10 Sept 2014

ನಡುಮನೆಯಲ್ಲಿ ತಾಳಮದ್ದಲೆ

ಕಾಲ ಕಾಲಕ್ಕೆ ನಮ್ಮ ಅಭಿರುಚಿಗಳು ಬದಲಾಗುತ್ತವೆ . ಬಾಲ್ಯದಲ್ಲಿ ಇಷ್ಟವಾದ ಎಷ್ಟೋ ಸಂಗತಿಗಳು ಯೌವ್ವನದಲ್ಲಿ ಇಷ್ಟವಾಗದಿರಬಹುದು , ಯೌವ್ವನದಲ್ಲಿ ಇಷ್ಟವಾಗದ ಸಿನೆಮಾವೊಂದು ಮಧ್ಯವಯಸ್ಸಿನಲ್ಲಿ ಅದ್ಭುತ ಎನ್ನಿಸಬಹುದು.  ಇದಕ್ಕೆ ಆಯಾ ಕಾಲಘಟ್ಟದ ನಮ್ಮ ಮನಸ್ಥಿತಿ ಕಾರಣವಾಗುತ್ತದೆ. ಹೀಗೆ ನನಗೆ ಮೊದಲೆಂದೂ ನಾನು ಇಷ್ಟಪಡದ ಸಂಗತಿಯೊಂದು ಈಗ ಇಷ್ಟವಾಗತೊಡಗಿದೆ! ಅದು ತಾಳಮದ್ದಲೆ.
ತಾಳಮದ್ದಲೆಯೆಂಬುದು ಯಕ್ಷಗಾನದ ಒಂದು ವಿಧ. ಆದರೆ ಇಲ್ಲಿ ಯಕ್ಷಗಾನದಲ್ಲಿರುವಂತೆ ಪಾತ್ರಧಾರಿಗಳು ವೇಷಭೂಷಣ ಧರಿಸಿ ಕುಣಿಯುವುದಿಲ್ಲ. ಬದಲಾಗಿ ಕುಳಿತು ಯಕ್ಷಗಾನದ ಪದ್ಯಗಳಿಗೆ ಭಾವಪೂರ್ಣವಾಗಿ ಅರ್ಥ ಹೇಳುತ್ತಾರೆ.  ಯಕ್ಷಗಾನವು ಸುಂದರ ವೇಷಭೂಷಣ , ಪದ್ಯಕ್ಕೆ ತಕ್ಕ ಕುಣಿತದೊಂದಿಗೆ ಕಣ್ಣಿಗೆ ಹಬ್ಬವಾದರೆ , ತಾಳಮದ್ದಲೆ ಬುದ್ಧಿಗೆ ಹಬ್ಬ. ರಾಮಾಯಣ , ಮಹಾಭಾರತದ ಅನೇಕ ಉಪಕತೆಗಳೇ ತಾಳಮದ್ದಲೆಗಳ ಜೀವಾಳ. ಇದರಲ್ಲಿ ಒಂದು ಪೌರಾಣಿಕ ಪ್ರಸಂಗವನ್ನು ಅರ್ಥಧಾರಿಗಳು ತಮ್ಮದೇ ಆದ ವಿಶ್ಲೇಷಣೆಯೊಂದಿಗೆ ಪ್ರಸ್ತುತಪಡಿಸುತ್ತಾರೆ.  ಅರ್ಥಧಾರಿಗಳಲ್ಲಿ ನಡೆವ ತರ್ಕ , ವಾಗ್ವಾದ ಪಾತ್ರವೊಂದಕ್ಕೆ ಹೊಸ ಹೊಸ ಹೊಳಹುಗಳನ್ನು ನೀಡುತ್ತದೆ. ಆದರೆ ಇದರಲ್ಲಿ ಆಸಕ್ತಿ ಹುಟ್ಟಲು ಪ್ರೇಕ್ಷಕರಿಗೂ ತಯಾರಿ ಬೇಕಾಗುತ್ತದೆ. ಮೊದಲಿಗೆ ಆ ಪೌರಾಣಿಕ ಕತೆಯ ಅರಿವಿರಬೇಕಾಗುತ್ತದೆ, ಕುಳಿತು ಕೇಳುವ ಸಹನೆ ಬೇಕಾಗುತ್ತದೆ. ಅರ್ಥಧಾರಿಗಳ ಮಾತಿನಲ್ಲಿನ ಭಾವವನ್ನು ಗುರುತಿಸುವ ರಸಗ್ರಹಣ ಸಾಮರ್ಥ್ಯ ಇದ್ದರೆ ಮಾತ್ರ ಇದು ರುಚಿಸುತ್ತದೆ.

ಸಹಜವಾಗಿಯೆ ಮಕ್ಕಳಿದ್ದಾಗ ಇದು ಇಷ್ಟವಾಗುವುದಿಲ್ಲ. ಬಾಲ್ಯದಲ್ಲೆ ಯಕ್ಷಗಾನದ ಮೋಹಕ್ಕೆ ಬಿದ್ದ ನನಗೆ  ತಾಳಮದ್ದಲೆ ಇತ್ತೀಚಿನವರೆಗೂ ನೀರಸವಾಗೇ ಕಾಣಿಸುತ್ತಿತ್ತು.  ಆದರೀಗ ಇದರ ರುಚಿ ಹತ್ತಿದೆ.

ರಾಮಾಯಣ , ಮಹಾಭಾರತದ ವಿವಿಧ ಪಾತ್ರಗಳನ್ನು ತಮ್ಮ ಮಾತಿನಲ್ಲೆ ಕಟ್ಟಿಕೊಡುವ ವಿದ್ವಾಂಸರ ಮಾತಿನ ಮಂಟಪದಿಂದಾಗುವ ಪ್ರಯೋಜನಗಳು ಬಹಳಷ್ಟು.  ಉತ್ತಮ ಕಲಾವಿದರ ಮಾತುಗಾರಿಕೆಯು ಭಾಷೆಯ ಬೆಳವಣಿಗೆಗೆ ಸಹಕಾರಿ ,   ಪೌರಾಣಿಕ ಪಾತ್ರಗಳ ಬಗ್ಗೆ ಇರುವ ಅನೇಕ ಗೊಂದಲಗಳನ್ನು ಪರಿಹರಿಸುತ್ತದೆ.  ಮನದಲ್ಲೊಂದು ಚಿಂತನೆಯ ಕ್ರಮ ಬೆಳೆಸುತ್ತದೆ .


ಗಣಪತಿ ಹಬ್ಬದ ಮಾರನೆಯ ದಿನ ನಮ್ಮ ಮನೆಯಲ್ಲಿ ಸ್ಠಳೀಯ ಕಲಾವಿದರಿಂದ ತಾಳಮದ್ದಲೆ ಏರ್ಪಡಿಸಿದ್ದೆವು." ಶರಸೇತುಬಂಧನ " ಪ್ರಸಂಗ .    ವಿಜಯಶ್ರೀ ನಟರಾಜ್ ಅವರ  ಪ್ರಾರ್ಥನೆಯೊಂದಿಗೆ  ಕಾರ್ಯಕ್ರಮ  ಪ್ರಾರಂಭವಾಯಿತು .

ಅರ್ಜುನನಾಗಿ ಅನಂತಣ್ಣ ತಮ್ಮ ನವಿರಾದ ಹಾಸ್ಯ ಭರಿತ ಮಾತುಗಳಿಂದ ರಂಜಿಸಿದರು. ಹನುಮಂತನಾಗಿ ನಮ್ಮ ಊರಿನ ಹೆಮ್ಮೆಯ ವಿದ್ವಾಂಸರಾದ ಡಾ|| ಶಾಂತಾರಾಮ ಪ್ರಭುಗಳ  ವಿದ್ವತ್ಪೂರ್ಣ ಮಾತುಗಳು ಮನದಾಳಕ್ಕಿಳಿಯುವಂತಿತ್ತು. ಅನೇಕ ವರ್ಷಗಳಿಂದ ತೆರೆಮರೆಗೆ ಸರಿದಿದ್ದ ನಮ್ಮ ಊರಿನ ಹೆಮ್ಮೆಯ ತಾಳಮದ್ದಲೆ ಅರ್ಥದಾರಿ ಶ್ರೀನಿವಾಸಣ್ಣನವರ ಬ್ರಾಹ್ಮಣ ಮತ್ತು ಕೃಷ್ಣ ಪಾತ್ರದ ಚಮತ್ಕಾರಭರಿತ ಮಾತುಗಳು ಇಂದಿಗೂ ಅವರ ಸಾಮರ್ಥ್ಯ ಕುಂದಿಲ್ಲ ಎಂಬುದಕ್ಕೆ ಸಾಕ್ಷಿಯಾದವು. ವೈಜ್ಞಾನಿಕವಾದ ಜೀವವಿಕಾಸದ ಕ್ರಮವನ್ನು ದಶಾವತಾರಕ್ಕೆ ಸಮೀಕರಿಸಿದ್ದು ಶ್ರೀನಿವಾಸಣ್ಣನವರ ಚಮತ್ಕಾರಕ್ಕೆ ಒಂದು ಉದಾಹರಣೆ.  ನಮ್ಮ ಊರಿನ ಉತ್ಸಾಹಿ ಯುವಕ ಕುಮಾರನ ಚಂಡೆವಾದನ ಅವರೊಬ್ಬ ಭರವಸೆಯ ಚಂಡೆವಾದಕರಾಗಿ ಬೆಳೆಯಬಲ್ಲರೆಂಬುದನ್ನು ತೋರಿಸುತ್ತಿತ್ತು. ವೆಂಕಟರಮಣ ಅವರ ಮದ್ದಳೆವಾದನ ಗಾಯನಕ್ಕೆ ಪೂರಕವಾಗಿತ್ತು. ಎಲ್ಲದಕ್ಕೂ ಕಲಶವಿಟ್ಟಂತೆ ಇದ್ದುದು ಲಂಬೋದರ ಅವರ ಭಾಗವತಿಗೆ. ಇಂಪಾದ ಶಾರೀರ , ಸ್ಪಷ್ಟವಾದ ಉಚ್ಚಾರಣೆ , ಔಚಿತ್ಯಪೂರ್ಣವಾದ ಯಕ್ಷಗಾನೀಯಶೈಲಿಯ ಭಾಗವತಿಕೆ ಅವರದು .


ಮಾಮೂಲಿಯಾಗಿ ಇಂತಹುದಕ್ಕೆ ನೀಡುವ ಗೌರವಧನದ ಜೊತೆಗೆ ನೀಡಿದ  ಸುಧಾಕಿರಣ್ ಪರಿಕಲ್ಪನೆಯಲ್ಲಿ ರಚಿಸಲ್ಪಟ್ಟ  ಪ್ರಿಂಟೆಡ್ ಕೃತಜ್ಞತಾ ಪತ್ರ ಕಲಾವಿದರಿಗೆ ಖುಷಿ ನೀಡಿತು. ಶಾಂತಾರಾಮ ಪ್ರಭುಗಳು "ಹಣ ಇಂದು ಇರುತ್ತದೆ ನಾಳೆ ಇರುವುದಿಲ್ಲ, ಆದರೆ ಇಂತಹ ಕಾಣಿಕೆ ಅಮೂಲ್ಯವಾದುದು, ಇವು ಯಾವಾಗಲೂ ಈ ಕಾಲವನ್ನು ನೆನಪಿನಲ್ಲಿ ಉಳಿಸುತ್ತವೆ . ಇಂತದ್ದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದದ್ದು ಸಾರ್ಥಕಭಾವ ಮೂಡಿಸಿತು.

ಎಲ್ಲ ರೀತಿಯ ಕಲೆಗಳನ್ನು ಇಷ್ಟಪಡುತ್ತಿದ್ದ , ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದ    ಮಾವನವರಾದ ಸೂರ್ಯನಾರಾಯಣಭಟ್ ಅವರ  ಸ್ಮರಣಾರ್ಥ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ , ಪುತ್ರರಾದ ಸುಧಾಕಿರಣ್ ಸ್ವಾಗತಿಸಿದರೆ  ರಮೇಶ್ ಕಲಾವಿದರನ್ನು ಸನ್ಮಾನಿಸಿದರು , ನಟರಾಜ್ ವಂದನಾರ್ಪಣೆ ಸಲ್ಲಿಸಿದರು.
ಹೊರಗೆ ಧಾರಾಕಾರ ಮಳೆ , ಮನೆಯೊಳಗೆ ಅರ್ಥಧಾರಿಗಳ ಮಾತಿನ ಸುರಿಮಳೆಯಲ್ಲಿ  ಒಂದು  ಸಂಜೆ ಸುಂದರವಾಗಿ ಕಳೆಯಿತು

2 comments:

  1. ವಯೋಮಾನಕ್ಕೆ ತಕ್ಕಂತೆ ರುಚಿಸುವ ಅಭಿರುಚಿಗಳೆನುವ ತಮ್ಮ ಮಾತು ನಿಜ.
    ತಾಳ ಮದ್ದಲೆಗೂ ಯಕ್ಷಗಾನಕ್ಕೂ ವ್ಯತ್ಯಾಸವು ಇದೀಗ ನಮ್ಮ ಅರಿವಿಗೆ ಬಂದಿತು.
    ಕಲಾ ಪೋಷಕರಾದ ತಮ್ಮ ಕುಟುಂಬಕ್ಕೆ ಸದಾ ಶ್ರೇಯಸ್ಸು ಲಭಿಸುತಿರಲಿ

    ReplyDelete
  2. ಇಲ್ಲಿ ನಮ್ಮ ಸಂಘದಲ್ಲಿ ಸಂಪೂರ್ಣ ಹೆಂಗಸರ ಗುಂಪು ಬಂದು ತಾಳ ಮದ್ದಲೆ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಸಿ ಕೊಟ್ಟಿದ್ರು.. :) ಹೌದು ಅ ಚಿಂತನೆಗೆ ಹಚ್ಚುವ ಕಾರ್ಯಕ್ರಮ..

    ReplyDelete