೆ. ಆದ್ದರಿಂದಲೆ ಮೊಸಳೆಯನ್ನು ಹಿಡಿಯುವವರು ಅದರ ಬಾಯನ್ನು ದಪ್ಪ ರಬ್ಬರ‍್ ಬ್ಯಾಂಡ್ ನಿಂದ ಕಟ್ಟಿದರೂ ಸಾಕು ಅದು ಬಾಯಿ ತೆರೆಯಲಾರದು!

ಚಟುವಟಿಕೆ ಕಡಿಮೆಯಾದ್ದರಿಂದ ಆಹಾರದ ಅವಶ್ಯಕತೆಯೂ ಕಡಿಮೆ. ಸುಮಾರು ವಾರಕ್ಕೊಮ್ಮೆ ಆಹಾರದ ಬೇಟೆ. ಬೇಟೆಯಾಡುವಾಗ ಅದನ್ನು ಕಚ್ಚಿ ಹರಿಯುವಾಗ ಒಂದಕ್ಕೊಂದು ಸಹಾಯ ಮಾಡುವಷ್ಟು ಬುದ್ಧಿಯಿದೆ. ಬೇಟೆಯ ಮೂಳೆ ಚಿಪ್ಪು ಮುಂತಾದ ಗಟ್ಟಿವಸ್ತುಗಳನ್ನೂ ಜೀರ್ಣಸಿಕೊಳ್ಳುತ್ತದೆ. ಇದಕ್ಕೆ ಕಾರಣ ಅದರ ಅತಿ ಆಮ್ಲೀಯ ಜೀರ್ಣರಸಗಳು ಮತ್ತುಅದು ನುಂಗುವ ಕಲ್ಲು!!!. ಅದರ ಜಠರದಲ್ಲಿರುವ ಈ ಕಲ್ಲುಗಳು ಜೀರ್ಣಕ್ರಿಯಯಲ್ಲಷ್ಟೇ ಅಲ್ಲದೆ ದೆಹದ ಸಮತೋಲನ ಕಾಯ್ದುಕೊಳ್ಳಲೂ ಸಹಕಾರಿಯಾಗಿವೆ.

ಸಾಮಾನ್ಯವಗಿ ಹಕ್ಕಿಗಳನ್ನು ತಿನ್ನುತ್ತದೆ. ಅದರೆ egyption plover ಎಂಬ ಹಕ್ಕಿ ಮಾತ್ರ ಧೈರ್ಯವಾಗಿ ಅದರ ಬಾಯೊಳಗೇ ಹೋಗಿ ಹಲ್ಲುಗಳಲ್ಲಿ ಸಿಕ್ಕಿಕೊಂಡಿರುವ ಮಾಂಸದ ತುಣುಕನ್ನು ತಿನ್ನುತ್ತದೆ!. ಮೊಸಳೆಯ ದಂತವೈದ್ಯ ಈ ಹಕ್ಕಿ!!

ಶೀತರಕ್ತ ಪ್ರಾಣಿಯಾದ್ದರಿಂದ ದೇಹದ ಉಷ್ಣತೆ ವಾತಾವರಣವನ್ನು ಅವಲಂಬಿಸಿದೆ. ಬೆವರಿನ ಗ್ರಂಥಿಗಳಿಲ್ಲವಾದ್ದರಿಂದ ಅಧಿಕ ಉಷ್ಣತೆಯನ್ನು ಬಾಯಿಂದ ಹೊರಹಾಕುತ್ತದೆ.
ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಇವು ತಮ್ಮ ವಾಸಸ್ಥಾನವನ್ನು ನೆನಪಿಟ್ಟುಕೊಳ್ಳಬಲ್ಲವು . ದೂರ ಒಯ್ದು ಬಿಟ್ಟರೂ ಮತ್ತೆ ಮೂಲಸ್ಥಳಕ್ಕೇ ಹಿಂದಿರುಗುತ್ತವೆ.


ಇವುಗಳ ಆಯಸ್ಸು ಸುಮರು ಎಪ್ಪತ್ತು ವರ್ಷಗಳು. ಪ್ರಾಪ್ತ ವಯಸ್ಕ ಹೆಣ್ಣು ನೀರಿನ ದಡದಲ್ಲಿ ಕಸ ಕಡ್ಡಿ ಮಣ್ಣು ಮರಳುಗಳನ್ನು ಪೇರಿಸಿ ಒಮ್ಮೆಲೆ ೪೦ ರಿಂದ ೮೦ ಮೊಟ್ಟೆಗಳನ್ನಿಡುತ್ತದೆ. ಕೊಳೆಯುವ ಕಸ ಕಡ್ಡಿಗಳ ಶಾಖಕ್ಕೆ ಮೊಟ್ಟೆಗಳೊಡೆಯುತ್ತವೆ. ಒಡೆಯುವಾಗ ತಾಯಿ ಸಹಾಯ ಮಾಡುತ್ತದೆ. ಕೆಲವು ದಿನಗಳವರೆಗೆ ಮರಿಗಳನ್ನು ರಕ್ಷಿಸುತ್ತದೆ.
ಆಶ್ಚರ್ಯವೆಂದರೆ ಮೊಸಳೆಗಳಲ್ಲಿ ಮರಿಗಳ ಲಿಂಗ ನಿರ್ಧಾರವಾಗುವುದು ಅಲ್ಲಿಯ ಉಷ್ಣತೆಯನುಗುಣವಾಗಿ. ನಮ್ಮಂತೆ ಲಿಂಗ ನಿರ್ಧರಿಸುವ ವರ್ಣತಂತುಗಳು ಅವಕ್ಕಿಲ್ಲ. ಸುಮಾರು ಮುವತ್ತು ಡಿಗ್ರಿ ಉಷ್ಣತೆಯಿದ್ದರೆ ಮೊಟ್ಟೆಯೊಳಗಿನ ಮರಿ ಗಂಡಾಗುತ್ತದೆ. ಅದಕ್ಕಿಂತ ಕಡಿಮೆ ಅಥವಾ ಹೆಚ್ಚಿನ ಉಷ್ಣತೆಯಿದ್ದರೆ ಹೆಣ್ಣಾಗಿ ಬೆಳೆಯುತ್ತದೆ!!

ಈ ಬಲಿಷ್ಟದೇಹಿಗೆ ತೊಂದರೆ ಕೊಡುವ ವೈರಿ ಮಾನವನೇ ಹೊರತು ಬೇರಾರಿಲ್ಲ. ಜಾಕೆಟ್, ಪರ್ಸ್, ಶೂ, ಹ್ಯಾಟ್ ಮುಂತಾವುಗಳನ್ನು ಅದರ ಚರ್ಮದಿಂದ ತಯಾರಿಸಬಹುದು. ಅವುಗಳ ಮಾಂಸವನ್ನು ಕೆಲವು ದೇಶಗಳಲ್ಲಿ ಆಹಾರವಾಗಿ ಉಪಯೋಗಿಸುತ್ತಾರೆ. ಇವುಗಳ ಆಸೆಗಾಗಿ ಮಾನವ ಈ ಜೀವಿಗಳನ್ನು ಬೇಟೆಯಾಡುವುದು ನಿರಂತರವಾಗಿ ನಡೆಯುತ್ತಿದೆ.

{ಈ ಫೋಟೊಗಳನ್ನು ಚನ್ನೈಯಲ್ಲಿರುವ ಕ್ರೊಕೊಡೈಲ್ ಪಾರ್ಕನಲ್ಲಿ ತೆಗೆದದ್ದು. ಇದು ಏಷ್ಯಾದ ದೊಡ್ಡ ಮೊಸಳೆ ಸಂಶೋದನಾಕೇಂದ್ರಗಳಲ್ಲೊಂದು. ಅನೇಕ ಜಾತಿಯ ಮೊಸಳೆಗಳನ್ನು ಇಲ್ಲಿ ನೋಡಬಹುದು. ಅವರು ಕೊಡುವ ಮರಿ ಮೊಸಳೆಯನ್ನು, ಹಾವನ್ನು ಹಿಡಿದು ಸಂತಸ ಪಡಬಹುದು.}
Posted by Picasa

26-Oct-2009

ನಿರ್ಭಾವುಕ

ಅಗೋ ವಸಂತದ ಎಳೆ ಚಿಗುರಿನ ಮೋಹಕ ಬಣ್ಣ

ಕೀಟಗಳನ್ನು ಸೆಳೆಯುವ ಈ ಹೂವಿನ ಘಮ

ಹರಿಯುವ ಇರುವೆಗಳ ಸೈನಿಕ ಶಿಸ್ತು

ಹಾರುವ ಜೇನುಹುಳುಗಳ ಸಾಂಘಿಕ ಜೀವನ

ಮರಿಗೆ ಗುಟುಕು ನೀಡುವ ಹಕ್ಕಿಗಳ ಮಮತೆ

ಹದಿಹರೆಯದ ಹುಡುಗನ ದನಿಯ ಒಡಕು

ತುಂಬು ಜವ್ವನೆಯ ನಸು ನಾಚಿಕೆ

ಪಾರ್ಕನ ಪ್ರೇಮಿಗಳ ಸಿಹಿ ಚುಂಬನ

ಗಂಡನ ಬೆತ್ತಲೆ ಬಾಹುಗಳ ಬಿಸಿಯಪ್ಪುಗೆ

ನಿದ್ರೆಗೆಟ್ಟು ಎಳೆಮಗುವಿನ ಲಾಲನೆಗೈಯುವ ತಾಯ ಪ್ರೀತಿ

ಅಬ್ಬಾ!! ಈ ಲೋಕ ಎಷ್ಟು ಸುಂದರ!!

ಕಿಟಕಿಯಾಚೆ ನೋಡುತ್ತಾ ಭಾವುಕತೆಯಿಂದ ಉದ್ಗರಿಸಿದಳು ಆಕೆ

ವೈಜ್ಞಾನಿಕ ಗ್ರಂಥವೊಂದರಲ್ಲಿ ಹುದುಗಿಸಿದ್ದ ತಲೆಎತ್ತದೆ ಉತ್ತರಿಸಿದ ಆತ

"ಇವೆಲ್ಲಕ್ಕೂ ಕಾರಣ ಕೇವಲ ಹಾರ್ಮೋನುಗಳು".

14-Oct-2009

ನಮ್ಮೂರ ದೀಪಾವಳಿ.

ದೀಪಾವಳಿ ಹಬ್ಬಗಳ ರಾಜ. ನಮ್ಮ ಊರಿನಲ್ಲಿ "ದೊಡ್ಡಹಬ್ಬ" ಎಂದೇ ಇದನ್ನು ಕರೆಯುತ್ತಾರೆ.ಮಳೆಗಾಲ ಆಗಷ್ಟೆ ಹಿಂದೆಸರಿದು ಮೆಲ್ಲಗೆ ಚಳಿಗಾಲ ಇಣುಕುವ ಸಮಯ. ಅಡಿಕೆ ತೋಟಕ್ಕೆ ಔಷಧ ಹೊಡೆಸುವುದು,ಕಳೆ ತೆಗೆಸುವುದು, ಭತ್ತದ ಗದ್ದೆಯ ಅಗೆ ಹಾಕುವುದು , ನೆಟ್ಟಿ ಮುಂತಾದ ಮಳೆಗಾಲದ ಕೆಲಸಗಳೆಲ್ಲ ಮುಗಿದಿರುತ್ತದೆ.ಮುಂದೆ ಬರುವ ಕೊನೆ ಕೊಯಿಲು,ಗದ್ದೆ ಕೊಯಿಲಿನ ನಡುವೆ ಬರುವ ಈ ಹಬ್ಬ ಒಂದು ರೀತಿಯಲ್ಲಿ ರಿಫ್ರೆಶ್ ಆಗಲು ಅವಕಾಶ ಮಾಡಿಕೊಡುತ್ತದೆ.

ದೀಪಾವಳಿಯೆಂದರೆ ನನಗೆ ನೆನಪಾಗುವುದು ಹತ್ತಿಪ್ಪತ್ತು ವರುಷಗಳ ಹಿಂದೆ ನನ್ನ ಬಾಲ್ಯದಲ್ಲಿ ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲಿ ಆಚರಿಸುತ್ತಿದ್ದ ರೀತಿ.
ಒಂದುವಾರದಿಂದಲೆ ಹಬ್ಬಕ್ಕೆ ತಯಾರಿ ಪ್ರಾರಂಭ.ಮಳೆಗಾಲದಲ್ಲಿ ಲೆಕ್ಕವಿಲ್ಲದಷ್ಟು ಜಾತಿಯ ಕಳೆ ಬೆಳೆದು ಮಿನಿ ಕಾಡುಗಳಂತಾಗುವ ಮನೆಯಂಗಳವನ್ನು ಆಳುಗಳೊಂದಿಗೆ ಸೇರಿ ಸ್ವಚ್ಛಗೊಳಿಸುವ ಕೆಲಸ ಗಂಡಸರದಾದರೆ,ಮನೆಯೊಳಗಿನ ಬಲೆ ಧೂಳು ಕಸಗಳನ್ನು ಕೊಡವಿ ಸ್ವಚ್ಛಗೊಳಿಸುವ ಕೆಲಸ ಹೆಂಗಸರದು.ನಮ್ಮ ಮನೆಯಲ್ಲಿ ನಾನು ನನ್ನ ತಂಗಿ ಪ್ರತಿ ದೀಪಾವಳಿಗೂ ಮೊದಲು ಅಮ್ಮನಿಂದ ಸಹಸ್ರನಾಮಾರ್ಚನೆಗೊಳಗಾಗುತ್ತಿದ್ದೆವು. ಮಳೆಗಾಲದಲ್ಲಿ ಸಿಗುತ್ತಿದ್ದ ಚಿತ್ರವಿಚಿತ್ರ ಬಣ್ಣದ ಓಡುಹುಳ(beetles)ಗಳಿಂದ ಹಿಡಿದು ಪೇಪರಿನ ಮೂಲೆಯಲ್ಲೆಲ್ಲೊ ಬಂದ ಶಾರುಖ್ ಖಾನ್ ಚಿತ್ರದವರೆಗೆ ಸಂಗ್ರಹವಾಗುತ್ತಿದ್ದ ನಮ್ಮ ಸಂಗ್ರಹಾಲಯ{ಓದುವ ಮೇಜು,ಪುಸ್ತಕಗಳನ್ನಿಡುವ ಕಪಾಟು}ವನ್ನು ಸ್ವಚ್ಛಗೊಳಿಸುವುದೇ ಅಮ್ಮನಿಗೆ ದೊಡ್ಡ ಸವಾಲಾಗುತ್ತಿತ್ತು.

ಹೀಗೆ ಮನೆಯ ಒಳ ಹೊರಗೆಲ್ಲ ಆದಮೇಲೆ ಮನೆಯೆದುರಿನ ರಸ್ತೆಯನ್ನು ಸ್ವಚ್ಚಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸುತ್ತಾರೆ.
ನಮ್ಮೂರಿನಲ್ಲಿ ದೀಪಾವಳಿಯ ಆಚರಣೆ ಮುಖ್ಯವಾಗಿ ನಡೆಯುವುದು ಎರಡು ದಿನ "ಬೂರೆ ಹಬ್ಬ" ಮತ್ತು "ಗೋಪೂಜೆ".
ಬೂರೆ ಹಬ್ಬದ ಹಿಂದಿನ ದಿನದಿಂದ ಹಬ್ಬದ ಆಚರಣೆಗಳು ಪ್ರಾರಂಭವಾಗುತ್ತಿತ್ತು. ಆ ದಿನ ಬಚ್ಚಲಿನ ಹಂಡೆ ನೀರಿನ ತೊಟ್ಟಿಗಳನ್ನು ತೊಳೆದು ಹೊಸನೀರು ತುಂಬುತ್ತಿದ್ದರು. ಸಂಜೆಯ ವೇಳೆಗೆ ಹಂಡೆಯನ್ನು ಕಹಿಹಿಂಡಲೆ ಬಳ್ಳಿ ಸುತ್ತಿ ಅಲಂಕರಿಸುತ್ತಇದ್ದರು. ರಾತ್ರಿ ಕಳುವಾಗುವ ಭಯದಿಂದ ಕೈತೋಟದಲ್ಲಿ ಬೆಳೆದ ತರಕಾರಿ ಹಣ್ಣು ಹೂವುಗಳನ್ನು ಕೊಯ್ದಿಡುತ್ತಿದ್ದೆವು. ಆ ದಿನ ರಾತ್ರಿ ಊರಿನ ಹುಡುಗರಿಗೆ ಹಬ್ಬ. "ಬೂರೆ ಹಾಯುವುದು " ಎಂದರೆ ಊರಿನ ಮನೆಗಳಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು ಕೊಯ್ದು ತಿನ್ನುವುದು,ಎಳನೀರನ್ನಿಳಿಸಿ ಕುಡಿಯುವುದು ಮೊದಲಾದ ಪುಂಡಾಟಿಕೆ ಮಾಡಲು ಮುಕ್ತ ಅವಕಾಶ. ನಮ್ಮೂರಿನ ತರಲೆ ಹುಡುಗರು ಮೊದಲು ಆಯ್ದುಕೊಳ್ಳುತ್ತಿದ್ದುದೇ ತನ್ನ ಎಳನೀರುಗಳನ್ನು ಕಪಾಡಿಕೊಳ್ಳಬೇಕೆಂದು ಅಂಗಳದಲ್ಲಿ ನಾಲ್ಕು ಬಲ್ಬ್ ಉರಿಸಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ರಾಮಹಿರಿಯಪ್ಪನ ಮನೆಯನ್ನು. ಅದು ಹೇಗೊ ಅವರನ್ನು ಏಮಾರಿಸಿ ಎಳನೀರುಗಳನ್ನಿಳಿಸಿ ಕುಡಿದು ಅವಶೇಷಗಳನ್ನು ಅವರಿಗೆ ಕಾಣುವಂತೆಸೆದು ಓಡುತ್ತಿತ್ತು ಗುಂಪು.ಸರಿ, ಹಿರಿಯಪ್ಪ ಮುಂದಿನ ನಾಲ್ಕು ದಿನ ಎಲ್ಲ ಹುಡುಗರನ್ನು ಬೈಯ್ಯುತ್ತ ಓಡಾಡುತ್ತಿದ್ದರು. ಯಾರದೋ ಚಪ್ಪಲಿಯನ್ನೊಯ್ದು ಇನ್ನರದೋ ಮನೆಯ ಅಂಗಳದಲ್ಲಿ ಹಾಕುವುದು,ರಾತ್ರಿಯಿಡೀ ಶಿಳ್ಳೆ ಹೊಡೆಯುತ್ತಾ ಊರು ಸುತ್ತುವುದು ಮುಂತಾದ ಚೇಷ್ಟೆ ಮಾಡುತ್ತಿದ್ದ ಆ ಹುಡುಗರ ಅದೃಷ್ಟಕ್ಕೆ ನಾವೊಂದಿಷ್ಟು ಹುಡುಗಿಯರು ಕರುಬುತ್ತಿದ್ದೆವು.

ಮರುದಿನ ಅಂದರೆ ಬೂರೆ ಹಬ್ಬದ ದಿನ ಬೆಳಗಿನ ಜಾವದಲ್ಲಿ ನಡೆಯುವ ಗಂಗೆ ಪೂಜೆಗೆ ಜಾಗಟೆ ಹೊಡೆಯಲೆಂದು ಬೇಗ ಎಬ್ಬಿಸುತ್ತಿದ್ದರು.ಬಚ್ಚಲೊಲೆಯ ನಿಗಿನಿಗಿ ಉರಿಯುವ ಕುಂಟೆ, ಹಂಡೆಯಲ್ಲಿ ಮರಳುವ ಕುದಿನೀರು, ಕಹಿಹಿಂಡಲೆ ಬಳ್ಳಿಯ ನರುಗಂಪು,ನಂತರದ ಅಭ್ಯಂಜನಕ್ಕೆ ಮನಸ್ಸನ್ನು ಸಿದ್ಧವಾಗಿಸುತ್ತಿತ್ತು.ಹದವಾದ ಬಿಸಿನೀರ ತೊಟ್ಟಿಯಲ್ಲಿ ಕುಳಿತು ಹಗುರಾಗುವುದು ಇಷ್ಟವಾದರೂ ಅದಕ್ಕು ಮೊದಲು ಮೈಗೆಲ್ಲ ಎಣ್ಣೆ ಹಚ್ಚಿಕೊಳ್ಳುವುದು ಕಷ್ಟವಾಗುತ್ತಿತ್ತು. ಅಭ್ಯಂಜನದ ನಂತರ ಆಗುವ ಸುಸ್ತಿನ ಪರಿಹಾರಕ್ಕೆ ಹುಣಸೇಹಣ್ಣಿನ ಪಾನಕ ಕುಡಿದು ಮಲಗಿದರೆ ಹಗುರವಾಗಿ ತೇಲಿದ ಅನುಭವ. ನಂತರ ಕಡುಬು ,ಚಿತ್ರಾನ್ನದ ಊಟ.

ಮರುದಿನ ಪಚ್ಚೆತೆನೆ,ಅಡಿಕೆಕಾಯಿ ಸೇರಿಸಿ ಕಟ್ಟಿಡುವುದು,ಚೆಂಡುಹೂವುಗಳನ್ನು ಕೊಯ್ದು ಮಾಲೆ ಮಾಡುವುದು ಕೊಟ್ಟಿಗೆಯನ್ನು ಶೃಂಗರಿಸುವುದು ಮೊದಲಾದ ಕೆಲಸಗಳನ್ನು ನಾನು ಚಿಕ್ಕಪ್ಪ ಮಾಡುತ್ತಿದ್ದೆವು.

ನಂತರ ಗೋಪೂಜೆ. ಬೆಳಗ್ಗೆ ಬೇಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುವ ಸಂಭ್ರಮ. ಅಡಿಗೆ ಮನೆಯಿಂದ ಹಬ್ಬದಡಿಗೆಯ ಘಮ. ಕೊಟ್ಟಿಗೆಯ ಎಲ್ಲ ಜಾನುವಾರುಗಳನ್ನು ಶೃಂಗರಿಸಿದರೂ ಅಗ್ರಪೂಜೆ ಸಲ್ಲುವುದು ಚಿಕ್ಕ ಕರುವಿರುವ ಹಾಲುಕರೆಯುವ ಹಸುವಿಗೇ. ಅವುಗಳನ್ನು ಅಂಗಳದಲ್ಲಿ ಶೃಂಗರಿಸಿದ ಕಲ್ಲುಕಂಬಕ್ಕೆ ಕಟ್ಟಿ!!! ಕುತ್ತಿಗೆಗೆ ಹೂವಿನ ಹಾರ ತುರಾರೊಟ್ಟಿಯ ಸರಗಳಿಂದ ಅಲಂಕರಿಸಿದರೆ ಅವು ನಿಮ್ಮ ಅಲಂಕಾರ ಪೂಜೆ ಯಾರಿಗೆ ಬೇಕು ಎಂಬ ಭಾವದಲ್ಲಿ ಒಂದರ ಹಾರವನ್ನು ಇನ್ನೊಂದು ತಿನ್ನುವುದರಲ್ಲಿ ಮಗ್ನವಾಗಿರುತ್ತಿದ್ದವು. ನಂತರ ಮನೆಯಲ್ಲಿದ್ದ ಏಕೈಕ ಬೀರುವಿನಿಂದ ಹಿಡಿದು, ತೋಟದ ಬಾವಿಯ ಬಳಿಯಿದ್ದ ಪಂಪ್ ಸೆಟ್ ವರೆಗೆ ಸಕಲ ಚರಾಚರ ವಸ್ತುಗಳಿಗೂ ಪೂಜೆಸಲ್ಲಿಸುತ್ತಿದ್ದ ಅಪ್ಪನ ಹಿಂದೆ ನೈವೇದ್ಯದ ಹೋಳಿಗೆಯನ್ನು ಹೊತ್ತೊಯ್ಯುವ ಕೆಲಸ. ದಿನಾ ಒಂದಲ್ಲ ಒಂದು ಪುಂಡಾಟ ನಡೆಸಿ ಎಲ್ಲರಿಂದ ಬಯ್ಯಿಸಿಕೊಳ್ಳುತ್ತಿದ್ದ ನಾಯಿ ಚೋಟುವಿಗೂ ಆ ದಿನ ಅಪ್ಪನ ಪೂಜೆ ಸಲ್ಲುತ್ತಿತ್ತು. ನಂತರ ಶೃಂಗರಿಸಿದ ಜಾನುವಾರುಗಳನ್ನು ಮೇಯಲು ಬಿಡುವುದು. ಊರಿನ ಎಲ್ಲ ದನಕರುಗಳು ಒಟ್ಟಿಗೇ ನಡೆಯುವಾಗ ಕೇಳುವ ಕೊರಳ ಗಂಟೆಯ ನಿನಾದ ,ಅವುಗಳ ಹಿಂದೆ ನಡೆಯುವ ಬಣ್ಣ ಬಣ್ಣದ ಬಟ್ಟೆತೊಟ್ಟ ಚಿಣ್ಣರು ,ಅವರಹಿಂದೆ ರಾಜಕೀಯ,ಕ್ರಿಕೆಟ್ ಮೊದಲಾದವುಗಳ ಬಗ್ಗೆ ಘನಗಂಭೀರ ಚರ್ಚೆ ನಡೆಸುತ್ತಾ ನಡೆಯುವ ಗಂಡಸರು , ಉಟ್ಟ ಹೊಸ ಸೀರೆ,ಮಾಡಲಿರುವ ಸಿಹಿತಿಂಡಿ,ಆಚೆಮನೆಯ ತುಂಗಕ್ಕನ ಸಣ್ಣಬುದ್ಧಿ,ಈಚೆಮನೆ ರುಕ್ಕುಣಕ್ಕನ ಹೊಸ ಬಳೆಗಳ ಬಗ್ಗೆ ಮಾತಾಡುತ್ತಾ ತಾವು ಏಕೆ ಹೊರಟಿದ್ದೆಂದೇ ಮರೆಯುವ ಹೆಂಗಸರು ಹೀಗೆ ನಡೆಯುವ ಮೆರವಣಿಗೆ ಮೈಸೂರಿನ ದಸರಾ ಮೆರವಣಿಗೆಗೇನೂ ಕಮ್ಮಿಯಿರಲಿಲ್ಲ ಬಿಡಿ.

ಮದ್ಯಾನ್ಹದ ಹೋಳಿಗೆ ಊಟದ ನಂತರ ಸಾಯಂಕಾಲ ದೇವಸ್ಥಾನದ ಬಳಿ ನಡೆಯುವ ಆಟಗಳ ತಯಾರಿ ಶುರು. ಆ ದಿನಕ್ಕೆಂದೇ ಸಂಗ್ರಹಿಸಿಟ್ಟಿರುತ್ತಿದ್ದ ಚಿಕ್ಕ ಚಿಕ್ಕ ತೆಂಗಿನಕಾಯಿಗಳು ೫,೧೦,೨೦ ಪೈಸೆ ನಾಣ್ಯಗಳನ್ನು ತೆಗೆದುಕೊಂಡು ಸಾಯಕಾಲದ ವೇಳೆಗೆ ದೇವಸ್ಥಾನದ ಬಳಿ ಓಡುತ್ತಿದ್ದೆವು. ಅಲ್ಲಿ "ಗುರಿಗಾಯಿ ಒಡೆಯುವುದು" ಮುಖ್ಯ ಆಟ. ಚಿಕ್ಕವರು ದೊಡ್ಡವರು ಹೆಂಗಸರು ಗಂಡಸರೆಂಬ ಭೇದವಿಲ್ಲದೆ ಎಲ್ಲರೂ ಕೂಡಿ ಈ ಆಟ ಆಡುತ್ತಿದ್ದೆವು. ಚಿಕ್ಕ ತೆಂಗಿನಕಾಯಿಯನ್ನು ನೆಲದ ಮೇಲಿಟ್ಟು ನಿಗದಿತ ದೂರದಿಂದ ಕಲ್ಲೆಸೆದು ಅದನ್ನು ಒಡೆಯಬೇಕು. ಐದೋ ಹತ್ತೋ ಪೈಸೆಯ ಲೆಕ್ಕದಲ್ಲಿ ಬಾಜಿ ಕಟ್ಟಿ ಆಡುವ ಈ ಆಟ ಎಲ್ಲರಲ್ಲೂ ಉತ್ಸಾಹ ತುಂಬುತ್ತಿತ್ತು.[ನನ್ನ ಮದುವೆಯಾದ ವರ್ಷ ಸುಧಾಕಿರಣ್ ನನ್ನ ಮೇಲೇ ಕಟ್ಟಿದ ನೂರು ರೂಪಾಯಿಗಳೆ ಇದರಲ್ಲಿ ಇದುವರೆಗಿನ ಅತೀಹೆಚ್ಚಿನ ಬಾಜೀ.ಯಾವಾಗಲೂ ತಪ್ಪುವ ನನ್ನ ಗುರಿ ಅವತ್ತು ಆಶ್ಛರ್ಯಕರವಾಗಿ ಸರಿಯಾಗಿ ತೆಂಗಿನಕಾಯಿ ಒಡೆದು ನೂರು ರೂ ಗಳನ್ನು ಬಿಡದೇ ವಸೂಲ್ ಮಾಡಿದ್ದೆ.]

ರಾತ್ರಿ ಮನೆಯನ್ನು ಮಣ್ಣಿನ ಹಣತೆಯ ದೀಪಗಳಿಂದ ಅಲಂಕರಿಸಿ ಬಲೀಂದ್ರನನ್ನು ವಿಸರ್ಜಿಸಿಸುವುದು. ನಂತರ ದೊಂದಿಗಳನ್ನು ಬೆಳಗಿಸಿ ಮನೆಯೆದುರಿನ ರಸ್ತೆಯುದ್ದಕ್ಕೂ ನೆಡುತ್ತಾ "ದೀಪ್ ದೀಪೋಳಿಗೆ ಹಬ್ಬಕ್ಕೆ ಮೂರು ಹೋಳಿಗೆ" ಎಂದು ಪೈಪೋಟಿಯಲ್ಲಿ ಕೂಗುತ್ತಾ ಹಬ್ಬ ಕಳಿಸುವುದು. ಆಗ ಮೂರು ದಿನಗಳ ಸಂಭ್ರಮಕ್ಕೆ ತೆರೆ ಬಿದ್ದಂತೆನಿಸಿ ಬೇಸರವಾಗುತ್ತಿತ್ತು.

ಊಟವಾಗಿ ಮಲಗುವಾಗ ಮಧ್ಯರಾತ್ರಿ "ಹಬ್ಬ ಹಾಡುವವರು "ಬಂದರೆ ಎಬ್ಬಿಸಿ ಎಂದು ಅಮ್ಮನಿಗೆ ಹೇಳೇ ಮಲಗುತ್ತಿದ್ದೆ. ”ದುಮ್ ಸೋಲ್ ಹೊಡಿರಣ್ಣ ದುಮ್ಸೊಲ್ ಹೊಡಿರೊ’ ಎನ್ನುತ್ತಾ ಅವರು ಬರುವಾಗ ಕಣ್ಣುಜ್ಜುತ್ತ ಎದ್ದು ಕುಳಿತರೆ "ಆ ಮನೆ ಬಾಗಿಲು ಚೆಂದ ಈ ಮನೆ ಬಾಗಿಲು ಚೆಂದ " ಎಂದು ರಾಗವಾಗಿ ಹಾಡುವ ಅವರ ಹಾಡುಗಳನ್ನು ಕೇಳುವುದೇ ಆನಂದ. ಕೆಲವೊಮ್ಮೆ ಊರಿನ ಗಂಡಸರೆ ಹಬ್ಬ ಹಾಡಲು ಬರುವುದೂ ಇತ್ತು. ಅವರ ದೀಪಕ್ಕೆ ಎಣ್ಣೆ ಹಾಕಿ , ಹೋಳಿಗೆ , ಅಕ್ಕಿ, ದುಡ್ಡು ನೀಡಿದ ಮೇಲೆ ಆಶೀರ್ವಾದಿಸಿ ಅವರು ಮುಂದಿನ ಮನೆಗೆ ತೆರಳಿದ ಮೇಲೆ ಪುನಃ ನಿದ್ದೆಗೆ ಜಾರಿದರೆ ಮುಗಿದ ಹಬ್ಬ ಕನಸಿನಲ್ಲಿ ಸಿನೆಮಾ ರೀಲಿನಂತೆ ಬಿಚ್ಚಿಕೊಳ್ಳುತ್ತಿತ್ತು.

ಈಗಲೂ ಹಬ್ಬಕ್ಕೆ ಊರಿಗೆ ಹೋಗುತ್ತೇವೆ. ಆದರೆ ಮೊದಲಿನ ವೈಭವ ಸಂಭ್ರಮ ಈಗಿಲ್ಲವೇನೊ ಎನ್ನಿಸಿ ಬೇಸರವಾಗುತ್ತದೆ.ಅಪ್ಪ,ಚಿಕ್ಕಪ್ಪಂದಿರ ಮನೆಗಳು ಈಗ ಬೇರೆ ಬೇರೆ.ಗೋಪೂಜೆಗೆ ಎಷ್ಟೋ ಮನೆಗಳಲ್ಲಿ ಗೋವುಗಳೆ ಇಲ್ಲ.ಈಗಿನ ಮಕ್ಕಳಿಗೆ ಗೋವಿನ ಹಿಂದೆ ಓಡುವುದಕ್ಕೆ ಸಮಯವಿಲ್ಲ. ಹೆಚ್ಚಿನ ಯುವಕರು ಪೇಟೆಗಳಲ್ಲಿರುವುದಿಂದ ಹಬ್ಬದ ದಿನ ಬಂದು ಮತ್ತೆ ಹೊರಡುವ ತರಾತುರಿ. ಗುರಿಗಾಯಿ ಆಟ,ಹಬ್ಬ ಹಾಡುವುದು ಇವಕ್ಕೆಲ್ಲ ಜನರೇ ಇಲ್ಲದಂತಾಗಿದೆ. ಬದಲಾವಣೆ ಜಗದ ನಿಯಮ ತಾನೆ.

ಅದೇನೆ ಆದರೂ ದೀಪಾವಳಿ ಇವತ್ತಿಗೂ ಉಳಿದೆಲ್ಲ ಹಬ್ಬಗಳಿಗಿಂತ ಹೆಚ್ಚಿನ ಸಂಭ್ರಮ ತರುವ ಹಬ್ಬವೇ .ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

08-Oct-2009

ಮುನಿದ ಮಳೆರಾಯ

ಛೆ!! ಮನಸ್ಸೆಲ್ಲ ಭಾರವಾಗಿದೆ. ಪೇಪರ‍್,ಟಿ.ವಿ ಗಳಲ್ಲಿ ನೋಡಿದ ಜಲಪ್ರಳಯದ ದೃಶ್ಯಗಳು ಕನಸಲ್ಲೂ ಕಾಡುತ್ತವೆ. ಮುನಿದ ಮಳೆರಾಯ ಉತ್ತರ ಕರ್ನಾಟಕ,ಆಂಧ್ರದ ಅನೇಕ ಪ್ರದೇಶಗಳಲ್ಲಿ ನರಕ ಸೃಷ್ಠಿಸಿದ್ದಾನೆ.ಸಂಭಂಧಿಕರು,ಮನೆ, ಜಮೀನು,ಜಾನುವಾರು ಎಲ್ಲವನ್ನು ಕಳೆದುಕೊಂಡ ಜನರ ಗೋಳು ನೋಡಲಾಗದು.ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ.ಮಳೆಯ ನೀರಿನಲ್ಲಿ ಅನೇಕರ ಭವಿಷ್ಯವೆ ಕೊಚ್ಚಿಹೋಗಿದೆ.

ಮಾನವೀಯತೆಯ ದರ್ಶನವಾಗುವುದು ಸಹ ಇಂತಹ ವಿಪತ್ತು ಎದುರಾದಾಗಲೆ. ಹಣ, ಬಟ್ಟೆ, ಆಹಾರಸಾಮಗ್ರಿ ಎಲ್ಲವನ್ನು ದಾನವಾಗಿ ನೀಡುವ ಸಹಸ್ರ ಸಹಸ್ರ ಮಂದಿಯಿಂದ ನೊಂದವರಿಗೆ ಸ್ವಲ್ಪ ಮಟ್ಟಿನ ಆಸರೆ ದೊರಕೀತು.ಆದರೆ ಸಂಗ್ರಹವಾದ ವಸ್ತುಗಳನ್ನು ಅವಶ್ಯಕತೆಯಿರುವವರಿಗೆ ಸರಿಯಾಗಿ ಹಂಚಬೇಕಾದದ್ದು ಅವಶ್ಯಕ. ನಿಜವಾದ ಕಾಳಜಿಯಿಂದ ಸಂಗ್ರಹಿಸುವವರಿಗೆ ದಾನವನ್ನು ಕೊಡುವುದೊಳಿತು.

ಇನ್ನು ಇಂತಹ ವಿಚಾರದಲ್ಲೂ ರಾಜಕೀಯವನ್ನು ಮಾಡುವ, ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುವ ಪಕ್ಷಗಳು, ಫುಢಾರಿಗಳು ,ಇದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಚಾರಪ್ರಿಯರು, ಹೇಳಲಾಗದಷ್ಟು ಅಸಹ್ಯ ಹುಟ್ಟಿಸುತ್ತಾರೆ.

ಪ್ರತೀಬಾರಿ ಇಂತಹ ಅವಗಢ ನಡೆದಾಗ ನನ್ನಲ್ಲೇಳುವ ಪ್ರಶ್ನೆ ಇದನ್ನು ತಡೆಯುವುದು ಸಾಧ್ಯವಿಲ್ಲವೆ? ನಿಜ ಪ್ರಕೃತಿಯ ಮುಂದೆ ಹುಲುಮಾನವರಾದ ನಾವು ಕುಬ್ಜರು. ಆದರೆ ಚಂದ್ರಲೋಕವನ್ನು ಪ್ರವೇಶಿಸಲು ತಯಾರಿರುವ ನಾವು {ನಾನು ನಮ್ಮ ದೇಶದ ಬಗ್ಗೆ ಹೇಳುತ್ತಿದ್ದೇನೆ}ಇಂತಹ ಪ್ರಾಕೃತಿಕ ವಿಕೋಪವನ್ನೆದುರಿಸಲು ಬೇಕಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಹವಾಮಾನ ಇಲಾಖೆ ಮುಂದಿನ ೨೪ಘಂಟೆ ಭರ್ಜರಿ ಮಳೆಯಾಗುತ್ತದೆ ಎಂದರೆ ಅಲ್ಲಿ ಬಿಸಿಲು ಬೀಳುತ್ತದೆ ಎಂದೆ ತಿಳಿದುಕೊಳ್ಳಬಹುದು.ಇನ್ನು ಭೂಕಂಪವಾದ ಮೇಲೆ ನಾವು ಮೊದಲೆ ಸೂಚಿಸಿದ್ದೆವು ,ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಅವರು , ಹಾಗೇನಿಲ್ಲ ನಮಗೆ ಯಾವುದೇ ಸೂಚನೆ ದೊರೆತಿರಲಿಲ್ಲ ಎಂದು ಸರ್ಕಾರಗಳು ಜಾರಿಕೊಳ್ಳುತ್ತವೆ.
ಇಂತಹ ವಿಪತ್ತುಗಳ ಸಂಭವನೀಯತೆಯನ್ನು ಅರಿಯುವ ವಿಚಾರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು.ಅದನ್ನು ಸಮರ್ಥವಾಗಿ ಎದುರಿಸುವ ರೀತಿಯನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಇದು ಇಂದಿನ ಅತ್ಯಂತ ಅವಶ್ಯಕ ಕಾರ್ಯ ಎಂದು ನನ್ನ ಅಭಿಪ್ರಾಯ.

01-Oct-2009

ಅಬ್ಬ!! ಆಡು!!!

ಆಯುಧಪೂಜೆ, ವಿಜಯದಶಮಿ ಎಂದು ಎರಡು ದಿನ ರಜ ಇದ್ದುದರಿಂದ ಮೇಲುಕೋಟೆ, ಶ್ರವಣಬೆಳಗೊಳಗಳಿಗೆ ಹೋಗಿದ್ದೆವು. ಮೇಲುಕೋಟೆಯ ಚೆಲುವನಾರಾಯಣನ್ನು ನೋಡಿಕೊಂಡು ಬೆಟ್ಟದ ಮೇಲಿರುವ ಯೋಗಾನರಸಿಂಹನ್ನು ನೋಡಲು ಮೆಟ್ಟಿಲೇರುತ್ತಿದ್ದೆವು. ನಮ್ಮನ್ನು ಹಿಂದಿನಿಂದ ತಳ್ಳಿಕೊಂಡಂತೆ ಎರಡು ಆಡುಗಳು ಯೋಗಾನರಸಿಂಹನ ಪೂಜಾರಿಗಳೊ ಎಂಬಂತೆ ಸರಸರನೆ ಮೆಟ್ಟಿಲು ಹತ್ತಿ ಹೋದವು. ಆ ಕಡಿದಾದ ಮೆಟ್ಟಿಲುಗಳನ್ನು ಅಷ್ಟು ವೇಗವಾಗಿ ಹತ್ತುವುದು ನೋಡಿ ಆಶ್ಚರ್ಯವಾಯಿತು.


ನಂತರ ಶ್ರವಣಬೆಳಗೊಳದ ಹೆಬ್ಬಂಡೆಯನ್ನೇರಿ ಗೊಮ್ಮಟನ ಭವ್ಯಮೂರ್ತಿಯನ್ನು ನೋಡಿ, ಕೊನೆಯೆ ಇಲ್ಲವೇನೊ ಎಂಬಂತಿರುವ ಮೆಟ್ಟಿಲುಗಳನ್ನು ಸ್ಲೋಮೋಶನ್ ನಲ್ಲಿ ಇಳಿಯುತ್ತಿದ್ದೆವು. ಅಲ್ಲಿಯ ಮೆಟ್ಟಿಲುಗಳ ಪಕ್ಕದ ಬಂಡೆಯ ಇಳಿಜಾರಿನಲ್ಲಿ ನಾಲ್ಕು ಆಡುಗಳು ನಮ್ಮನ್ನು ಅಣಕಿಸುವಂತೆ ವೇಗವಾಗಿ ಇಳಿಯುತ್ತಿದ್ದವು!!.
ಆಗ ಅವುಗಳಲ್ಲೊಂದು ಆಡು ಆಯತಪ್ಪಿ ಜಾರಿತು. ನೋಡುತ್ತಿದ್ದ ನಮಗೆ ಗಾಭರಿ. ಇನ್ನೇನು ಬಿದ್ದೇ ಹೋಗುತ್ತದಲ್ಲ ಎಂಬ ಆತಂಕದಲ್ಲಿದ್ದ ನಮಗೆಲ್ಲ ಆಶ್ಚರ್ಯವಾಗುವಂತೆ ಅದು ಆ ಇಳಿಜಾರಿನಲ್ಲಿ ತನ್ನನ್ನು ತಾನು ಸಂಭಾಳಿಸಿಕೊಂಡು ನಿಂತಿತು!!!






ಅದು ಬಿದ್ದುಬಿಡುತ್ತದೆ ಎಂಬ ಆತಂಕ್ಕೆ ನನಗೆ ಪ್ರಾರಂಭವಾದ ಕಾಲುನಡುಕ ನಿಲ್ಲಲು ಒಂದು ಘಂಟೆ ಬೇಕಾಯಿತು.



ಅದನ್ನು ನೋಡಿದರೆ ಕೊರಕಲಿನ ಮೂಲೆಯಲ್ಲೆಲ್ಲೊ ಅರಾಮಾಗಿ ಮೇಯುತ್ತಾ ನಿಂತಿತ್ತು. ಅದಕ್ಕಿರುವ ಅದ್ಭುತ ಬ್ಯಾಲೆನ್ಸ್ ನೋಡಿ ಆಶ್ಚರ್ಯವಾಯಿತು.

ನನ್ನ ತಲೆಯಿಂದ ಚೆಲುವನಾರಾಯಣ,ಯೋಗಾನರಸಿಂಹ,ಗೊಮ್ಮಟನ ಭವ್ಯತೆ ಎಲ್ಲ ಮರೆಯಾಗಿ ಆಡು ಕುಣಿಯತೊಡಗಿತು.

ಮೆಲುಕು ಹಾಕುವ ಗೊರಸುಳ್ಳ ಸಸ್ತನಿಗಳ ಜಾತಿಯಾದ ಆಡುಗಳಲ್ಲಿ ಮುನ್ನೂರಕ್ಕು ಹೆಚ್ಚು ತಳಿಗಳಿವೆಯಂತೆ. ಅವುಗಳ ವಿಶಿಷ್ಠ ಕಾಲುಗಳ ರಚನೆ, ಕಣ್ಣು , ಎಂತಹ ದುರ್ಗಮ ಪ್ರದೇಶದಲ್ಲು ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.


ಅವುಗಳ ಕಾಲಬೆರಳುಗಳಲ್ಲಿ ಮೂರು ಮತ್ತು ನಾಲ್ಕನೆಯ ಬೆರಳುಗಳು ಮಾತ್ರ ಸಮಪ್ರಮಾಣದಲ್ಲಿ ಬೆಳವಣಿಗೆ ಹೊಂದಿದ್ದು, ಕಾಲುಗಳ ಮಧ್ಯದರೇಖೆ ಇವುಗಳ ನಡುವೆ ಹಾದು ಹೋಗುತ್ತದೆ. ಎರಡು ಗೊರಸುಗಳು ಈ ಎರಡು ಬೆರಳುಗಳನ್ನು ಮುಚ್ಚುವಂತೆ ಇದ್ದು ಹೆಚ್ಚಿನ ಬಲ ನೀಡುತ್ತವೆ. ಈ ರೀತಿಯ ರಚನೆ ಕಠಿಣ ಮೇಲ್ಮೈಯಲ್ಲಿ ನಿಲ್ಲಲು ಬೇಕಾದ ಧೃಡತೆಯನ್ನು ನೀಡುತ್ತದೆ. ಅಂತೆಯೆ ಮೆದುವಾದ ನೆಲದಲ್ಲಿರುವಾಗ ಗೊರಸುಗಳು ಹಿಗ್ಗಿ ಜಾರದಂತೆ ಕಾಪಾಡುತ್ತವೆ.
ಜೊತೆಗೆ ಕಣ್ಣು ಪಾಪೆಯ ರಚನೆ ಇಕ್ಕೆಲಗಳನ್ನು ಸರಿಯಾಗಿ ಗುರುತಿಸಲನುಗುಣವಾಗಿದೆ.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯೆ ಇದೆಯಲ್ಲವೆ? ನಿಜ ಅದು ಎಲ್ಲವನ್ನು ತಿನ್ನಬಲ್ಲುದಾದರು ಎಳೆ ಚಿಗುರು ಸೊಪ್ಪು ಹೆಚ್ಚು ಪ್ರಿಯ. ಅದಕ್ಕಾಗಿ ಎಂತಹ ದುರ್ಗಮ ಪ್ರದೇಶದಲ್ಲಾದರು ನಡೆಯಬಲ್ಲದು. ಮೆಲುಕು ಹಾಕುವ ಪ್ರಾಣಿಯಾದ್ದರಿಂದ ಜಠರದಲ್ಲಿ ನಾಲ್ಕು ಕೋಣೆಗಳಿವೆ.

ಈ ಮೆಲುಕುಹಾಕುವ ಸಸ್ಯಾಹಾರಿ ಸಸ್ತನಿಗಳು ಮಾಂಸಾಹಾರಿ ಪ್ರಾಣಿಗಳಿಗೆ ಆಹಾರವಾಗಿವ ಸಾಧ್ಯತೆ ಹೆಚ್ಚಾಗಿರುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ತಿಂದು ನಂತರ ವಿರಾಮದಲ್ಲಿ ಅದನ್ನು ಚೆನ್ನಾಗಿ ಜಗೆದು ನುಂಗುತ್ತವೆ. ಅವುಗಳ ಗೊರಸು ಹೆಚ್ಚು ವೇಗ ನೀಡಿ ವೈರಿಗಳಿಂದ ತಪ್ಪಿಸಿಕೊಳ್ಳಲು ಸಹಕರಿಸುತ್ತದೆ.

ಹೀಗೆ ಪ್ರಕೃತಿ ಎಷ್ಟು ಜಾಣ್ಮೆಯಿಂದ ಪ್ರತಿಯೊಂದನ್ನು ರಚಿಸಿದೆಯಲ್ಲವೆ? ಪ್ರಕೃತಿಗಿಂತ ಮಿಗಿಲಾದ ವಿಜ್ಞಾನಿ ಯಾರಿದ್ದಾರೆ?

ಕೆಂಡಸಂಪಿಗೆಯಲ್ಲಿ ಭೂರಮೆ

ಈ ವಾರದ ಲೇಖನ ಬರೆಯುವುದಕ್ಕೂ ಮೊದಲು ನಿಮ್ಮೊಂದಿಗೆ ನನ್ನ ಸಂತೋಷವೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಕಳೆದವಾರ ಸೆಪ್ಟೆಂಬರ‍್ ೨೭ರಂದು "ಕೆಂಡಸಂಪಿಗೆ"ಯ ದಿನದ ಬ್ಲಾಗ್ ಅಂಕಣದಲ್ಲಿ ನನ್ನ ಭೂರಮೆ ಕಾಣಿಸಿಕೊಂಡಿದ್ದಳು. ಬ್ಲಾಗ್ ಪ್ರಾರಂಭಿಸಿ ಕೇವಲ ಮೂರು ತಿಂಗಳಾಗಿರುವಾಗಲೆ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಂಡಿದ್ದರಿಂದ ಅರ್ಥಪೂರ್ಣವಾದದ್ದೇನನ್ನೋ ಬರೆಯುತ್ತಿದ್ದೇನೆಂಬ ನನ್ನ ನಂಬಿಕೆಗೆ ಪುಷ್ಠಿ ದೊರೆತಂತಾಗಿದೆ. ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ತಮಗೆಲ್ಲರಿಗೂ ಧನ್ಯವಾದಗಳು.

23-Sep-2009

ಹೀಗೊಂದು ದ್ವಂದ್ವ.....

  • ಸುನಾಮಿ, ಭೂಕಂಪ, ನೆರೆ, ಬರ-ಸಾವಿರಾರು ಮುಗ್ಧ ಜೀವಗಳ ಬಲಿ-----ನೀನೆಲ್ಲಿದ್ದೀಯ?
ಮತ್ತೆ ಕೊನರುವ ಕೊರಡು, ಬದುಕಬಯಸುವ ಬರಡು, ಎಲ್ಲಿಂದಲೊ ಚಾಚುವ ಸಹಾಯಹಸ್ತ, ಚಿಗುರುವ ಬದುಕು----
ನೀನಿದ್ದೀಯೇನೋ
  • ನಿನ್ನ ಹೆಸರಿನಲ್ಲೇ ನಡೆಯುವ ಕೊಲೆ ಸುಲಿಗೆ ಮಾರಣಹೋಮ-----ಉಹ್ಹೂ.... ನೀನಿಲ್ಲ ಬಿಡು

ಮತ್ತೆಲ್ಲೊ ನಿನ್ನ ಹೆಸರಿನಲ್ಲೆ ನಡೆಯುವ ಅನ್ನದಾನ, ವಿದ್ಯಾದಾನ, ನಿಸ್ವಾರ್ಥಸೇವೆ----ಹ್ಹೂ...ನೀನಿರಬಹುದೇನೋ

  • ತಿನ್ನುವುದಕ್ಕಿಂತ ಚೆಲ್ಲುವುದನ್ನೇ ನಾಗರೀಕತೆಯೆಂದುಕೊಂಡಿರುವ ಶ್ರೀಮಂತರು - ಅವರೆಸೆಯುವ ಎಂಜಲೆಲೆಗಾಗಿ ಕಾಯುವ ಹಸಿದ ಮುಗ್ಧ ಕಣ್ಗಳು----ಛೇ... ನೀನಿಲ್ಲವೆ ಇಲ್ಲ

ಬೀದಿಯಲ್ಲೆಲ್ಲೊ ಹಸಿವಿನಿಂದ ಅಳುವ ಕಂದಮ್ಮನಿಗೆ ತನ್ನ ಕೈಲಿರುವ ರೊಟ್ಟಿಯನ್ನೆ ಕೊಟ್ಟುಬಿಡುವ ಚಿಕ್ಕ ಪೋರಿ----ನಿನ್ನಿಂದಲೇ ಎಲ್ಲ

  • ಕುಡುಕರ ಅಮಲು, ಕಾಮುಕರ ತೆವಲು-ಬಲಿಯಾಗಿ ನರಳುವ ಬಾಲೆಯರು----ನೀನಿಲ್ಲವೇನೋ

ನೊಂದವರ ನೋವಿಗೆ ಹೆಗಲಾಗಿ, ಬಾಳಿಗೆ ಬೆಳಕಾಗುವವರು----ನೀನಿರಬಹುದೇನೋ

  • ಭೂಮಿಯಲ್ಲಿರುವುದೆಲ್ಲವನ್ನು ತನ್ನ ಅನುಕೂಲಕ್ಕೆ ಬಳಸುವ, ಹಾಳುಗೆಡವುವ ತನಗೆ ಬೇಡದ್ದನ್ನು ನಾಶಪಡಿಸುವ ಮಾನವ----ಸಕಲ ಚರಾಚರ ರಕ್ಷಕ ನೀನಾ???

ಎಲ್ಲ ಅತ್ಯಾಚಾರವನ್ನು ಸಹಿಸಿ ಮನುಕುಲಕ್ಕೆ ಸಹಾಯವನ್ನೇ ಮಾಡುವ ಭೂತಾಯಿ, ಅಕೆಯನ್ನು ರಕ್ಷಿಸಲು ಪ್ರಾಮಾಣಿಕವಾಗಿ ದುಡಿಯುವವರು ------ನೀನಿದ್ದರೂ ಇರಬಹುದು.