11 Dec 2017

“ನುಡಿಸಿರಿ” ಎಂಬ ಸಾಂಸ್ಕೃತಿಕ ಜಾತ್ರೆಯಲ್ಲಿ ಮೂರು ದಿನ


"ಆಳ್ವಾಸ್ ನುಡಿಸಿರಿ"ಗೆ ಹೋಗಬೇಕೆಂಬ ಅನೇಕ ವರ್ಷದ ಕನಸು ಈ ವರ್ಷ ಕೈಗೂಡಿತು. ಮೂರು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ನನಗೆ ದಕ್ಕಿದ್ದು ಇಷ್ಟು.

ಹನ್ನೆರಡು ವೇದಿಕೆಗಳಲ್ಲಿ ನಮ್ಮ ನೆಲದ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜಾತ್ರೆ. “ಬಹುತ್ವದ ನೆಲೆಗಳು” ಎಂಬ ನುಡಿಸಿರಿಯ ಆಶಯಕ್ಕೆ ಹೊಂದುವಂತೆ ಜನಪದ ಕಲೆಗಳು, ಯಕ್ಷಗಾನ ಬಯಲಾಟಗಳು, ಶಾಸ್ತ್ರೀಯ ನೃತ್ಯ ಸಂಗೀತಗಳು, ಸಾಹಿತ್ಯ ಸಂವಾದಗಳು, ಕವಿಗೋಷ್ಟಿಗಳು, ಚಿತ್ರಕಲೆ, ವಿಶಿಷ್ಟ ವಸ್ತುಸಂಗ್ರಹಗಳ ಪ್ರದರ್ಶನ ಮಳಿಗೆಗಳು, ವ್ಯಾಪಾರೀ ಮಳಿಗೆಗಳು ಒಹ್! ಏನುಂಟು ಏನಿಲ್ಲ ಇಲ್ಲಿ!
ಡಿಸೆಂಬರ್ ೧ - ಉದ್ಘಾಟನೆಯ ವೇಳೆಯಲ್ಲಿ ರಸ್ತೆಯುದ್ದಕ್ಕೂ ನೆರೆದ ವಿವಿಧ ದೊಡ್ಡ ದೊಡ್ಡ ಗಾತ್ರದ ಪಕ್ಷಿ, ಪ್ರಾಣಿಗಳ, ಯಕ್ಷಗಾನ ಪಾತ್ರಗಳ ಗೊಂಬೆಗಳ ವೇಷ, ಡೊಳ್ಳುಕುಣಿತ, ಮರಗಾಲು ಕುಣಿತ, ಪೂಜಾ ಕುಣಿತ, ಕರಗ, ಹುಲಿವೇಷ, ಹಗಲುವೇಷ, ಕೊರಗ ನೃತ್ಯ ಇತ್ಯಾದಿ ವಿವಿಧ ಜನಪದ ಕಲಾವಿದರ ವೈಭಯುತ ಮೆರವಣಿಗೆಯೇ ನಮ್ಮನ್ನು ಬೇರೆಯ ಲೋಕಕ್ಕೆ ಕೊಂಡೊಯ್ದುಬಿಟ್ಟಿತ್ತು. ಮುಖ್ಯವೇದಿಕೆಯಲ್ಲಿ ಬೆಳಗ್ಗೆ ೯.೩೦ ರ ವೇಳೆಗೇ ಕಾಲಿಡಲೂ ಸಾಧ್ಯವಿಲ್ಲದಷ್ಟು ಜನಸಂದಣಿ! ಮುಖ್ಯವೇದಿಕೆಯ ಬದಿಯಲ್ಲಿ ಚಿತ್ರಸಿರಿ, ವ್ಯಂಗಚಿತ್ರಸಿರಿ, ಛಾಯಾಚಿತ್ರಸಿರಿ ಸೆಳೆಯುತ್ತಿತ್ತು





ತೇಜಸ್ವಿನಿ ಹೆಗಡೆಯವರ ಕಾದಂಬರಿಯ ಬಿಡುಗಡೆ ಸಮಾರಂಭವೂ ಅಲ್ಲಿ ಇದ್ದದ್ದು, ಗೆಳತಿಯರನ್ನು ಭೇಟಿ ಮಾಡಿದ್ದು ಖುಷಿಕೊಟ್ಟ ಸಂಗತಿ.

ಕೆ.ವಿ ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆದ ಕೊರಗರ ಸಾಂಸ್ಕೃತಿಕ ವೈಭವ ಕೊರಗ ಜನಾಂಗದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳುವಳಿಕೆ ಮೂಡಿಸಿದ ಕಾರ್ಯಕ್ರಮ. ಅವರ ಸಾಂಪ್ರದಾಯಿಕ ಡೊಳ್ಳು ಕುಣಿತದಲ್ಲಿ ಸಂದರ್ಭಕ್ಕೆ ತಕ್ಕಂತೆ ಇರುವ ಮಟ್ಟುಗಳು, ಕುಣಿತಗಳನ್ನು ತೋರಿಸಿದಲ್ಲದೆ, ಆ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೂಡಾ ನಿರೂಪಕರು ಗಮನ ಸೆಳೆದರು.
ನಂತರ ನೋಡಿದ ಕಾರ್ಯಕ್ರಮ ಹಗಲು ವೇಷ . ಹೆಸರೇ ಸೂಚಿಸುವಂತೆ ವೇಷವೇ ಪ್ರಧಾನವಾಗಿರುವ ಪ್ರದರ್ಶನ ಕಲೆ. ಕಣ್ಣುಕುಕ್ಕುವ ಬಣ್ಣ ಬಣ್ಣದ ಚಿತ್ರವಿಚಿತ್ರ ಉಡುಪುಗಳಲ್ಲಿ, ಡಾಳಾದ ಮುಖವರ್ಣಿಕೆಯಲ್ಲಿ ರಾಮಾಯಣ ಮಹಾಭಾರತ ಕತೆಗಳ ಕೆಲ ತುಣುಕನ್ನು ಅಭಿನಯಿಸುವ ಕಲಾಪ್ರಾಕಾರವಿದು.
ದಕ್ಷಿಣ ಕನ್ನಡದಲ್ಲಿ ಯಾವುದೇ ಉತ್ಸವವೂ ಪ್ರಾಯಶಃ ಹುಲಿವೇಷ ಇಲ್ಲದೇ ಕೊನೆಗೊಳ್ಳಲಾರದು. ಮೊದಲೂ ಅದರ ಬಗ್ಗೆ ಗೊತ್ತಿದ್ದರೂ, ಕೆಲವೊಮ್ಮೆ ಟಿವಿಯಲ್ಲಿ ನೋಡಿದರೂ “ಉಳಿದವರು ಕಂಡಂತೆ” ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿಯ ಹುಲಿಕುಣಿತಕ್ಕೆ ಮಾರುಹೋಗಿ ಒಮ್ಮೆ ಪ್ರತ್ಯಕ್ಷವಾಗಿ ಅದರ ಮೂಲ ಊರಿನಲ್ಲಿ ಹುಲಿಕುಣಿತ ನೋಡಬೇಕೆಂಬ ಆಸೆಯುತ್ತು. ಅದು ನೆರವೇರಿದ್ದು ನುಡಿಸಿರಿಯಲ್ಲಿ. ಬೆದ್ರ ಫ್ರೆಂಡ್ಸ್ ಎಂಬ ತಂಡದವರಿಂದ ನಡೆದ ಹುಲಿವೇಷ ಪ್ರದರ್ಶನದಲ್ಲಿ ಗಮನಸೆಳೆದದ್ದು ದೇಹದ ಮೇಲೆ ಬಳಿದ ನಿಜವಾದ ಹುಲಿ ಚಿರತೆಗಳಿಗೆ ಎಳ್ಳಷ್ಟೂ ಕಡಿಮೆಯೆನಿಸದ ಬಣ್ಣಗಳ ನಿಖರತೆ, ಅಪಾರ ಶಕ್ತಿ ಬೇಡುವ ಹೆಜ್ಜೆಗಳಲ್ಲಿ ಕಲಾವಿದರು ತೋರಿದ ದೃಡತೆ, ವಿವಿಧ ರೀತಿಯ ಕಸರತ್ತು ಪ್ರದರ್ಶಿಸುವ ಚಾಕಚಕ್ಯತೆ.
ಸಾಯಂಕಾಲದ ವೇಳೆಯಲ್ಲಿ ನೋಡಿದ “ಪವಿತ್ರ ಭಟ್” ಎಂಬುವವರ ಭರತನಾಟ್ಯ ಕಾರ್ಯಕ್ರಮ ಕೂಡ ಚೆನ್ನಾಗಿತ್ತು. ಅಭಿನಯ, ನೃತ್ಯ ಎರಡರಲ್ಲೂ ಅವರ ನೈಪುಣ್ಯ ನೋಡುಗರನ್ನು ಹಿಡಿದಿಟ್ಟುಕೊಂಡಿತ್ತು. ಸಂಜೆ ನಡೆದ ವಿದುಷಿ ಮಾನಸಿ ಸುಧೀರ್ ಕೊಡವೂರು ಅವರ ನೃತ್ಯ ನಿಕೇತನ ತಂಡದ ಪ್ರದರ್ಶನವೂ ಮನಸೆಳೆಯಿತು.
ಬಡಗು ತಿಟ್ಟಿನ ಯಕ್ಷಗಾನಗಳನ್ನು ತುಂಬಾ ಇಷ್ಟಪಟ್ಟು ನೋಡುವ ನಾನು ತೆಂಕು ತಿಟ್ಟಿನ ಯಕ್ಷಗಾನವನ್ನು ನೋಡಿದ್ದು ಕಡಿಮೆ. ಇಲ್ಲಿ ನಡೆದ ದಶಾವತಾರ ತೆಂಕುತಿಟ್ಟಿನ ಯಕ್ಷಗಾನವನ್ನು ಸ್ವಲ್ಪ ನೋಡಿದೆ. ಬಡಗು ತಿಟ್ಟಿನಲ್ಲಿರುವಂತೆ ಹೆಚ್ಚಿನ ಕುಣಿತ ಅಭಿನಯ ಅಲ್ಲಿಲ್ಲವಾದರೂ ಅವು ಒಟ್ಟಾರೆ ಕತೆಯನ್ನು ಕಟ್ಟಿಕೊಡುವ ಪರಿ ಅನನ್ಯ.
ರಾತ್ರಿ ಊಟವಾದ ಮೇಲೆ “ಆಳ್ವಾಸ್ ಸಾಂಸ್ಕೃತಿಕ ವೈಭವ” ಎಂಬ ಆಳ್ವಾಸ್ ವಿಧ್ಯಾರ್ಥಿಗಳು ನಡೆಸಿಕೊಡುವ ಕಾರ್ಯಕ್ರಮಕ್ಕೆ ಹೋಗಿ ಕುಳಿತದ್ದಾಯ್ತು. ಹೆಚ್ಚಿನ ನಿರೀಕ್ಷೆಗಳೇನೂ ಇಲ್ಲದೇ, ಏನೋ ಮಾಮೂಲಿ ಕಾಲೇಜು ಮಕ್ಕಳ ಕಾರ್ಯಕ್ರಮ ನೋಡೋಣವೆಂದು ಕುಳಿತುಕೊಂಡಿದ್ದ ನಾವು ಕಾರ್ಯಕ್ರಮ ಶುರುವಾದ ಮೇಲೆ ನಿಜಕ್ಕೂ ಆಶ್ಚರ್ಯಚಕಿತರಾದೆವು. ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಹುಟ್ಟುವಂತಹ ಎಲ್ಲಾ ಕಲೆಗಳನ್ನೂ ಆಳ್ವಾಸ್ ಸಾಂಸ್ಕೃತಿಕ ವೈಭವ ಒಳಗೊಂಡಿತ್ತು. ಮಕ್ಕಳೂ ಸಹ ಯಾವುದೇ ವೃತ್ತಿನಿರತ ಕಲಾವಿದರಿಗೂ ಬಿಟ್ಟುಕೊಡದ ಹಾಗೆ ಪ್ರದರ್ಶನ ನೀಡಿದರು. ಹಿಂದಿನ ದಿನ ರಾತ್ರಿ ಪ್ರಯಾಣ, ಬೆಳಗಿನಿಂದ ತಿರುಗಿದ ಸುಸ್ತು ಎಲ್ಲವೂ ಸೇರಿ ನಿದ್ರೆ ಎಳೆಯುತ್ತಿದ್ದರೂ ಎದ್ದು ಬರುವ ಮನಸ್ಸಾಗದೇ ೧೨ ಗಂಟೆಗೆ ಮುಗಿಯುವವರೆಗೂ ನೋಡಿ ಮನತುಂಬಿಕೊಂಡೆವು.
ಅವರು ಪ್ರದರ್ಶಿಸಿದ ರಾಮಾಯಣ ಯಕ್ಷಗಾನ ನೃತ್ಯರೂಪಕ ಕೇವಲ ಹತ್ತು ನಿಮಿಷಗಳಲ್ಲಿ ರಾಮಾಯಣದ ಮುಖ್ಯ ಕತೆಯನ್ನು ಹೇಳಿದ್ದಲ್ಲದೆ,ಮಾತೊಂದನ್ನು ಬಿಟ್ಟು ಒಂದು ಪರಿಪೂರ್ಣ ಯಕ್ಷಗಾನದಲ್ಲಿರುವಂತಹ ಇನ್ನೆಲ್ಲ ಅಂಶಗಳನ್ನೂ ಒಳಗೊಂಡಿತ್ತೆಂಬುದು ಇಷ್ಟವಾದ ಸಂಗತಿ. ಮಂಟಪ ಪ್ರಭಾಕರ ಉಪಾಧ್ಯಾಯರಂತ ಪರಿಪೂರ್ಣ ಕಲಾವಿದರು ಇದರ ನಿರ್ದೇಶಕರೆಂದ ಮೇಲೆ ಅದು ಚೆನ್ನಾಗಿ ಮೂಡಿಬಂದಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ.


ಮೂಲಮಾನವರು ತಮ್ಮ ಸಂಭ್ರಮವನ್ನು ಅಭಿವ್ಯಕ್ತಿಸಲು ಕಂಡುಕೊಂಡದ್ದು ಸರಳವಾದ ಕುಣಿತಗಳು, ಇನ್ನೂ ಹೆಚ್ಚಿನದೇನನ್ನೋ ಹೇಳಬೇಕೆನ್ನಿಸಿದಾಗ ವೆಷಭೂಷಣಗಳನ್ನು ಬಳಸಿಕೊಂಡು ಕತೆ ಹೇಳುವುದು ಪ್ರಾರಂಭಗೊಂಡಿತು, ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಇನ್ನಷ್ಟು ಸೂಕ್ಷ್ಮವಾದಾಗ ಶಾಸ್ತ್ರೀಯ ಕಲೆಗಳು ಹುಟ್ಟಿಕೊಂಡವು ಎಂದು ಎಲ್ಲೋ ಓದಿದ ನೆನಪು. ಆ ದಿನದ ಪ್ರದರ್ಶನಗಳನ್ನು ನೋಡುವಾಗ ಈ ವಿಷಯ ಹೆಚ್ಚು ಸ್ಪಷ್ಟವಾಯ್ತು. ಡೊಳ್ಳು ಕುಣಿತದವರು, ಲಂಬಾಣಿ ಕುಣಿತದವರು, ಜನಪದ ಹಾಡುಗಾರರು, ಯಾವುದೇ ವೇದಿಕೆಯ ಹಂಗಿಲ್ಲದೇ ಆವರಣದ ಬೀದಿಯಲ್ಲೇ ನಿಂತು ಪ್ರದರ್ಶನ ನೀಡಿದರೂ ಸುತ್ತಲೂ ಜನ ಮುತ್ತಿಕೊಂಡು ನೋಡಿ ಆನಂದಿಸುತ್ತಿದ್ದರು. ಇನ್ನು ಯಕ್ಷಗಾನ, ಬಯಲಾಟ, ಹಗಲುವೇಷ, ನಾಟಕ ಮೊದಲಾದ ಕಥಾ ಪ್ರಾಧಾನ್ಯ ಕಲೆಗಳ ಪ್ರದರ್ಶನ ವೇದಿಕೆಯಲ್ಲಿಯೂ ಸಾಕಷ್ಟು ಜನ ಸೇರಿರುತ್ತಿದ್ದರು. ಭರತನಾಟ್ಯ, ಕಥಕ್ ಮೊದಲಾದ ಶಾಸ್ತ್ರೀಯ ನೃತ್ಯಗಳಿಗೆ, ಕರ್ನಾಟಕ ಸಂಗೀತ ಹಿಂದೂಸ್ತಾನೀ ಸಂಗೀತ ಮೊದಲಾದ ಶಾಸ್ತ್ರೀಯ ಸಂಗೀತ ಪ್ರದರ್ಶನ ನಡೆಯುತ್ತಿದ್ದ ವೇದಿಕೆಗಳಲ್ಲಿ ಜನ ಸೇರುತ್ತಿದ್ದುದು ಕಡಿಮೆ.
ಡೀಸೆಂಬರ್ ೨ – ಬೆಳಗ್ಗೆ ೮.೪೫ ನಡೆದ ಕು.ಮೇಘ ಸಾಲಿಗ್ರಾಮ ಅವರ ಅದ್ಭುತ ಸ್ಯಾಕ್ಸಪೋನ್ ವಾದನದೊಂದಿಗೆ ನುಡಿಸಿರಿಯಲ್ಲಿ ನಮ್ಮ ಎರಡನೆಯ ದಿನದ ಪಯಣ ಆರಂಭಗೊಂಡಿತ್ತು.
ನಂತರ ಶಿವರಾಮ ಕಾರಂತ ಸಭಾಂಗಣದಲ್ಲಿ ನಾವು ನೋಡಿದ ನಾದಸ್ವರ ವಾದನ, ರಾಘವೇಂದ್ರ ಭಟ್ ಅವರ ಹಿಂದೂಸ್ತಾನಿ ಗಾಯನ, ಅಯನಾ ಪೆರ್ಲ ಅವರ ಭರತನಾಟ್ಯ ಮೂರೂ ಕೂಡ ಅತ್ಯುತ್ತಮ ಕಾರ್ಯಕ್ರಮವಾಗಿದ್ದವು. ಆದರೆ ಆ ಸಂಭಾಂಗಣವು ತಳಮಹಡಿಯಲ್ಲಿದ್ದು ಹೆಚ್ಚಿನ ಜನಕ್ಕೆ ಅಲ್ಲಿ ಇದೆಯೆಂಬುದೇ ಗೊತ್ತಾಗದೇ ಇದ್ದುದರಿಂದಾಗಿ ಪ್ರೇಕ್ಷಕರೇ ಇರಲಿಲ್ಲ. ನಾಲ್ಕೇ ಜನ ಪ್ರೇಕ್ಷಕರಿದ್ದರೂ ತಲೆಕೆಡಿಸಿಕೊಳ್ಳದೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಪ್ರದರ್ಶನ ನೀಡಿದ ಕಲಾವಿದರ ಬಗ್ಗೆ ನಿಜಕ್ಕೂ ಹೆಮ್ಮೆಯೆನ್ನಿಸಿತು.
ಸರಳ ಸಜ್ಜನರಾದ ಚುಕ್ಕಿಚಿತ್ರ ಕಲಾವಿದ ಮೋಹನ್ ವರ್ಣೇಕರ್ ಮತ್ತು ಅವರ ಪತ್ನಿಯವರನ್ನು ಭೇಟಿ ಮಾಡಿದ್ದು ಖುಷಿ ಕೊಟ್ಟಿತು. ನೂರಾ ಎಂಟು ಕನ್ನಡ ಸಾಹಿತ್ಯ ದಿಗ್ಗಜರ ಚುಕ್ಕಿ ಚಿತ್ರಗಳನ್ನು ರಚಿಸಿರುವುದು ವರ್ಣೇಕರ್ ಅವರ ಸಾಧನೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಚುಕ್ಕಿಚಿತ್ರಗಳನ್ನು ರಚಿಸುತ್ತಾ ಬಂದಿರುವ ವರ್ಣೇಕರ್ ಅವರು “ಚುಕ್ಕಿಚಿತ್ರಗಳಲ್ಲಿ ಸಾಹಿತ್ಯ ಚೇತನಗಳು” ಎಂಬ ಪುಸ್ತಕವನ್ನು ಬರೆದಿದ್ದಾರೆ.
ನೆಚ್ಚಿನ ಲೇಖಕಿ ಭುವನೇಶ್ವರು ಹೆಗಡೆಯವರು ಲೇಖಕಿ ಎಂ ಕೆ ಇಂದಿರಾ ಅವರನ್ನು ಸ್ಮರಿಸುತ್ತಾ ಹಳೆಯ ಕಾಲದ ಮಲೆನಾಡಿಗೊಮ್ಮೆ ಕರೆದೊಯ್ದರು. ತಮ್ಮ ೪೫ ವರ್ಷದಲ್ಲಿ ಸಾಹಿತ್ಯಲೋಕ ಪ್ರವೇಶಿಸಿ ಇಂದಿಗೂ ಓದಿಸಿಕೊಳ್ಳುವಂತಹ ಕಾದಂಬರಿಗಳನ್ನು ನೀಡಿರುವ ಇಂದಿರಾ ಬಗ್ಗೆ ಹೆಮ್ಮೆಯೆನ್ನಿಸಿತು.
ಘೇವರ್ ಖಾನ್ ಬಳಗದ ರಾಜಾಸ್ಥಾನಿ ಜನಪದ ಸಂಗೀತ ಮತ್ತು ನೃತ್ಯ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.
ನಂತರ ಇದುವರೆಗೂ ಹೆಚ್ಚು ಗೊತ್ತಿಲ್ಲದ ಭೂತಾನಿನ ಬಗ್ಗೆ ಕೆಲ ವಿಷಯಗಳನ್ನು ಇಲ್ಲಿ ತಿಳಿದೆ. ಭೂತಾನಿನ ಜನಪದ ಪ್ರದರ್ಶನದಲ್ಲಿ ಎದ್ದು ತೋರುತ್ತಿದ್ದುದು ಅವರ ಸರಳ ಸಜ್ಜನಿಕೆಯ ನಡುವಳಿಕೆ, ಭಾರತದ ಬಗ್ಗೆ ತುಂಬ ಗೌರವಯುತವಾಗಿ ಮಾತನಾಡುತ್ತಿದ್ದ ನಿರೂಪಕ ಮನಸೆಳೆದರು. ಹೆಜ್ಜೆಗಳು ಅತ್ಯಂತ ಸರಳವಾಗಿದ್ದರೂ ಲಾಲಿತ್ಯಪೂರ್ಣವಾದ ದೇಹಚಲನೆಯಿಂದ ಅವರ ಜನಪದ ನೃತ್ಯ ಗಮನ ಸೆಳೆಯುತ್ತಿತ್ತು. ವಿವಿಧ ರೀತಿಯ ಮುಖವಾಡಗಳನ್ನು ಬಳಸಿ ರಾಮಾಯಣ, ಬೌದ್ಧಧರ್ಮಕ್ಕೆ ಸಂಬಂಧಿಸಿದ ಅನೇಕ ಪೌರಾಣಿಕ ಕತೆಗಳ ನೃತ್ಯರೂಪಕಗಳು ಅವರ ಮತ್ತು ನಮ್ಮ ಸಂಸ್ಕೃತಿಗೆ ಇರುವ ಸಾಮ್ಯತೆಯನ್ನು ತಿಳಿಸುವಂತಿತ್ತು.

ರಾತ್ರಿ ಮಧುಲಿತ ಮೊಹಪಾತ್ರ ಅವರ ತಂಡದ ಒಡಿಸ್ಸಿ ನೃತ್ಯ ಇಷ್ಟವಾಯ್ತು. ನಂತರ ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಪ್ರಸ್ತುತಪಡಿಸಿದ ಕೂಚುಪುಡಿ ನೃತ್ಯಪ್ರದರ್ಶನ ಅತ್ಯಂತ ರಮಣೀಯವಾಗಿತ್ತು. ದೇಶದ ಹೆಸರಾಂತ ಕಲಾವಿದರಾದ ವೈಜಯಂತಿ ಕಾಶಿಯವರು ಈ ವಯಸ್ಸಿನಲ್ಲೂ ತಮ್ಮ ಇಪ್ಪತ್ತರ ಹರೆಯದ ಮಗಳಿಗೆ ಸರಿಸಮನಾದ ವೇಗದಲ್ಲಿ ನರ್ತಿಸುವುದನ್ನು ನೋಡಿ ಸಂತೋಷವಾಯ್ತು.
ಆಳ್ವಾಸ್ ವಿಧ್ಯಾರ್ಥಿಗಳ ಸಾಂಸ್ಕೃತಿಕ ಸೌರಭದಲ್ಲಿ ಅಂದು ನಡೆದ ಮಲ್ಲಕಂಬ ಪ್ರದರ್ಶನ ಮೈನವಿರೇಳಿಸಿತ್ತು. ಹಗ್ಗದಲ್ಲಿ, ಕಂಬದಲ್ಲಿ ವಿವಿಧ ರೀತಿಯ ಆಸನಗಳನ್ನು, ಆಕೃತಿಗಳನ್ನು ನಿರ್ಮಿಸುತ್ತಾ ಹೋದ ಮಕ್ಕಳ ಸಾಧನೆ ಶ್ಲಾಘನೀಯವಾಗಿತ್ತು.
ಪ್ರಾಹ್ಲಾದ ಆಚಾರ್ಯ ಮತ್ತು ಅವರ ಇಬ್ಬರು ಮಕ್ಕಳು ನಡೆಸಿಕೊಟ್ಟ ಶ್ಯಾಡೋ ಪ್ಲೇ ಒಂದು ಕಲೆಯನ್ನು ಹೇಗೆಲ್ಲಾ ಪ್ರದರ್ಶಿಸಬಹುದೆಂಬುದಕ್ಕೆ ನಿದರ್ಶನದಂತಿತ್ತು. ಗೋವಿನ ಹಾಡನ್ನು ತಮ್ಮ ಕೈಬೆರಳುಗಳ ಮೂಲಕ ಪ್ರಸ್ತುತಪಡಿಸಿದ ಮಕ್ಕಳು ಗಮನಸೆಳೆದರು.
ಡಿಸೆಂಬರ್೩ – ಕೊನೆಯ ದಿನದ ಕಾರ್ಯಕ್ರಮಗಳು- ಬೆಳಗ್ಗೆ ೭ ಗಂಟೆಗೆ ನುಡಿಸಿರಿಯ ರೂವಾರಿ ಮೋಹನ್ ಆಳ್ವಾ ಅವರ ಜೊತೆಗಿನ ಸಂವಾದ, ಸಂಭಾಂಗಣ ತುಂಬಿ ತುಳುಕುತ್ತಿತ್ತು. ಒಂದು ಗಂಟೆಯ ಕಾಲ ಒಂಟಿಕಾಲಿನಲ್ಲಿ ನಿಂತಾದರೂ ಜನ ಅವರ ಮಾತನ್ನು ಕೇಳಿಸಿಕೊಂಡಿದ್ದು ಜನರಿಗೆ ಈ ಕಾರ್ಯಕ್ರಮ ಹಾಗೂ ಅದನ್ನು ರೂಪಿಸಿದವರ ಮೇಲಿದ್ದ ಅಭಿಮಾನವನ್ನು ಸೂಚಿಸುತ್ತಿತ್ತು.
ಅಂದು ಬೆಳಿಗ್ಗೆ ಮೂಡುಬಿದರೆಯ ಸಾವಿರ ಕಂಬದ ಬಸದಿಯನ್ನು ನೋಡಿ ನುಡಿಸಿರಿಗೆ ವಾಪಾಸಾದೆವು. ಇತ್ತೀಚೆಗೆ ನಮ್ಮನ್ನಗಲಿದ ಮಹಾನ್ ಯಕ್ಷಗಾನ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಂಸ್ಮರಣಾ ಭಾಷಣದಲ್ಲಿ ವಿದ್ವಾನ್ ಉಮಾಕಾಂತ ಭಟ್ಟರು, ಚಿಟ್ಟಾಣಿಯವರು ಬಡಗುತಿಟ್ಟಿನ ಯಕ್ಷಗಾನವನ್ನು ಬೆಳಿಸಿದ ಬಗೆಯನ್ನು ಕಟ್ಟಿಕೊಟ್ಟರು. ಅಭಿಮಾನಿಗಳ ಅತೀವ ಹೊಗಳಿಕೆಯೋ ಅಥವಾ ವಿಮರ್ಶಕರ ಅತೀವ ತೆಗಳುವಿಕೆಯೋ ಇಲ್ಲದ ಸಮಚಿತ್ತದ ಮಾತುಗಳಿಂದ ಮೇರು ಕಲಾವಿದನನ್ನು ಕಟ್ಟಿಕೊಟ್ಟ ಬಗೆ ಇಷ್ಟವಾಯ್ತು.
“ಸವಿತಕ್ಕನ ಅಳ್ಳಿ ಬ್ಯಾಂಡ್” ಎಂಬ ವಿಶಿಷ್ಟ ಹೆಸರಿನಿಂದಲೇ ಗಮನ ಸೆಳೆದ ಶ್ರೀಮತಿ ಸವಿತಾ ಮತ್ತು ಬಳಗದವರು, ಮಂಡ್ಯ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮಹದೇಶ್ವರ ಸ್ವಾಮಿಯ ಗೀತೆಗಳು, ಮಂಟೇ ಸ್ವಾಮಿಯ ರಚನೆಗಳೇ ಮೊದಲಾದವುಗಳನ್ನು ರಂಜನೀಯವಾಗಿ ಹಾಡಿದರು.
ಸಾಯಂಕಾಲ ಕಥಕ್ ನೃತ್ಯ ಪ್ರದರ್ಶನ ನೀಡಿದ ಪೂರ್ಣ ಆಚಾರ್ಯ ಅವರು ತಮ್ಮ ಭಾವಾಭಿನಯದಿಂದ ಗಮನ ಸೆಳೆದರು. ಗುಜರಾತಿ ಭಜನೆಯೊಂದಕ್ಕೆ ಅವರು ನೀಡಿದ ಅಭಿನಯ ಕಲೆಗೆ ಭಾಷೆಯ ಹಂಗಿಲ್ಲವೆಂಬುದನ್ನು ಸಾರಿ ಹೇಳಿತ್ತು.
ಸಮಾರೋಪ ಸಮಾರಂಭ ಮುಗಿದ ನಂತರ ನಡೆದ ಫಯಾಜ್ ಖಾನ್ ಅವರ ದಾಸವಾಣಿ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.
ನಾವು ನೋಡಿರದ ಚಿತ್ರವಿಚಿತ್ರ ಚಿಪ್ಪುಗಳ ಸಂಗ್ರಹದ ಪ್ರದರ್ಶನ, ಬೋನ್ಸಾಯ್, ಪಕ್ಷಿ, ಮೀನುಗಳ ಪ್ರದರ್ಶನ, ಜಾನುವಾರುಗಳ ಪ್ರದರ್ಶನ ಮುದಗೊಳಿಸಿತು. ಬೆಕ್ಕು, ನಾಯಿಗಳ ಫ್ಯಾಷನ್ ಶೋ ಸಮಯದ ಅಭಾವದಿಂದ ನೋಡಲಾಗಲಿಲ್ಲ.
ನುಡಿಸಿರಿಯಲ್ಲಿ ಎದ್ದು ತೋರುವ ಅಂಶವೆಂದರ ಸಂಘಟಕರ ಶಿಸ್ತುಬದ್ಧ ಆಯೋಜನೆ. ನಾಡಿನ ನಾನಾ ಭಾಗಗಳಿಂದ ಬರುವ ಪ್ರೇಕ್ಷಕರಿಗೆ ವಸತಿ ವ್ಯವಸ್ಥೆ, ಊಟೋಪಚಾರದಲ್ಲಿ ಎಳ್ಳಷ್ಟೂ ಲೋಪವಾಗದಂತೆ ನಿರ್ವಹಿಸುವ ಪರಿ ಅನನ್ಯ. ಮೂರೂದಿನಗಳು ಇಪ್ಪತ್ತೈದು ಸಾವಿರ ಜನರಿಗೆ ವಸತಿ ವ್ಯವಸ್ಥೆ, ಒಂದೂವರೆ ಲಕ್ಷದಷ್ಟು ಜನರಿಗೆ ಊಟ ತಿಂಡಿಯ ವ್ಯವಸ್ಥೆ ಅತ್ಯಂತ ಚೆನ್ನಾಗಿತ್ತು. ಅಷ್ಟೆಲ್ಲ ಜನರಿದ್ದರೂ ಎರಡು ನಿಮಿಷಕ್ಕಿಂತ ಹೆಚ್ಚು ಯಾವುದಕ್ಕೂ ಕಾಯುವ ಪ್ರಸಂಗ ಇರಲಿಲ್ಲ. ಇಡೀ ಕ್ಯಾಂಪಸ್ಸಿನಲ್ಲಿ ಕಸ ಕೊಳಕು ಕಾಣಸಿಗಲಿಲ್ಲ. ಊಟಕ್ಕೆ ಉಪಯೋಗಿಸಿದ ಅಡಿಕೆ ಹಾಳೆಯ ತಟ್ಟೆಗಳನ್ನು ಹಾಕಲು ಕಸದಬುಟ್ಟಿ, ಅದು ತುಂಬುತ್ತಿದ್ದಂತೆಯೇ ತಕ್ಷಣ ರಿಪ್ಲೇಸ್ ಮಾಡುತ್ತಿದ್ದ ಕಾರ್ಯಕರ್ತರ ತತ್ಪರತೆ, ದಿನವಿಡೀ ಬಡಿಸಿದರೂ ಮುಖದಲ್ಲಿ ನಗು ಉಳಿಸಿಕೊಂಡಿರುತ್ತಿದ್ದ ಆಳ್ವಾಸ್ ವಿದ್ಯಾರ್ಥಿಗಳ ಉತ್ಸಾಹ ಎಲ್ಲವೂ ನಿಜಕ್ಕೂ ಅನುಕರಣೀಯ. ಅನ್ನದ ಮಹತ್ವದ ಬಗ್ಗೆ, ಶುಚಿತ್ವದ ಮಹತ್ವದ ಬಗ್ಗೆ ಆಗಾಗ ಮೈಕಿನಲ್ಲಿ ಹೇಳುತ್ತಿದ್ದ ಬುದ್ಧಿವಾದಗಳ ಪ್ರಭಾವವೋ, ಅಥವಾ ಅಲ್ಲಿನ ವಾತಾವರಣವೋ ಗೊತ್ತಿಲ್ಲ, ಅನ್ನವನ್ನು ಚೆಲ್ಲುವವರ ಸಂಖ್ಯೆ, ತಿಂದ ತಟ್ಟೆಗಳನ್ನು ಕಸದ ಬುಟ್ಟಿಗಲ್ಲದೇ ಬೇರೆಡೆ ಹಾಕುವವರ ಸಂಖ್ಯೆ ತೀರಾ ತೀರಾ ಕಡಿಮೆಯಿತ್ತು.
ಸಮಯಪಾಲನೆಗೆ ಇಲ್ಲಿರುವ ಮಹತ್ವವನ್ನು ಎಲ್ಲರೂ ಅಳವಡಿಸಿಕೊಂಡರೆ ದೇಶ ಉದ್ಧಾರವಾಗುವುದರಲ್ಲಿ ಅನುಮಾನವಿಲ್ಲ. ವೇದಿಕೆಯ ಕಾರ್ಯಕ್ರಮಗಳಿರಲಿ, ಊಟ ತಿಂಡಿಯ ವ್ಯವಸ್ಥೆ ಇರಲಿ ಎಲ್ಲವೂ ನಿಗದಿತ ಸಮಯದ ಪ್ರಕಾರವೇ ನಡೆಯುತ್ತಿತ್ತು.
ಜನಪದ ಕಲೆಗಳನ್ನು ನೋಡುವವರಿಗೆ, ಶಾಸ್ತ್ರೀಯ ಸಂಗೀತ ನೃತ್ಯಗಳನ್ನು ನೋಡುವವರಿಗೆ, ಚಿತ್ರಕಲಾಸಕ್ತರಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮಗಳನ್ನು ನೋಡುವವರಿಗೆ, ಕೃಷಿ ಸಂಬಂಧಿ ಚಟುವಟಿಕೆಗಳ ಆಸಕ್ತರಿಗೆ, ಇದ್ಯಾವುದೂ ಇಷ್ಟವಿಲ್ಲದವರಿಗೂ ಸುಮ್ಮನೇ ತಿರುಗಾಡಿ ಶಾಪಿಂಗ್ ಮಾಡುವವರಿಗಾಗಿ ಪುಸ್ತಕ, ಬಟ್ಟೆ, ಆಹಾರ ಮಳಿಗೆಗಳು ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಮೇಳವೇ ನುಡಿಸಿರಿ.
ಕುಂದುಕೊರತೆಗಳು ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ನನಗೆ ಕಾಣಿಸಿದ ಒಂದೆರಡು ದೋಷಗಳೆಂದರೆ,
• ಮುಖ್ಯ ವೇದಿಕೆಯು ಸಾಕಷ್ಟು ದೊಡ್ಡದಾಗಿದ್ದು, ಹಿಂದೆ ಕುಳಿತವರಿಗೆ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ. ಹಿಂದೆ ಒಂದೆರಡು ಸ್ಕ್ರೀನ್ ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ.
• ಡಾ.ಶಿವರಾಮ ಕಾರಂತ ವೇದಿಕೆ ಹೊಸ ಕಟ್ಟಡದ ನೆಲಮಾಳಿಗೆಯಲ್ಲಿದ್ದು, ಅದು ಇರುವ ಜಾಗ ಸುಲಭವಾಗಿ ತಿಳಿಯುವಂತಿರಲಿಲ್ಲ. ಇದರಿಂದಾಗಿ ಕೆಲ ಅತ್ಯುತ್ತಮ ಕಾರ್ಯಕ್ರಮಗಳಿಗೆ ಪ್ರೇಕ್ಷಕರೇ ಇರಲಿಲ್ಲವೆಂಬುದು ಆ ಕಲಾವಿದರಿಗಾದ ಅನ್ಯಾಯವೆಂದೇ ತೋರಿತು.
• ಚಪ್ಪಾಳೆಯ ಕೊರತೆ. ಯಾವುದೇ ಕಲಾವಿದರಿಗೆ ಅವರ ಪ್ರದರ್ಶನಕ್ಕೆ ದೊರಕುವ ಸಂಭಾವನೆಗಿಂತಲೂ ಹೆಚ್ಚು ಖುಷಿಕೊಡುವುದು ಪ್ರೇಕ್ಷಕರ ಚಪ್ಪಾಳೆ. ಅತ್ಯುತ್ತಮ ಪ್ರದರ್ಶನ ನೀಡಿದಾಗಲೂ ಪ್ರೇಕ್ಷಕರು ನೀರಸವಾಗಿ ಬೇಕೋ ಬೇಡವೋ ಎಂಬಂತೆ ಚಪ್ಪಾಳೆ ತಟ್ಟುತ್ತಿದ್ದುದು ಏಕೆಂದು ಅರ್ಥವಾಗುತ್ತಿರಲಿಲ್ಲ. ಇದು ಸಂಘಟಕರಿಗೆ ಸಂಬಂಧಿಸಿದ ಸಮಸ್ಯೆ ಅಲ್ಲವಾದರೂ, ನಿರೂಪಕರು ಈ ಬಗ್ಗೆ ಪ್ರೇಕ್ಷಕರಿಗೆ ತಿಳುವಳಿಕೆ ನೀಡಿದರೆ ಸುಧಾರಿಸಬಹುದೆಂಬುದು ನನ್ನ ಅಭಿಪ್ರಾಯ.
ಮೊಟ್ಟ ಮೊದಲಬಾರಿಗೆ ಗಂಡ, ಮನೆ ಮಕ್ಕಳನ್ನು ಬಿಟ್ಟು ನಾನು, ನನ್ನ ಅಕ್ಕ ವಿಜಯಶ್ರೀ ಮತ್ತು ಅತ್ತಿಗೆಯ ಮಗಳು ರೂಪಶ್ರೀ ಮೂವರೇ ಹೋಗಿ, ಮೂರುದಿನ ಈ ಸಾಂಸ್ಕೃತಿಕ ಜಾತ್ರೆಯಲ್ಲಿ ಕಳೆದುಹೋಗಿದ್ದು ಸಾರ್ಥಕವೆನ್ನಿಸಿತ್ತು.
ಮೂರು ದಿನಗಳ ಕಾಲ ಹನ್ನೆರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ರಸದೌತಣ, ಅತಿಯಾದ ಆಡಂಬರವಿಲ್ಲದಿದ್ದರೂ, ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವಂತೆ ಶೃಂಗಾರಗೊಂಡ ಇಡೀ ಕ್ಯಾಂಪಸ್, ಬೀದಿ ಬೀದಿಗಳಲ್ಲೇ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಹಬ್ಬದ ವಾತಾವರಣವನ್ನು ಉಂಟುಮಾಡಿದ್ದ ಜನಪದ ಕಲಾವಿದರು, ಕರಾವಳಿಯ ಸೊಗಡಿನ ಊಟೋಪಚಾರ ಎಲ್ಲವನ್ನೂ ಅನುಭವಿಸಿ ವರ್ಷಕ್ಕಾಗುವಷ್ಟು ನೆನಪಬುತ್ತಿಯನ್ನು ಕಟ್ಟಿಕೊಂಡು ವಾಪಾಸ್ಸಾದೆವು.

No comments:

Post a Comment