4 Jan 2024

ಶಿವಲಿಂಗದ ಮರ

ಮನೆಯ ಗೇಟ್ ದಾಟಿ ಆಫೀಸ್ ದಾರಿ ಹಿಡಿಯುತ್ತಿದ್ದಂತೆಯೆ ನನಗೆ ಮನೆಯೊಂದು ಇದೆ ಅಂತಲೇ ಮರೆತು ಹೋಗುತ್ತದೆಕೆಲಸದ ಮೇಲಿನ ತನ್ನ ಶ್ರದ್ಧೆಯ ಬಗೆಗೆ ನನ್ನ ವರ್ಕೋಲಿಕ್ ಗಂಡ ಆಗಾಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಮಾತಿದು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಡೈಲಾಗ್ ಸ್ವಲ್ಪ ಬದಲಾಗಿದೆ, ಕೆಲಸಕ್ಕೆಂದು ಹೊರಗೆ ಹೋದಾಗ ಯಾವುದಾದರೂ ಪ್ರಕೃತಿ ವಿಶೇಷ ಅಂದರೆ ವಿಚಿತ್ರವಾದ ಹುಳವೋ, ಪ್ರಾಣಿ ಪಕ್ಷಿಗಳೋ, ಹೂವು, ಹಣ್ಣು, ಕಾಯಿಗಳೋ, ವಿಶಿಷ್ಟ ಪ್ರಕೃತಿ ವಿದ್ಯಮಾನಗಳೋ ಕಾಣಿಸಿದರೆ ತಟ್ಟನೆ ನಿನ್ನ ನೆನಪಾಗತ್ತೆ ಮಾರಾಯ್ತಿ ಎನ್ನುತ್ತಾರೆ! ನನಗೆ ಇದರಿಂದ ಸಂತೋಷವೂ ಆಗುತ್ತದೆ! ಹೀಗೆ ಹುಳಹಪ್ಪಟೆ ಕಾಣಿಸಿದೊಡನೆ ನಿನ್ನ ನೆನಪಾಗುತ್ತದೆ ಎನ್ನುವವರು ಹಲವರಿದ್ದಾರೆ, ಮತ್ತು ಅದರಿಂದ ನನಗೆ ಸಂತೋಷವಾಗುತ್ತದೆ ಎಂಬುದು ವಿಚಿತ್ರವಾದರೂ ಸತ್ಯ.



ಇತ್ತೀಚೆಗೆ ಒಂದು ದಿನ ಯಾವುದೋ ಗ್ರಾಹಕರ ತೋಟಕ್ಕೆ ಹೋಗಿದ್ದವರು ಬರುತ್ತಿದ್ದಂತೆಯೆ ಇದೊಂದು ಹಣ್ಣು ಅವರ ತೋಟದಲ್ಲಿತ್ತು ನೋಡು, ಎಷ್ಟು ವಿಚಿತ್ರವಾಗಿದೆ. ಆ ತೋಟದ ಮಾಲಿ, ತಮ್ಮ ಊರ ಕಡೆ ಈ ಹಣ್ಣನ್ನು ತಿನ್ನುತ್ತೇವೆ ಎಂದು ಹೇಳಿದಎಂದು ತೊಟ್ಟಿನ ಸಮೇತವಾಗಿದ್ದ ಗುಂಡನೆಯ ಟೆನ್ನಿಸ್ ಚೆಂಡಿನಂತಹ ವಸ್ತುವೊಂದನ್ನು ಕೊಟ್ಟರು. ನೋಡಿದೊಡನೆಯೆ ಅದು ಹಣ್ಣಲ್ಲ, ಹೂಗುಚ್ಛ ಎಂದು ತಿಳಿಯಿತು. ಉಳಿದ ವಿವರಗಳನ್ನು ಗೂಗಲಕ್ಕ ತಿಳಿಸಿದಳು.



 ಇದಕ್ಕೆ ಕನ್ನಡದಲ್ಲಿ ಶಿವಲಿಂಗದ ಮರ ಎಂಬ ಹೆಸರಿದೆ. ಇಂಗ್ಲೀಷಿನಲ್ಲಿ ಬ್ಯಾಟ್‍ಮಿಟನ್ ಬಾಲ್ ಟ್ರೀ ಎಂಬ ಸಾಮಾನ್ಯ ಹೆಸರು ಹಾಗೂ Parkia biglandulosa ಎಂಬ ವೈಜ್ಞಾನಿಕ ನಾಮಧೇಯ ಇದಕ್ಕಿದೆ. ಮಿಮೋಸ ಎಂಬ ಜಾತಿಗೆ ಸೇರಿದ ಮರ. ಅಂದರೆ ನಮ್ಮ ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳಿನ ಗಿಡವಿದೆಯಲ್ಲ ಅದೇ ಜಾತಿಗೆ ಸೇರಿದೆ. ಇವೆರಡರ ಎಲೆಗಳು, ಹೂಗುಚ್ಛ, ಕಾಯಿ ಎಲ್ಲದರಲ್ಲೂ ಸಾಮ್ಯತೆಯಿದೆ. ಆದರೆ ಗಾತ್ರದಲ್ಲಿ ಮಾತ್ರ ಅಗಾಧ ವ್ಯತ್ಯಾಸ. “ನಾಚಿಕೆ ಮುಳ್ಳು ನೆಲಕ್ಕೆ ಅಂಟಿಕೊಂಡಂತೆ ಬೆಳೆವ ಬಳ್ಳಿಯಂತಹ (creaper) ಸಸ್ಯವಾದರೆ ಈ ಶಿವಲಿಂಗದ ಮರ ಹೆಸರೇ ಹೇಳುವಂತೆ ಮಧ್ಯಮಗಾತ್ರದ ಮರವಾಗಿ ಬೆಳೆಯುವಂತಹ ಸಸ್ಯ. ಸಸ್ಯಲೋಕದಲ್ಲಿ ಇಂತಹ ವಿಚಿತ್ರಗಳು ಅಪರೂಪವೇನಲ್ಲ. ನೆಲಕ್ಕಂಟಿಕೊಂಡು ಬೆಳೆವ ಹುಲ್ಲು, ಮುಗಿಲು ಮುಟ್ಟುವಷ್ಟು ಎತ್ತರ ಬೆಳೆವ ಬಿದಿರು ಒಂದೇ ಜಾತಿಗೆ ಸೇರಿವೆ! ಮಾನವರ ಹೊಟ್ಟೆ ತುಂಬಿಸುವ ಏಕದಳ ಧಾನ್ಯಗಳಾದ ಭತ್ತ, ರಾಗಿ, ಗೋಧಿ ಮೊದಲಾದ ಸಸ್ಯಗಳು ಸಹ ಹುಲ್ಲಿನ ಜಾತಿಗೇ ಸೇರಿದವುಗಳು!

 



ಈ ಶಿವಲಿಂಗದ ಮರದ ಮೂಲ ನೆಲೆ ಆಫ್ರಿಕಾ ಖಂಡ. ಅಲ್ಲಿ ಈ ಮರದ ಎಲೆ, ಕಾಂಡ, ಬೇರು, ಹೂಗುಚ್ಛ, ಹಣ್ಣು ಹಾಗೂ ಬೀಜಗಳನ್ನು ಆಹಾರಕ್ಕಾಗಿಯೂ ಔಷಧವಾಗಿಯೂ ಉಪಯೋಗಿಸುತ್ತಾರೆ.

ಇದರ ಹೂಗುಚ್ಛ ಆಕರ್ಷಕವಾಗಿರುವುದರಿಂದ ಉಷ್ಣವಲಯದ ದೇಶಗಳ ಪಾರ್ಕ್, ಬಟಾನಿಕಲ್ ಗಾರ್ಡನ್ಕೈತೋಟಗಳಲ್ಲಿ ಮೆಚ್ಚಿನ ಸ್ಥಾನ ಪಡೆದಿದೆನಮ್ಮ ದೇಶದ ಅನೇಕ ಮಹಾನಗರಗಳಲ್ಲಿ ರಸ್ತೆಬದಿಯ ಸಾಲುಮರಗಳ ಸಾಲಿನಲ್ಲಿಯೂ ಇವುಗಳನ್ನು ಬೆಳೆಸಲಾಗಿದೆ. ಕಂದು ಬಣ್ಣದ ಮೊಗ್ಗುಗಳ ಗುಚ್ಛ, ಕೆಲವೇ ದಿನಗಳಲ್ಲಿ ಅರಳಿ ಬಿಳಿಯ ಬಣ್ಣದ ಹೂವುಗಳ ಗುಚ್ಛವಾಗುತ್ತದೆಕಾಯಿಗಳು ಉದ್ದನೆಯ ಕೋಡಿನಾಕಾರದಲ್ಲಿ ಇರುತ್ತವೆಬೀಜದ ಸುತ್ತಲಿನ ತಿರುಳು ರುಚಿಕರವಾಗಿದ್ದು ಸೇವನೆಗೆ ಯೋಗ್ಯವಾಗಿದೆಬೀಜವನ್ನೂ ಸಹ ಔಷಧವಾಗಿ ಆಹಾರವಾಗಿ ಉಪಯೋಗಿಸುತ್ತಾರೆ.



ನಾಲ್ಕು ದಿನಗಳ ನಂತರ ಹೂಗುಚ್ಛದ ಹೂವುಗಳೆಲ್ಲ ಹೀಗೆ ಉದುರಿ ಬಿದ್ದವು ಎಂಬುದರೊಡನೆ ಈ ಪುರಾಣ ಮುಕ್ತಾಯವಾಯ್ತು.😊


25 Dec 2023

ಹಾರುವ ಓತಿ

 ಹಾರುವ ಓತಿಪೂರ್ಣ ಚಂದ್ರ ತೇಜಸ್ವಿಯವರ ಕರ್ವಾಲೋಕಾದಂಬರಿಯ ಓದುಗರಿಗೆ ಇದರ ಪರಿಚಯವಿರುತ್ತದೆ. ನನಗೂ ಸಹ ಆ ಕಾದಂಬರಿಯನ್ನು ಓದುವಾಗಲೇ ಮೊದಲ ಬಾರಿಗೆ ಇದರ ಬಗ್ಗೆ ತಿಳಿದದ್ದು. ಕಾದಂಬರಿಯಲ್ಲಿ ಹಾರುವ ಓತಿಯ ಹುಡುಕಾಟದಲ್ಲಿರುವವರಿಗೆ ಓತಿ ಕಂಡರೂ, ಕೈಗೆ ಸಿಗದೇ ತಪ್ಪಿಸಿಕೊಂಡು ಅನಂತದಲ್ಲಿ ಲೀನವಾಗುತ್ತದೆ. ಇತ್ತೋ ಇಲ್ಲವೋ ಎಂಬ ಅನುಮಾನ ಹುಟ್ಟಿಸುವಂತೆ ಮಾಯವಾಗುತ್ತದೆ.

ಕಾದಂಬರಿ ಓದಿದ ಮೇಲೆ ಹಾರುವ ಓತಿಯನ್ನು ನೋಡಬೇಕೆಂದು ಅನ್ನಿಸಿದ್ದರೂ ಅದು ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿರುವ ಜೀವಿ, ಅಲ್ಲಿಗೆ ಹೇಗೂ ಹೋಗಿ ಅದನ್ನೆಲ್ಲ ನೋಡಲಾಗುವುದಿಲ್ಲವೆಂದು ತೀರ್ಮಾನಿಸಿ ಸುಮ್ಮನಾಗಿದ್ದೆ. ಹೀಗೆ ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂದಿರುವ ಜೀವಿಗಳ ದೊಡ್ಡ ಪಟ್ಟಿಯೇ ಇರುವುದರಿಂದ, ಇದೂ ಒಂದು ಆ ಪಟ್ಟಿಯಲ್ಲಿ ಸೇರಿಹೋಗಿತ್ತು.

ಆದರೆ ಇತ್ತೀಚೆಗೆ ಅನಿರೀಕ್ಷಿತವಾಗಿ ಸಾಗರ ತಾಲ್ಲೂಕಿನ ವರದಹಳ್ಳಿಯ ದುರ್ಗಾಂಬ ದೇವಾಲಯದ ಎದುರಿನ ಅಡಿಕೆ ತೋಟದಲ್ಲಿ ಹಾರುವ ಓತಿಯ ದರ್ಶನವಾಯ್ತು! ಕುಟುಂಬದ ಕಾರ್ಯಕ್ರಮವೊಂದಕ್ಕಾಗಿ ನಾವಲ್ಲಿಗೆ ಹೋಗಿದ್ದೆವು

ನಾನಾಗಿಯೇ ಅದನ್ನೆಂದೂ ನೋಡಲು ಸಾಧ್ಯವಾಗುತ್ತಿರಲಿಲ್ಲವೇನೋ, ಆದರೆ ವಾರಗಟ್ಟಲೆ ಅದರ ಹಿಂದೆ ಬಿದ್ದು ಅವುಗಳ ಫೋಟೋ ತೆಗೆದ ಅನುಭವವಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾದ ಗಣೇಶ್ ಹೆಚ್ ಶಂಕರ್ (ನನ್ನ ಸೋದರಮಾವ) ಅಡಿಕೆ ಮರವೊಂದರಲ್ಲಿ ಕುಳಿತಿದ್ದ ಹಾರುವ ಓತಿಯನ್ನು ಗುರುತಿಸಿ ತೋರಿಸಿದರು

ನೋಡುತ್ತಿದ್ದಂತೆಯೆ ಅದು ತನ್ನ ರೆಕ್ಕೆಯನ್ನು ಬಿಚ್ಚಿ ಒಂದು ಮರದಿಂದ ಇನ್ನೊಂದು ಮರಕ್ಕೆ ತೇಲಿತು. ಅಲ್ಲಿಂದ ಒಂದಷ್ಟು ಮೇಲೇರಿ, ತನ್ನ ಕುತ್ತಿಗೆಯಲ್ಲಿನ ಹಳದಿ ಬಣ್ಣದ ತೊಗಲನ್ನು (dewlap) ಆಗಾಗ ಮುಂದಕ್ಕೆ ಚಾಚುತ್ತಾ ಕುಳಿತಿತ್ತು. ನೋಡುತ್ತಿದ್ದಂತೆಯೆ ಮತ್ತೆ ಅದು ಅಲ್ಲಿಂದಲೂ ಹಾರಿ ನಮ್ಮ ಕಣ್ಣಿಗೆ ಕಾಣಿಸದಂತೆ ಮಾಯವಾಗಿತ್ತು. ಒಳಗಿದ್ದ ನನ್ನ ಗಂಡನನ್ನು ಕರೆದು ತೋರಿಸುವಷ್ಟರಲ್ಲಿ ಅದು ಅಲ್ಲಿರಲಿಲ್ಲ. ಆದರೆ ಅದರ ಚಲನವಲನಗಳ ಸಂಪೂರ್ಣ ಪರಿಚಯವಿದ್ದ ಗಣೇಶಮಾವ ಮತ್ತೆ ತೋಟಕ್ಕೇ ಇಳಿದು ಮತ್ತೊಂದು ಮರದಲ್ಲಿದ್ದ ಓತಿಯನ್ನು ಗುರುತಿಸಿ ತೋರಿಸಿದರು.  ಅಪರೂಪದ ಜೀವಿಯೊಂದನ್ನು ನೋಡಿದ ಖುಷಿಯಿಂದ ಮರಳಿದ್ದಾಯ್ತು.

ಗಣೇಶಮಾವ ಪುತ್ತೂರಿನ ಹತ್ತಿರದ ಹಳ್ಳಿಯೊಂದರ ಅಡಿಕೆ ಮರದಲ್ಲಿ ಅವುಗಳ ಫೋಟೋ ತೆಗೆದ ಅನುಭವಗಳನ್ನು ಹಂಚಿಕೊಂಡರು. ಅವುಗಳು ಹಾರುವಾಗ ಫೋಟೋ ತೆಗೆಬೇಕೆಂಬ ಆಸೆಯಿಂದ ತೋಟದಲ್ಲಿ ದಿನಗಟ್ಟಲೇ ಟ್ರೈಪಾಡ್ ಅಳವಡಿಸಿಕೊಂಡು ಕುಳಿತಿರುತ್ತಿದ್ದೆ ಎನ್ನುತ್ತಾರೆ ಅವರು. “ಬೆಳಗಿನ ಬಿಸಿಲು ಬೀಳುತ್ತಿದ್ದಂತೆ ತಮ್ಮ ಚಟುವಟಿಕೆಯನ್ನು ಅವು ಪ್ರಾರಂಭಿಸುತ್ತವೆ, ಇರುವೆಗಳು ಅವುಗಳ ಪ್ರಿಯವಾದ ಆಹಾರವಾಗಿದ್ದು ಒಂದೆಡೆ ಕುಳಿತು ತಮ್ಮ ಕುತ್ತಿಗೆಯಲ್ಲಿನ ಹಳದಿ ಬಣ್ಣದ  ತೊಗಲನ್ನು ಮುಂಚಾಚುತ್ತಿರುತ್ತವೆ, ಇರುವೆಗಳು ಹತ್ತಿರ ಬಂದಾಗ ನಾಲಿಗೆಯಿಂದ ಹಿಡಿದು ತಿನ್ನುತ್ತವೆ. ಭಕ್ಷಕಗಳಾದ ಹಕ್ಕಿಗಳು, ಮನುಷ್ಯರು ಮೊದಲಾದವುಗಳಿಂದ ಅಪಾಯವಿದೆ ಎನ್ನಿಸಿದರೆ ದೇಹವನ್ನು ಸಾಧ್ಯವಾದಷ್ಟು ಚಪ್ಪಟೆಯಾಗಿಸಿಕೊಂಡು ಮರಕ್ಕೆ ಅಂಟಿಕೊಳ್ಳುತ್ತದೆ! ತಾನಿರುವ ಮರದ ಕಾಂಡಕ್ಕೆ ತಕ್ಕಂತೆ ಬಣ್ಣವನ್ನೂ ಸಹ ಬದಲಾಯಿಸಿಕೊಳ್ಳುತ್ತದೆ. ಅತ್ಯಂತ ವೇಗವಾಗಿ ಅದು ಹಾರುತ್ತದೆಯಾದ್ದರಿಂದ ಫೋಟೋ ತೆಗೆಯುವುದೊಂದು ಸವಾಲು. ನಾನು ಅದರ ಫೋಟೋ ತೆಗೆಯಲೆಂದು ದಿನಗಟ್ಟಲೇ ತಲೆಯೆತ್ತಿ ಮರವನ್ನೇ ನೋಡುತ್ತಾ ಕುಳಿತು ಕತ್ತು ನೋವು ಪ್ರಾರಂಭವಾಗಿತ್ತುಎನ್ನುತ್ತಾರೆ ಗಣೇಶ್. ವರದಹಳ್ಳಿಯ ತೋಟದಲ್ಲಿ ಕಾಣಿಸಿದೆಯೆಂದರೆ ಇಲ್ಲಿನ ಸುತ್ತಮುತ್ತಲ ತೋಟಗಳೂ ಸಹ ಅವುಗಳ ವಾಸಸ್ಥಾನಗಳಾಗಿವೆ ಎಂಬುದು ಗಣೇಶರ ಅಭಿಪ್ರಾಯ.

 ಎಲ್ಲೆಡೆ ಕಾಣಸಿಗುವ ಸಾಮಾನ್ಯ ಓತಿಕ್ಯಾತಗಳಂತೆಯೆ ಇವೂ ಕಾಣಿಸಿದರು, ಗಾತ್ರದಲ್ಲಿ ಚಿಕ್ಕದಾಗಿವೆ ಮತ್ತು  ಸಂಪೂರ್ಣವಾಗಿ ಮರವಾಸಿಯಾಗಿವೆ. ಮರದಲ್ಲಿ ವಾಸಿಸುವುದಕ್ಕೆ ಸಹಕಾರಿಯಾಗಿ ದೈಹಿಕವಾಗಿ ಇವುಗಳಲ್ಲಿ ಕೆಲವೊಂದು ವಿಶೇಷ ಮಾರ್ಪಾಟುಗಳಿವೆ. ಬಾವಲಿಗಳಂತೆ ಇದರ ದೇಹದ ಚರ್ಮವು,  ಮುಂದಿನ ಕಾಲಿನಿಂದ ಹಿಂದಿನ ಕಾಲಿನವರೆಗೂ ಹೊರಚಾಚಿದಂತಿದೆ. ಪೆಟಾಜಿಯಂ ಎಂಬ ಹೆಸರಿನ ಈ ಚರ್ಮದ ರೆಕ್ಕೆಯು ಓತಿಯು ಮರದಿಂದ ಮರಕ್ಕೆ ತೇಲಿಹೋಗಲು ಸಹಕಾರಿಯಾಗಿದೆ.  ಹಕ್ಕಿಗಳಂತೆ ಇವು ರೆಕ್ಕೆಯನ್ನು ಬಡಿದು ಹಾರುವುದಿಲ್ಲ, ಪೆಟಾಜಿಯಂ ಸಹಾಯದಿಂದ ಎತ್ತರದ ಸ್ಥಳದಿಂದ ತೇಲಿ ಇನ್ನೊಂದು ಮರದ ಕೆಳಭಾಗಕ್ಕೆ ಬಂದು (ಗ್ಲೈಡಿಂಗ್) ಕುಳಿತುಕೊಳ್ಳುತ್ತವೆ, ಮತ್ತು ತಕ್ಷಣ ವೇಗವಾಗಿ ನಡೆದು ಮರವೇರಿ ಎತ್ತರದ ಸ್ಥಳದಲ್ಲೇ ಇರುತ್ತವೆ. . ದಕ್ಷಿಣ ಏಷ್ಯಾದ ಹಲವಾರು ದೇಶಗಳು ಇವುಗಳ ಆವಾಸಸ್ಥಾನಗಳಾಗಿವೆ. ನಮ್ಮ ದೇಶದ ಪಶ್ಚಿಮಘಟ್ಟಗಳಲ್ಲಿರುವ ಮಳೆಕಾಡುಗಳಲ್ಲಷ್ಟೇ ಅಲ್ಲದೆ, ಇಲ್ಲಿನ ಅಡಿಕೆ ತೋಟಗಳಲ್ಲಿ, ತೆಂಗು, ಸಿಲ್ವರ್ ಓಕ್ ಮರಗಳಲ್ಲಿ, ನೆಡುತೋಪುಗಳಲ್ಲಿ ಇವು ಕಾಣಿಸುತ್ತವೆ. ಗಾತ್ರದಲ್ಲಿ ಗಂಡು ಓತಿಯು ಹೆಣ್ಣಿಗಿಂತ ಚಿಕ್ಕದು

ತನ್ನ ವಾಸಸ್ಥಾನವನ್ನೇ ಹೋಲುವ ಮೈಬಣ್ಣ ಅಂದರೆ ಮರದ ಮೇಲ್ಮೈ ರೀತಿಯಲ್ಲೇ ಕಾಣಿಸುವ ಮೈಬಣ್ಣ ಇವುಗಳದ್ದು. ಮರದಿಂದ ಮರಕ್ಕೆ ತೇಲಿ ಬರುವಾಗ ಒಣಗಿದ ಎಲೆಯೊಂದು ಬೀಳುತ್ತಿರುವಂತೆ ಭ್ರಮೆ ಹುಟ್ಟಿಸುತ್ತದೆ. ಅಲ್ಲದೆ ಅತ್ಯಂತ ವೇಗವಾದ ಚಲನೆ, ಅಡಗುವ ಸ್ವಭಾವಗಳಿಂದಾಗಿ ಇವುಗಳು ಮಾನವನ ಗಮನಕ್ಕೆ ಬರುವುದೇ ಅಪರೂಪ.

ಗಂಡು ಓತಿಗಳು ಒಂದೆರಡು ಮರಗಳನ್ನು ಒಳಗೊಂಡಿರುವ ತಮ್ಮದೇ ವಾಸಸ್ಥಾನ್ನು ಗುರುತಿಸಿಕೊಳ್ಳುತ್ತವೆ ಮತ್ತು ಅಲ್ಲಿಗೆ  ಬೇರೆ ಗಂಡು ಓತಿಗಳು ಪ್ರವೇಶಿಸಿದರೆ ಉಗ್ರವಾಗಿ ವಿರೋಧಿಸಿ, ಹೋರಾಡಿ ಓಡಿಸುತ್ತವೆ. ಹೆಣ್ಣು ಓತಿಗಳ ಪ್ರವೇಶಕ್ಕೆ ಹೆಚ್ಚು ವಿರೋಧವಿರುವುದಿಲ್ಲವಂತೆ! ಇವು ಕೀಟಾಹಾರಿಗಳು. ಇರುವೆ, ಗೆದ್ದಲು ಮೊದಲಾದ ಕೀಟಗಳನ್ನು ಹಿಡಿದು ತಿನ್ನುತ್ತವೆಹಾಗಾಗಿ ಇವು ಸ್ವಾಭಾವಿಕ ಕೀಟನಾಶಕಗಳೂ ಹೌದು!

ನಮ್ಮ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ Draco dussumieri ಎಂಬ ಪ್ರಬೇಧದ ಹಾರುವ ಓತಿಗಳಿವೆ.  ಸಂತಾನೋತ್ಪತ್ತಿ ಕಾಲದಲ್ಲಿ, ಹೆಣ್ಣುಗಳನ್ನು ಆಕರ್ಷಿಸಲು ಗಂಡು ತನ್ನ ದೇಹವನ್ನು ಹಿಗ್ಗಿಸಿಕೊಂಡು, ಮುಂಗಾಲುಗಳಿಂದ ಪುಶ್ ಅಪ್ಸ್ ಮಾಡುವುದು, ತನ್ನ ಕುತ್ತಿಗೆಯಲ್ಲಿನ ಹಳದಿ ಬಣ್ಣದ ತೊಗಲನ್ನು (dewlap)  ಹಿಗ್ಗಿಸುತ್ತ ಗಾಢ ಬಣ್ಣವನ್ನು ಪ್ರತಿಫಲಿಸುವುದು ಮೊದಲಾದ ನಡುವಳಿಕೆಗಳನ್ನು ತೋರುತ್ತದೆ ಎಂದು ಅಧ್ಯಯನವೊಂದು ಪ್ರತಿಪಾದಿಸುತ್ತದೆ. ತಾನಿರುವ ಮರದಿಂದ ಕೆಳಗಿಳಿಯುವ ಹೆಣ್ಣು ತನ್ನ ತಲೆಯಿಂದ ಮಣ್ಣಿನಲ್ಲಿ ಗುಳಿಯನ್ನು ತೋಡಿ ನಾಲ್ಕಾರು ಮೊಟ್ಟೆಗಳನ್ನಿಟ್ಟು ಮುಚ್ಚುತ್ತದೆ. ಒಂದು ದಿನದವರೆಗೆ ಸುತ್ತಮುತ್ತ ಗಮನಿಸುತ್ತದೆ. ನಂತರ ಮತ್ತೆ ಮರವೇರುತ್ತದೆ. ಮೊಟ್ಟೆಗಳು ತಿಂಗಳ ನಂತರ ಮರಿಯಾಗಿ ಹೊರಬಂದು ಹತ್ತಿರದ ಮರವೇರುತ್ತವೆ. ಮೊಟ್ಟೆಯಿಡುವಾಗ ಬಿಟ್ಟರೆ ಬೇರೆ ಸಮಯದಲ್ಲಿ ಇವು ನೆಲಕ್ಕಿಳಿಯುವುದಿಲ್ಲ.

ತಮ್ಮ ಜೀವಿತಾವಧಿಯನ್ನೆಲ್ಲ ಮರದ ಮೇಲೇ ಕಳೆಯುವ ಇವುಗಳು ಮಾನವರ ಕಣ್ಣಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಹಾಗಾಗಿ ಅವುಗಳ ಬಗೆಗೆ ನಮಗೆ ತಿಳಿದಿರುವುದೂ ಅತ್ಯಲ್ಪಒಂದುಕಾಲದಲ್ಲಿ ಹಾರುವ ಓತಿಗಳು ಇವೆಯೆಂಬುದೇ ಹಲವಾರು ದೇಶದ ವಿಜ್ಞಾನಿಗಳಿಗೆ ಅನುಮಾನಾಸ್ಪದವಾಗಿತ್ತು. ಆದರೆ ಅತ್ಯಾಧುನಿಕ ಕ್ಯಾಮರಾಗಳ ಬಳಕೆಯಿಂದ ಇತ್ತೀಚೆಗಿನ ವರ್ಷಗಳಲ್ಲಿ ಅವುಗಳ ಚಲನವಲನಗಳು ದಾಖಲೆಯಾಗಿರುವುದರಿಂದಾಗಿ ಅವುಗಳ ಬಗೆಗೆ ಹೆಚ್ಚಿನ ಅಧ್ಯಯನ ಸಾಧ್ಯವಾಗುತ್ತಿದೆ.

ನಮ್ಮ ದೇಶದಲ್ಲಿ ಇವುಗಳ ಆವಾಸಸ್ಥಾನವಾದ ಮಳೆಕಾಡುಗಳ ವಿಸ್ತೀರ್ಣ ಕ್ಷೀಣಿಸುತ್ತಿದೆಯಾದರೂ ಅವುಗಳು ಕಾಡಿಗೆ ಹೊಂದಿಕೊಂಡಂತಿರುವ ನೆಡುತೋಪುಗಳಲ್ಲಿ ಸಹಾ ನೆಲೆಯನ್ನು ಕಂಡುಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಜೀವವಿಜ್ಞಾನಿಗಳು ಹೇಳುತ್ತಾರೆ.  

ಇಂತಹ ಅಪರೂಪದ ಜೀವಿಯೊಂದನ್ನು ಉಳಿಸಿಕೊಳ್ಳುವ ಹೊಣೆ ನಮ್ಮದು.

 

 https://www.naturelyrics.com/pages/search_image_library.php?keyword_tokens=dracಈ ಲಿಂಕ್‍ನಲ್ಲಿ ಗಣೇಶರವರು ತೆಗೆದ ಹಾರುವ ಓತಿಯ ಫೋಟೋಗಳಿವೆ.

ಮಾಹಿತಿ ಕೃಪೆಗಣೇಶ್ ಹೆಚ್ ಶಂಕರ್,

https://animaldiversity.org

https://www.britannica.com

https://en.wikipedia.org/wiki/Draco_dussumieri

https://www.theanimalfacts.com

18 Dec 2023

ವ್ಯಾಕ್ಸ್ ರೋಸ್ ಕ್ಯಾಕ್ಟಸ್ (Pereskia bleo)

ನಮ್ಮ ಬೆಂಗಳೂರಿನ ಲಾಲ್ಬಾಗ್ನಲ್ಲಿ ಅಲೆಯುವುದೆಂದರೆ ನನಗೆ ಬಹಳ ಇಷ್ಟದ ಸಂಗತಿ. ಅಲ್ಲಿನ ದೇಶವಿದೇಶಗಳ ಸಸ್ಯಗಳು, ದೊಡ್ಡ ದೊಡ್ಡ ಬೃಹದಾಕಾರದ ಮರಗಳು, ವಿಚಿತ್ರಾಕಾರದ ಹೂವು ಹಣ್ಣು ಬಿಡುವ ಮರಗಳು ಎಲ್ಲವನ್ನೂ ನೋಡುತ್ತಾ ಕಳೆದುಹೋಗಬಹುದು. ಪ್ರತಿಯೊಂದು ಋತುವಿನಲ್ಲೂ ಇಲ್ಲಿಯ ಸೌಂದರ್ಯ ಬದಲಾಗುತ್ತಿರುತ್ತದೆ. ವರ್ಷದ ಎಲ್ಲಾ ಋತುಗಳಲ್ಲೂ ಒಂದಿಲ್ಲೊಂದು ಸಸ್ಯಗಳು ಹೂವು, ಹಣ್ಣು, ಚಿಗುರುಗಳಿಂದ ತುಂಬಿಕೊಂಡಿರುತ್ತವೆಯಾದ್ದರಿಂದ ಹೋದವರಿಗೆ ಯಾವತ್ತೂ ನಿರಾಸೆಯಾಗುವುದಿಲ್ಲ. 
ಇತ್ತೀಚೆಗೊಮ್ಮೆ ಅಲ್ಲಿ ಅಲೆಯುತ್ತಿದ್ದಾಗ ಚಿಕ್ಕ ಪೊದೆಯಂತಿದ್ದ ಸಸ್ಯವೊಂದು ಗಮನ ಸೆಳೆಯಿತು. ದಟ್ಟ ಹಸಿರು ಬಣ್ಣದ ಎಲೆಗಳ ಜೊತೆಜೊತೆಗೇ ಅಷ್ಟೇ ಸಂಖ್ಯೆಯಲ್ಲಿ ಗಾಢ ಹಳದಿ ಬಣ್ಣದ ಬಟ್ಟಲಿನಾಕಾರದ ಹಣ್ಣುಗಳಿದ್ದವು. ಹತ್ತಿರ ಹೋಗಿ ನೋಡಿದಾಗ ಗಿಡದ ಕಾಂಡದಲ್ಲಿ ಚೂಪಾದ ಉದ್ದನೆಯ ಮುಳ್ಳುಗಳಿದ್ದವು. ಇದರ ಸಾಮಾನ್ಯ ನಾಮ ವ್ಯಾಕ್ಸ್ ರೋಸ್ ಕ್ಯಾಕ್ಟಸ್ ಹಾಗೂ ವೈಜ್ಞಾನಿಕ ನಾಮ Pereskia bleo. 
ಮಧ್ಯ ಅಮೇರಿಕಾ ಮೂಲದ ಈ ಕ್ಯಾಕ್ಟಸ್ ಬೇರೆ ಸಾಮಾನ್ಯ ಕ್ಯಾಕ್ಟಸ್ಗಳಂತಿಲ್ಲ. ಮಾರ್ಪಾಟಾಗಿ ಕಾಂಡದಂತೆ ಕಾಣಿಸುವ ದಪ್ಪ ಎಲೆಗಳು ಬೇರೆ ಕ್ಯಾಕ್ಟಸ್ಗಳ ಲಕ್ಷಣ. ಇದರ ಎಲೆಗಳು ಸಾಮಾನ್ಯ ರೂಪದಲ್ಲಿಯೇ ಇವೆ. ಎಲೆಗಳ ಮೇಲೆ ಮೇಣವನ್ನು ಸವರಿದಂತೆ ಹೊಳಪಾಗಿದೆ. ಕಾಂಡದಲ್ಲಿ ಕ್ಯಾಕ್ಟಸ್ಗಳಲ್ಲಿ ಇರುವಂತೆಯೆ ಚೂಪಾದ ಉದ್ದನೆಯ ಮುಳ್ಳುಗಳಿವೆ. ಕಿತ್ತಳೆ ಕೆಂಪು ಬಣ್ಣದ ಗುಲಾಬಿಯನ್ನು ಹೋಲುವ ಸುಂದರವಾದ ಹೂವುಗಳಿವೆ. ಆದ್ದರಿಂದಲೆ ಇದರ ಸಾಮಾನ್ಯ ನಾಮಧೇಯ ವ್ಯಾಕ್ಸ್ ರೋಸ್ ಕ್ಯಾಕ್ಟಸ್ . 
ಹಣ್ಣಂತೂ ಅದೆಷ್ಟು ವಿಚಿತ್ರವಾಗಿದೆಯೆಂದರೆ ಐಸ್ಕ್ರೀಂ ಕೋನ್ ನೆನಪಿಸುವ ಆಕಾರ, ಮೇಲ್ಭಾಗದಲ್ಲಿ ಮುಚ್ಚಳವೊಂದನ್ನು ಸೀಲ್ ಮಾಡಿದಂತೆ, ಹಣ್ಣೊಂದನ್ನು ಕತ್ತರಿಸಿ ಅರ್ಧ ಹಣ್ಣನ್ನು ಸೀಲ್ ಮಾಡಿದಂತೆಲ್ಲ ಕಾಣಿಸುವಂತಿದೆ. ಮಧ್ಯೆ ಕತ್ತರಿಸಿದರೆ ತ್ರಿಕೋನಾಕಾರದಲ್ಲಿ ಕಾಣಿಸುವ ಒಳಭಾಗ ರಸಭರಿತವಾದ ತಿರುಳಿಂದ ಕೂಡಿದ್ದು, ಕಪ್ಪು ಬೀಜಗಳು ತ್ರಿಕೋನಾಕಾರದಲ್ಲಿ ಜೋಡಿಸಲ್ಪಟ್ಟಿರುವುದು ಕಾಣಿಸುತ್ತದೆ. ಹಣ್ಣು ಹುಳಿ ರುಚಿಯನ್ನು ಹೊಂದಿದ್ದು, ಸ್ಟಾರ್ ಫ್ರುಟ್ ಹಣ್ಣಿನ ರುಚಿಯನ್ನು ನೆನೆಪಿಸುತ್ತದೆ.

 ಇದರ ಎಲೆಗಳ ಟೀ ತಯಾರಿಸಿ ಕುಡಿಯುತ್ತಾರೆ. ಬಹಳಷ್ಟು ಔಷಧೀಯ ಗುಣವುಳ್ಳ ಹಣ್ಣನ್ನು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿ ಉಪಯೋಗಿಸಲಾಗುತ್ತದೆ ಎಂದು ಗೂಗಲಮ್ಮ ತಿಳಿಸಿದಳು. ಕ್ಯಾನ್ಸರ್ ನಿರೋಧಕ ಶಕ್ತಿ ಇದಕ್ಕಿಯೆಂದೂ ಹೇಳಲಾಗುತ್ತದೆ. 
ಎಲೆಗಳು, ಹೂವು, ಹಣ್ಣು ಎಲ್ಲವೂ ಸುಂದರವಾಗಿರುವುದರಿಂದಲೂ, ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಲ್ಲುದಾದ್ದರಿಂದಲೂ, ಹೆಚ್ಚಿನ ಆರೈಕೆ ಬೇಡವಾದ್ದರಿಂದಲೂ, ಕೈತೋಟದಲ್ಲಿ ಬೆಳೆಯುವ ಸಸ್ಯವಾಗಿ ಇದು ಜನಪ್ರಿಯವಂತೆ. ಬಿಸಿಲು ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳಯುತ್ತದೆಯಾದ್ದರಿಂದ ಉಷ್ಣವಲಯದ ದೇಶಗಳಲ್ಲಿ ಬೆಳೆಸುವುದು ಸುಲಭ.

10 Dec 2023

ಚಳಿಗಾಲಕ್ಕೂ ಮೊದಲೇ ವಸಂತನ ಆಗಮನವೆ?

 ನಾವು ವಾಕಿಂಗ್ ಹೋಗುವ ದಾರಿಯಲ್ಲಿ ಸಾಲಾಗಿ ಹೊಂಗೆ ಮರಗಳಿವೆ.  ಪ್ರತಿದಿನ ಆ ಮರಗಳನ್ನು ನೋಡುತ್ತಾ ಹೋಗುವುದು ಅಭ್ಯಾಸ.

ಹೊಂಗೆ ಮರ,(Pongamia pinnata) ಚಪ್ಪರದಂತೆ ಹರಡಿಕೊಂಡು ಬೆಳೆಯುವ ಮಧ್ಯಮ ಗಾತ್ರದ ಚೆಂದದ ಮರ. ಅದರ ದಟ್ಟ ಎಲೆಗಳು ಬಿರುಬಿಸಿಲಲ್ಲಿ ತಂಪಾದ ನೆರಳು ಕೊಡುತ್ತವೆ. ಕಾಲಕ್ಕೆ ತಕ್ಕಂತೆ ಬದಲಾಗುವ ಚಿಗುರೆಲೆಗಳ ತೆಳು ಹಸಿರು, ಬಲಿತ ಎಲೆಗಳ ದಟ್ಟ ಹಸಿರು ಬಣ್ಣವನ್ನು ನೋಡುವುದೇ ಕಣ್ಣಿಗೆ ಹಬ್ಬ. ವಸಂತಕಾಲದಲ್ಲಿ ಅಂದರೆ ಸುಮಾರು ಮಾರ್ಚ್-ಎಪ್ರಿಲ್ ತಿಂಗಳಿನಲ್ಲಂತೂ ತೆಳು ಗುಲಾಬಿ ಬಣ್ಣದ ಹೂಗೊಂಚಲುಗಳು ಮರದ ತುಂಬ ತುಂಬಿಕೊಂಡು ಸೌಂದರ್ಯ ಇಮ್ಮಡಿಸುತ್ತದೆ.  (ಕೆಳಗೆ ರಸ್ತೆಯ ಮೇಲೆ ರಾಶಿ ರಾಶಿಯಾಗಿ ಉದುರುವ ಮೊಗ್ಗು, ಹೂದಳಗಳು ಮತ್ತು ಒಣ ಎಲೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಈ ಮರಗಳು ದೊಡ್ಡ ತಲೆನೋವಾಗುತ್ತವೆ ಎಂಬುದೂ ಅಷ್ಟೇ ಸತ್ಯ.) ಸುತ್ತಲಿನ ಪರಿಸರಕ್ಕೆ ನರುಗಂಪು ಸೂಸುವ ಹೂವುಗಳು, ಅದಕ್ಕೆ ಆಕರ್ಷಿತವಾಗಿ ಹೂವನ್ನು ಮುತ್ತುವ ಜೇನು ನೊಣಗಳು, ದುಂಬಿಗಳು, ಹೀಗೆ ಈ ಮರಗಳನ್ನು ನೋಡುತ್ತಿದ್ದರೆ ಸಮಯ ಸರಿಯುವುದು ತಿಳಿಯುವುದಿಲ್ಲ.

Pongamia pinnata (ಹೊಂಗೆ ಮರ)

ಉದುರಿದ ಹೊಂಗೆ ಹೂವುಗಳು
ಹೊಂಗೆ ಹೂವುಗಳು

ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಬೀದಿಯ ಕೊನೆಯಲ್ಲಿರುವ ಮರವೊಂದು ಹೂವುಗಳನ್ನು ಅರಳಿಸಿಕೊಂಡು ನಿಂತಿತ್ತು.  ವಾಕಿಂಗ್ ಹೋಗುವಾಗ, ಬರುವಾಗಲೆಲ್ಲ ಇದಕ್ಕೇನಾಗಿರಬಹುದೆಂಬ ಕುತೂಹಲ ನನಗೆ. ಬೇರಾವ ಮರಗಳೂ ಇನ್ನೂ ಹೂ ಬಿಟ್ಟಿರಲಿಲ್ಲ. ಮಾರ್ಚ- ಎಪ್ರಿಲ್ ತಿಂಗಳಲ್ಲಿ ಬಿಡಬೇಕಾಗಿರುವ ಹೂವುಗಳನ್ನು ಈಗ ಬಿಟ್ಟಿದೆಯಲ್ಲ ಈ ಮರ, ಈ ಸೆಕೆ ನೋಡಿ ಮಾರ್ಚ ತಿಂಗಳು ಬಂತು ಅಂತ ಅಂದುಕೊಂಡುಬಿಟ್ಟಿದೆಯಲ್ಲ ಪೆದ್ದು ಎಂದು ಗಂಡನಲ್ಲಿ ಹೇಳಿಕೊಂಡು ನಕ್ಕಿದ್ದೂ ಆಯಿತು. ನಂತರ ಹದಿನೈದು ದಿನಗಳಲ್ಲಿ ಆ ಬೀದಿಯ ಎಲ್ಲ ಹೊಂಗೇ ಮರಗಳಲ್ಲೂ ಹೂವರಳಿದ್ದವು! ಈಗ ಆ ಮರ “ಯಾರಮ್ಮ ಪೆದ್ದಿ” ಎಂದು ನನ್ನನ್ನೇ ಅಣಕಿಸಿದಂತಾಗುತ್ತಿತ್ತು. ಈಗ ಡಿಸೆಂಬರ್ ಮೊದಲವಾರದಲ್ಲಿ ನೋಡಿದರೆ ರಿಂಗ್ ರೋಡಿನಲ್ಲಿರುವ ಟಬೂಬಿಯ ಮರಗಳೆಲ್ಲವೂ ಹೂವರಳಿಸಿಕೊಂಡು ನಿಂತಿವೆ!! ಈ ಮರಗಳೂ ಕೂಡ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಹೂ ಬಿಡುತ್ತವೆ!

ಈ ವರ್ಷ ವಾತಾವರಣ ಅದೆಷ್ಟು ಬದಲಾವಣೆಯಾಗಿದೆ ಎಂಬುದಕ್ಕೆ ಸಾಕ್ಷಿ ಈ ಮರಗಳು. ಅತೀ ಕಡಿಮೆ ಮಳೆಯಾಗಿದೆ, ಚಳಿ ಇರಬೇಕಾದ ಕಾಲದಲ್ಲಿ ಸೆಕೆ ಹೆಚ್ಚಿದೆ. ಇದರ ಪರಿಣಾಮ ಈ ಮರಗಳ ಮೇಲಾಗಿದೆ. ಈ ಬದಲಾವಣೆಗಳು ನಮ್ಮ ಮೇಲೆ ಇನ್ನೆಷ್ಟು ಪರಿಣಾಮ ಬೀರಬಹುದು? ಕಾಲವೇ ಹೇಳಬೇಕು.

Tabebuia rosea

(ಈಗೊಂದು ಹತ್ತು ವರ್ಷಗಳ ಹಿಂದೆ ಸುಮಾರು ಸೆಪ್ಟೆಂಬರ್-ಅಕ್ಟೋಬರ್ ಸಮಯಕ್ಕೆ ಆ ಸಾಲು ಮರಗಳಲ್ಲಿ ಕಾಗೆಗಳು ಗೂಡು ಕಟ್ಟುವುದು, ಮೊಟ್ಟೆ ಇಡುವುದು ಮೊದಲಾದ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದವು. ಒಂದೆರಡು ತಿಂಗಳಲ್ಲಿ  ಮರಿಗಳ ಕಲವರವವು, ಶಿವರುದ್ರಪ್ಪನವರ “ಹಕ್ಕಿ ಗಿಲಕಿ” ಯೆಂಬ ಸಾಲನ್ನು ನೆನೆಪಿಸುವಂತೆ ಕೇಳಿಸುತ್ತಿತ್ತು. ಈಗ ಐದು ವರ್ಷಗಳಿಂದೀಚೆಗೆ ಕಾಗೆಗಳು ಇಲ್ಲಿ ಗೂಡು ಕಟ್ಟುತ್ತಿಲ್ಲ. ಪಕ್ಕದಲ್ಲೇ ಇರುವ ರಿಂಗ್ ರೋಡಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದೇ ಕಾರಣವಿರಬಹುದೆ ಗೊತ್ತಿಲ್ಲ.) 

2 Aug 2023

ಯೆರ್ಕಾಡ್ ಎಂಬ ಊರೂ, ಮುದವಟ್ಟುಕಲ್ ಕಿಲಂಗುವೂ

 ಅಪರೂಪಕ್ಕೆ ಕೆಲದಿನಗಳ ರಜೆ ತೆಗೆದುಕೊಂಡಿದ್ದ ಮಗಳು, ಮನೆಗೆ ಬಂದಿದ್ದಳುಊರಿನಿಂದ ಅಜ್ಜ, ಅಜ್ಜಿಯನ್ನೂ ಕರೆಸಿಕೊಂಡಿದ್ದಳು. ಮಗಳು ರಜಾ ಹಾಕಿದ ಖುಷಿಗೆ ಅವಳ ಅಪ್ಪ ಎರಡು ದಿನಗಳ ಮಟ್ಟಿಗೆ ಎರ್ಕಾಡ್ ಗೆ ಪ್ರವಾಸ ಹೋಗುವ ಪ್ಲಾನ್ ಹಾಕಿದರು.

ತಮಿಳುನಾಡಿನ ಸೇಲಂ ಎಂಬ ಉರಿಬಿಸಿಲಿನ, ಉರಿ ಸೆಕೆಯ ಊರಿಗೆ ಕೇವಲ 30 ಕಿಲೋಮೀಟರ್ ದೂರದಲ್ಲಿರುವ, ಸಮುದ್ರಮಟ್ಟದಿಂದ ಸುಮಾರು 4900 ಅಡಿಗಳಷ್ಟು ಎತ್ತರದ ತಂಪಾದ ಬೆಟ್ಟಗುಡ್ಡಗಳ ಊರು ಎರ್ಕಾಡು. ಇದು ಸೆರ್ವರಾಯನ್ ಅಥವಾ ಶೆವರಾಯ್ ಬೆಟ್ಟಸಾಲಿನಲ್ಲಿದೆ.

 


ತಮಿಳುನಾಡಿನ ಎಲ್ಲ ಹಿಲ್ಸ್ ಸ್ಟೇಷನ್ ತರಹವೇ ಪ್ರವಾಸೋದ್ಯಮ ಚೆನ್ನಾಗಿ ಬೆಳೆದಿರುವ ಊರು
. ಹಲವಾರು ವ್ಯೂ ಪಾಯಿಂಟ್ಗಳು, ದೋಣಿ ವಿಹಾರ ವ್ಯವಸ್ಥೆ ಇರುವ ಒಂದು ಕೆರೆ, ಸಸ್ಯವೈವಿಧ್ಯಗಳಿರುವ ಬಟಾನಿಕಲ್ ಗಾರ್ಡನ್, ಗುಲಾಬಿ ತೋಟ, ಮೊದಲಾದವುಗಳು ಪ್ರವಾಸಿಗಳನ್ನು ಸೆಳೆವ ತಾಣಗಳು. ಈ ಬೆಟ್ಟಸಾಲಿನ ಅತ್ಯಂತ ಎತ್ತರದ ಗುಡ್ಡದ ಮೇಲೆ, ಪುಟ್ಟ ಗುಹೆಯೊಂದರಲ್ಲಿ ಇರುವ ಸೆರ್ವರಾಯನ್ ದೇಗುಲವು ಅತ್ಯಂತ ಪುರಾತನವಾದದ್ದೆಂದು ಹೇಳುತ್ತಾರೆ.

ಸುಮಾರು ನಲವತ್ತು ಸಾವಿರ ಜನಸಂಖ್ಯೆ ಯೆರ್ಕಾಡ್ ತಾಲ್ಲೂಕಿನಲ್ಲಿದೆಯೆಂದು ವಿಕಿಪಿಡಿಯಾ ಹೇಳುತ್ತದೆ.


ಎಲ್ಲ ಪ್ರವಾಸಿ ತಾಣಗಳಲ್ಲಿ ಇರುವಂತೆಯೆ
, ಇಲ್ಲಿನ ಎಲ್ಲ ಪ್ರೇಕ್ಷಣೀಯ ತಾಣಗಳಲ್ಲಿಯೂ ಸಾಲು ಸಾಲು ಅಂಗಡಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಸ್ಥಳೀಯ ಹಣ್ಣುತರಕಾರಿಗಳ ಅಂಗಡಿಗಳು, ಕೀ ಚೈನ್, ಹ್ಯಾಟ್, ಬಳೆ, ಕ್ಲಿಪ್, ಮಕ್ಕಳ ಆಟಿಕೆಗಳು ಇತ್ಯಾದಿಗಳನ್ನು ಮಾರುವ ಅಂಗಡಿಗಳು, ಬೋಂಡ, ಬಜ್ಜಿ, ಮಂಡಕ್ಕಿ, ಕೂಲ್ ಡ್ರಿಂಕ್ಸ್, ಜೋಳ ಇತ್ಯಾದಿ ತಿನಿಸುಗಳನ್ನು ಮಾರುವ ಅಂಗಡಿಗಳು ಹೀಗೆ ಇಲ್ಲಿ ಎಲ್ಲವೂ ಲಭ್ಯ.

ಈ ಅಂಗಡಿ ಸಾಲುಗಳಲ್ಲಿ ಅಲೆಯುತ್ತಿರುವಾಗ, ಹಲವಾರು ಅಂಗಡಿಗಳ ಬಾಗಿಲ ಬಳಿ ಬುಟ್ಟಿಯೊಂದರಲ್ಲಿ ಇಟ್ಟಿದ್ದ ವಸ್ತುವೊಂದು ತನ್ನ ವಿಚಿತ್ರ ಆಕಾರದಿಂದ ಗಮನ ಸೆಳೆಯಿತು. ಯಾವುದೋ ಬೇರು, ಗಡ್ಡೆಗಳ ಜಾತಿಗೆ ಸೇರಿದ ತರಕಾರಿಯಿರಬೇಕೆಂದು ಅನಿಸಿದರೂ ರೋಮ ಸಹಿತವಾದ ಕುರಿಯ ಕಾಲಿನಂತಿದ್ದ ಅದರ ಆಕಾರ ನೋಡಿದರೆ ಕುತೂಹಲ ಕೆರಳುತ್ತಿತ್ತು. ಅದೇನೆಂದು ವಿಚಾರಿಸಿದಾಗ, ತಮಿಳು ಸ್ವಲ್ಪ ಮಟ್ಟಿಗೆ  ಅರ್ಥವಾದರೂ ಅವರು ಅದಕ್ಕೆ ಹೇಳುತ್ತಿದ್ದ ಹೆಸರಿನ ಉಚ್ಚಾರಣೆ ಸ್ಪಷ್ಟವಾಗಲೇ ಇಲ್ಲ.


ಅದೊಂದು ಅತ್ಯಂತ ಉಪಯುಕ್ತ ಔಷಧೀಯ ಗುಣವುಳ್ಳ ವಸ್ತುವೆಂದೂ ಅದರ ಸೂಪ್ ತಯಾರಿಸಿ ಕುಡಿದರೆ, ಕೈಕಾಲು ಗಂಟುಗಳ ನೋವು ಮಾಯವಾಗುತ್ತದೆಂದೂ ಅವರ ಮಾತಿನಿಂದ ಅರ್ಥವಾಯ್ತು. ಕೆಲವರಂತೂ ಅಲ್ಲೇ ಪುಟ್ಟ ಕೆಂಡದೊಲೆಯಲ್ಲಿ ಸೂಪ್ ತಯಾರಿಸಿ ಮಾರುತ್ತಿದ್ದರು ಕೂಡ. ರುಚಿ ನೋಡುವ ಆಸೆಯಾದರೂ ಬೀದಿ ಬದಿಯ ಆಹಾರದ ಬಗೆಗೆ ಸ್ವಲ್ಪ ಭಯವಿರುವುದರಿಂದ ಕುಡಿಯುವ ಸಾಹಸ ಮಾಡಲಿಲ್ಲ.

ಕೊನೆಗೆ ಗೂಗಲಮ್ಮ ಅದರ ವಿವರಗಳನ್ನು ತಿಳಿಸಿದಳು. ಗೂಗಲಮ್ಮನ ಪ್ರಕಾರ ಆ ವಸ್ತುಮುದವಟ್ಟುಕಲ್ ಕಿಲಂಗೋ”. ಇದು ದೊಡ್ಡದೊಡ್ಡ ಮರಗಳ ಮೇಲೆ ಬೆಳೆಯುವ ಫರ್ನ್ ಜಾತಿಗೆ ಸೇರಿದ ಓಕ್ ಲೀಫ್ ಫರ್ನ್ (Aglaomorpha quercifolia )  ಸಸ್ಯದ ರೈಜೋ಼ಮ್ (ಗಡ್ಡೆ). ನಮ್ಮ ಮಲೆನಾಡಿನಲ್ಲಿ ಕೂಡ ಮಾವಿನ ಮರ, ಹಲಸಿನ ಮರ ಮೊದಲಾದ ದೊಡ್ಡ ದೊಡ್ಡ ಹಳೆಯ ಮರಗಳ ಮೇಲೆ ಈ ಸಸ್ಯ ಬೆಳೆಯುತ್ತದೆ. “ಬಂದಳಿಕೆಎಂದು ಕರೆಯಲಾಗುವ ಇದರ ಔಷಧೀಯ ಉಪಯೋಗ ನಮ್ಮ ಕಡೆಗೆ ತಿಳಿದಿಲ್ಲವೆನ್ನಿಸುತ್ತದೆ.






ಎಪಿಫೈಟ್‍ ಅಂದರೆ ಬೇರೆ ಸಸ್ಯಗಳ ಮೇಲೆ ಬೆಳೆಯುವ ಈ ಫರ್ನ್ ಗಿಡಗಳಲ್ಲಿ ರೈಜೋ಼ಮ್ ಎಂದು ಕರೆಯಲಾಗುವ ಬೇರು, ಮತ್ತು ಎರಡು ವಿಧದ ಎಲೆಗಳಂತಹ ರಚನೆಯಾದ ಫ್ರಾಂಡ್‍ಗಳು ಇರುತ್ತವೆ. ಒಂದು ರೀತಿಯ ಎಲೆಗಳ ಗುಚ್ಛ ಮರದ ಕಾಂಡಗಳಿಗೆ ತಾಗಿದಂತೆ ಪುಟಾಣಿ ಬುಟ್ಟಿಯಾಕಾರದಲ್ಲಿರುತ್ತವೆ. ಒಣ ಎಲೆಗಳಂತೆ ತೋರುವ ಇವುಗಳು ಗಿಡ ಬೆಳೆಯಲು ಬೇಕಾದ ಸಾವಯವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಉದ್ದವಾಗಿ ಬೆಳೆಯುವ ಇನ್ನೊಂದು ರೀತಿಯ ಎಲೆಗಳಂತಹ ರಚನೆಯಿಂದ ಆಹಾರೋತ್ಪತ್ತಿ, ಸಂತಾನೋತ್ಪತ್ತಿ ಮೊದಲಾದವುಗಳು ನಡೆಯುತ್ತವೆ. ವಾತಾವರಣದಲ್ಲಿರುವ ತೇವಾಂಶ, ಮಳೆ ನೀರು, ಗಾಳಿಯಲ್ಲಿನ ನೈಟ್ರೋಜನ್ ಮೊದಲಾದವುಗಳನ್ನೇ ಬಳಸಿಕೊಂಡು ಈ ಎಲೆಗಳು ಆಹಾರ ತಯಾರಿಸಿಕೊಳ್ಳುತ್ತವೆ. ಸಂತಾನೋತ್ಪತ್ತಿ ಕಾಲದಲ್ಲಿ ಎಲೆಗಳ ಹಿಂಭಾಗದಲ್ಲಿ ಬೆಳೆಯುವ ಚಿಕ್ಕೆಗಳಂತೆ ತೋರುವ ಸ್ಪೋರ್‍ಗಳು ಗಾಳಿಯಲ್ಲಿ ತೇಲಿ ಬೇರೆಡೆ ಪಸರಿಸಿ ಹೊಸ ಸಸ್ಯ ಬೆಳೆಯುತ್ತದೆ.

ಸಂಧಿವಾತದ ಸಾಮಾನ್ಯ ಲಕ್ಷಣಗಳಾದ ಮೂಳೆಗಳ ಸಂಧಿಗಳ ಉರಿಯೂತ, ನೋವು ಮೊದಲಾದವುಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಈ ಗಿಡದ ಗಡ್ಡೆಗಳಿಗೆ ಇದೆ ಎಂದು ಸಾಬೀತಾಗಿದೆ. ಆಗಾಗ ಇದರ ಸೂಪ್ ತಯಾರಿಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆಯೆಂಬುದು ಆ ಭಾಗದಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ನಂಬಿಕೆ.

ಸಿಕ್ಕ ಸಿಕ್ಕ ಸೊಪ್ಪು ಸದೆಗಳನ್ನೆಲ್ಲವನ್ನೂ ಬಳಸಿ ಅಡುಗೆ, ಔಷಧಿ ತಯಾರಿಸುವ ಅಮ್ಮ ಊರಿಗೆ ಹೋಗುತ್ತಿದ್ದಂತೆಯೆ ಈ ಬಂದಳಿಕೆಯ ಗೆಡ್ಡೆಯನ್ನು ತರಲು ಹೇಳಿ, ಯೂ ಟ್ಯೂಬ್ ನೋಡಿಕೊಂಡು ಸೂಪ್ ಮಾಡಿ ಕುಡಿಸಿದರೇನು ಗತಿ ಎಂಬುದು ಈಗ ಅಪ್ಪನನ್ನು ಕಾಡುತ್ತಿರುವ ದೊಡ್ಡ ಚಿಂತೆಯಾಗಿದೆ ಎಂಬಲ್ಲಿಗೆ ಈ ಪುರಾಣ ಮುಕ್ತಾಯವಾಗುತ್ತದೆ.


ವಿ.ಸೂ - ಪ್ರಪಂಚದ ಚರಾಚರ ವಸ್ತುಗಳೆಲ್ಲವೂ ದೊರಕುವ ಮಾಯಾತಾಣ ಅಮೆಜಾನ್ನಲ್ಲಿ ಈ ಮುದವಟ್ಟುಕಲ್ ಕಿಲಂಗುವೂ ದೊರಕುತ್ತದೆ 



19 Jul 2021

ಬೀವರ್ (Beaver)

 


 


ಇತ್ತೀಚೆಗೆ ನಮ್ಮಲ್ಲಿ ಮಾನವ ನಿರ್ಮಿತ ಡ್ಯಾಮ್ ಒಂದು ಬಹಳ ಸುದ್ದಿಯಲ್ಲಿತ್ತು. ಹರಿಯುವ ಅಗಾಧ ಜಲರಾಶಿಯನ್ನು ತಡೆದು ನಿಲ್ಲಿಸಿ ನೀರನ್ನು ನಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುವ ಮಾನವನ ಬೌದ್ಧಿಕ ಸಾಮರ್ಥ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿಯೂ, ಹಾಗೆಯೇ ಪರಿಸರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಅದರ ಸ್ವಾಭಾವಿಕತೆಯನ್ನು ಹಾಳುಗೆಡವಿ, ಅಲ್ಲಿ ವಾಸಿಸುವ ಇನ್ನಿತರ ಜೀವಿಗಳಿಗೆ ಉಪದ್ರವಕಾರಿಯಾಗುವ ಅವನ ಕ್ರೌರ್ಯಕ್ಕೂ ಏಕಕಾಲಕ್ಕೆ ಉದಾಹರಣೆಯಾಗಿವೆ ಅಣೆಕಟ್ಟುಗಳು. ಆದರೆ ಈ ಒಂದು ಪ್ರಾಣಿಯನ್ನು ನೋಡಿದಾಗ, ಹೀಗೆ ಅಣೆಕಟ್ಟುಗಳನ್ನು ನಿರ್ಮಿಸುವ ಬೌದ್ಧಿಕ ಶಕ್ತಿ ನಮಗೆ ಮಾತ್ರವೇ ಎಂದು ಹೆಮ್ಮೆ ಡುವುದೂ ಕೂಡ ಅರ್ಥಹೀನ ಎನ್ನಿಸಿಬಿಡುತ್ತದೆ.  ಬೀವರ್ ಎಂಬ ಪುಟಾಣಿ ಜೀವಿಯೊಂದು ಹರಿವ ತೊರೆ, ಕೊಳ್ಳಗಳಿಗೆ ಅಣೆಕಟ್ಟನ್ನು ಕಟ್ಟಿ ತನಗೆ ಬೇಕಾದ ವಾತಾವರಣವನ್ನು ನಿರ್ಮಿಸಿಕೊಂಡು ಬದುಕುತ್ತದೆ. ಒಂದೇ ವ್ಯತ್ಯಾಸವೆಂದರೆ ಅದರ ಅಣೆಕಟ್ಟಿನಿಂದ ಪರಿಸರಕ್ಕೆ, ಉಳಿದ ಜೀವಿಗಳಿಗೆ ಉಪಕಾರವಾಗುತ್ತದೆಯೆ ಹೊರತು, ನಮ್ಮ ಅಣೆಕಟ್ಟಿನಂತೆ ಅಪಕಾರ ಆಗುವುದಿಲ್ಲ.

ನಮ್ಮ ಇಲಿ ಹೆಗ್ಗಣಗಳ ಹತ್ತಿರದ ಸಂಬಂಧಿ ಬೀವರ್. ಅಮೆರಿಕಾ, ಮತ್ತು ಯೂರೋಪ್ ಏಷಿಯಾ ಖಂಡಗಳಲ್ಲಿ ಕಂಡುಬರುತ್ತದೆ. ಕೆರೆ, ಕೊಳ, ನದಿ, ಹೊಳೆಗಳ ಬಳಿ ವಾಸಿಸುವ ಉಭಯಜೀವಿ. ದೇಹವು ಸಾಮಾನ್ಯ ಮೂಷಿಕಗಳಂತೆಯೆ ಕಾಣಿಸುತ್ತದೆಯಾದರೂ ನೀರಿನಲ್ಲಿ ವಾಸಿಸಲು ಅನುಕೂಲವಾಗುವಂತೆ ಕೆಲವೊಂದು ಮಾರ್ಪಾಟುಗಳಾಗಿವೆ. ಹಿಂಬದಿಯ ಕಾಲುಗಳಲ್ಲಿ ಜಾಲಪಾದಗಳಿವೆ, ಮುಂಬದಿಯ ಕಾಲುಗಳಲ್ಲಿ ನಮ್ಮ ಕೈಗಳಂತೆಯೆ ಐದು ಬೆರಳುಗಳಿದ್ದು, ಕಲ್ಲು, ಮರಗಳಂತಹ ವಸ್ತುಗಳನ್ನು ಹಿಡಿದುಕೊಳ್ಳಲು ಅನುಕೂಲಕರವಾಗಿದೆ. ಬಲವಾದ ದವಡೆಗಳು ಚೂಪಾದ ಬೆಳೆಯುತ್ತಲೇ ಇರುವ ಹಲ್ಲುಗಳು ಮರಗಳನ್ನು ಕೊರೆದು ಬೀಳಿಸಲು ಸಹಕಾರಿಯಾಗಿದೆ. ಬಾಲವು ಅಗಲವಾಗಿ ದೋಣಿಯ ಹುಟ್ಟಿನಂತಿದ್ದು, ನೀರಿನಲ್ಲಿ ವೇಗವಾಗಿ ಈಜಲು ಸಹಕರಿಸುತ್ತದೆ. ಇದು ನೀರಿನಲ್ಲಿ ಗಂಟೆಗೆ ಐದು ಮೈಲು ವೇಗದಲ್ಲಿ ಈಜಬಲ್ಲದು. ಮೈತುಂಬ ಇರುವ ರೋಮಗಳು, ಎಣ್ಣೆಯನ್ನು ಸ್ರವಿಸುವ ಗ್ರಂಥಿಗಳು ನೀರಿನಲ್ಲಿ ಚರ್ಮವು ಸುಸ್ಥಿತಿಯಲ್ಲಿರಲು ಸಹಕಾರಿ. ಕಣ್ಣುಗಳನ್ನು ಆವರಿಸಿರುವ ತೆಳುವಾದ ಪರದೆಯು ನೀರು ಒಳಹೋಗುವುದನ್ನು ತಡೆಯುತ್ತದೆ.

ಮರಗಿಡಗಳನ್ನು ತಿಂದು ಬದುಕುವ ಸಸ್ಯಾಹಾರಿ. ಜೀವಮಾನವನ್ನು ಒಂದು ಸಂಗಾತಿಯೊಂದಿಗೆ ಕಳೆಯುತ್ತವೆ. ಹೊಳೆ, ಕೆರಕೊಳ್ಳಗಳ ಅಂಚಿನಲ್ಲಿ ಮನೆಕಟ್ಟಿಕೊಂಡು ಮಕ್ಕಳುಮರಿಗಳೊಡನೆ ವಾಸಿಸುವ ಅಪ್ಪಟ ಕುಟುಂಬ ಜೀವಿ. ಹಿರಿಯ ಮಕ್ಕಳು ತಮ್ಮ ಹೊಸ ತಮ್ಮ ತಂಗಿಯರನ್ನು ಸಾಕಲು ಸಹಕರಿಸುತ್ತವೆ ಕೂಡ! ಹೀಗೆ ತಮ್ಮ ತಂಗಿಯರನ್ನು ಸಾಕಿದ ಅನುಭವದೊಂದಿಗೆ, ತಾಯಿತಂದೆಯರಿಂದ ದೂರವಾಗಿ ತಮ್ಮದೇ ಆದ ಮನೆಯನ್ನು ನಿರ್ಮಿಸಿಕೊಂಡು ಸಂಗಾತಿಯೊಂದಿಗೆ ಹೊಸಸಂಸಾರ ಪ್ರಾರಂಭಿಸುತ್ತವೆ.

ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಬೀವರ್ ಹರಿಯುವ ನೀರಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲು ಪ್ರಾರಂಭಿಸುತ್ತದೆ. ದಡದಲ್ಲಿರುವ ಮರಗಿಡಗಳ ರೆಂಬೆಕೊಂಬೆಗಳನ್ನು ತನ್ನ ಚೂಪಾದ ಹಲ್ಲುಗಳಿಂದ 45 ಡಿಗ್ರಿ ಕೋನದಲ್ಲಿ ಕತ್ತರಿಸಿ ಎಳೆದು ತರುತ್ತದೆ. ಗಟ್ಟಿಯಾದ ದೊಡ್ಡ ಕಲ್ಲುಗಳನ್ನು ದವಡೆಯಲ್ಲಿ ಅಡಗಿಸಿಕೊಂಡು, ಇಲ್ಲವೇ ಮುಂಗಾಲುಗಳಲ್ಲಿ ಹಿಡಿದುಕೊಂಡು ತಂದು ಹರಿವ ನೀರಿಗೆ ಅಡ್ಡಲಾಗಿ ಹಾಕುತ್ತದೆ. ಅದರ ಮೇಲೆ ರೆಂಬೆ ಕೊಂಬೆಗಳನ್ನು ಚಿಕ್ಕಪುಟ್ಟ ಮರಗಳನ್ನು ತಂದು ಹಾಕುತ್ತದೆ. ದಡದಲ್ಲಿ ಮರಗಳು ಸಿಗದೆ. ಸ್ವಲ್ಪ ಒಳಭಾಗದಲ್ಲಿದ್ದರೆ, ಅದರವರೆಗೆ ಕಾಲುವೆಗಳನ್ನು ತೋಡಿಕೊಂಡು ಹೋಗುತ್ತದೆ. ನೀರಿನಲ್ಲಿ ಮರಗಳನ್ನು ಸಾಗಿಸುವುದು ಹಾಗೂ ವೈರಿಗಳಿಂದ ತಪ್ಪಿಸಿಕೊಳ್ಳುವುದು ಸುಲಭವಾಗುವುದರಿಂದ ಈ ಉಪಾಯ ಮಾಡುತ್ತದೆ.  ಹೀಗೆ ತಡೆದು ನಿಲ್ಲುವ ನೀರಿಗೆ ಹೊಂದಿಕೊಂಡಂತೆ ದಡದಲ್ಲಿ ಅಥವಾ ನೀರಿನಲ್ಲಿ ತನ್ನ ಮನೆಯನ್ನು ನಿರ್ಮಿಸಿಕೊಳ್ಳುತ್ತದೆ ಇದಕ್ಕೆ ಬೀವರ್ ಲಾಡ್ಜ್ ಎಂದು ಹೆಸರು. ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೆ ಮೇಲಿನ ನೀರು ಹೆಪ್ಪುಗಟ್ಟಿದರೂ ಕೂಡ ಒಳಗಿರುವ ನೀರು ಹಾಗೆಯೆ ಉಳಿಯುತ್ತದೆ. ಅದರಿಂದಾಗಿ ಗೂಡಿಗೆ ರಕ್ಷಣೆ ಸಿಗುತ್ತದೆ, ಈಜಿ ಆಹಾರ ಹುಡುಕಿ ತಂದು ಮರಿಗಳನ್ನು ಬೆಳೆಸಲು ಸಹಾಯವಾಗುತ್ತದೆ.

ತನ್ನ ಅನುಕೂಲಕ್ಕಾಗಿ ಬೀವರ್ ನೀರಿಗೆ ಅಣೆಕಟ್ಟು ಕಟ್ಟುವುದರಿಂದಾಗಿ ಆ ಪ್ರದೇಶದಲ್ಲಿ ಸದಾ ನೀರು ಇರುವಂತಾಗಿ, ಇತರ ಅನೇಕ ಜೀವಿಗಳಿಗೆ ಉಪಯೋಗವಾಗುತ್ತದೆ. ಅಲ್ಲಿಯ ವಾತಾವರಣವೇ ಬದಲಾಗುತ್ತದೆ. ಸದಾ ಜೀವಿಗಳ ಚಟುವಟಿಕೆಯಿಂದಿರು ಆ ಸ್ಥಳವು ಚಳಿಗಾಲದಲ್ಲಿ ಆಹಾರದ ಕೊರತೆಯಿಂದ ಬಳಲುವ ಬೇಟೆಗಾರ ಪ್ರಾಣಿಗಳನ್ನು ಆಕರ್ಷಿಸುತ್ತದೆ. ಮರಗಿಡಗಳ ಬಳಿಗೆ ತಲುಪಲೆಂದು  ಬೀವರ್ ಕೊರೆಯುವ ಕಾಲುವೆಗಳಿಂದಾಗಿ ಆ ಪ್ರದೇಶದಲ್ಲೂ ನೀರು ಹರಿಯತೊಡಗುತ್ತದೆ. ಮರಗಿಡಗಳು ದಟ್ಟವಾಗಿ ಬೆಳೆಯಲು ಅನುಕೂಲವಾಗುತ್ತದೆ.   ಅನೇಕ ಪ್ರಾಣಿಗಳಿಗೆ ಕುಡಿಯಲು ನೀರು ಸಿಗುತ್ತದೆ, ಮೀನು ಮೊದಲಾದ ಜಲಚರಗಳಿಗೆ ಅನುಕೂಲವಾಗುತ್ತದೆ. ಹೀಗೆ ಒಂದಿಡೀ ಪ್ರದೇಶದ ವಾತಾವರಣದ ಮೇಲೆ, ಜೀವಿಗಳ ಮೇಲೆ ಪ್ರಭಾವ ಬೀರಬಲ್ಲ ಪ್ರಾಣಿಯಾದ್ದರಿಂದ ಬೀವರ್ ಎಂಬ ದಂಶಕವನ್ನು “ keystone species” ಎನ್ನಲಾಗುತ್ತದೆ. ಅಂದರೆ ಜೀವಜಗತ್ತಿನಲ್ಲಿ ಅತೀ ಪ್ರಾಮುಖ್ಯತೆಯಿರುವ ಜೀವಿ. ಒಂದು ವೇಳೆ ಇವುಗಳಿಗೇನಾದರೂ ತೊಂದರೆಯಾದರೆ ಅವುಗಳನ್ನು ಅವಲಂಬಿಸಿ ಬದುಕುವ ಅನೇಕ ಜೀವಿಗಳು ತೊಂದರೆಗೊಳಗಾಗುತ್ತವೆ.

ಈಗ ಸಧ್ಯದಲ್ಲಿ ಈ ಬೀವರ್ ಗಳು  ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಇಲ್ಲ. ಅಂದರೆ ಸಂಖ್ಯೆ ಸಾಕಷ್ಟಿದೆ. ಆದರೆ ಅವುಗಳ ಚರ್ಮಕ್ಕಾಗಿ, ಮಾಂಸಕ್ಕಾಗಿ ಬೇಟೆಯಾಡುವುದು ದಿನೇದಿನೇ ಹೆಚ್ಚುತ್ತಿದೆಯಾದ್ದರಿಂದ ಬಹುಬೇಗ ಆ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದೇನೋ ಎಂಬ ಅಭಿಪ್ರಾಯವೂ ಇದೆ.

ಇಷ್ಟು ಪುಟ್ಟ ಪ್ರಾಣಿಯೊಂದು, ತನಗಿಂತ ಎಷ್ಟೋ ದೊಡ್ಡ ಗಾತ್ರದ ಮರಗಿಡಗಳನ್ನು ಕೊರೆದು, ಎಳೆದು ತಂದು, ಹರಿಯುವ ಅಗಾಧ ಜಲರಾಶಿಯನ್ನು ತಡೆದು ನಿಲ್ಲಿಸಿ, ಅದೂ ಸಹ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಇನ್ನಿತರ ಜೀವಿಗಳಿಗೂ ಅನುಕೂಲವಾಗುವಂತೆ ತನ್ನ ಮನೆಯನ್ನು ನಿರ್ಮಿಸಿಕೊಳ್ಳುವ ಕೌಶಲದೆದುರು, ಅತೀ ಬುದ್ಧಿವಂತ ಜೀವಿಗಳೆಂದು ನಮಗೆನಾವೇ ಕೊಟ್ಟುಕೊಂಡಿರುವ ಬಿರುದು ಮಂಕಾಗುತ್ತದೆ.

ಈ ಕೆಳಗೆ ಕೊಟ್ಟಿರುವ ಕೊಂಡಿಯಲ್ಲಿ ಇವುಗಳ ಬಗ್ಗೆ ಇರುವ ವಿಡಿಯೋ ನೋಡಬಹುದು.

https://www.youtube.com/watch?v=O67TNQrEq_w

https://www.youtube.com/watch?v=Ic3x8OVYe80

1 Mar 2020

ಮಾಯಾಲೋಕ



{disclaimer - ಹೆಂಡಿಂಗ್ ನೋಡಿ  ತೇಜಸ್ವಿಯವರ "ಮಾಯಾಲೋಕ"ದ ಬಗ್ಗೆ ಏನೋ ಬರೆದಿರಬೇಕು ಎಂದುಕೊಳ್ಳಬೇಡಿ.  ಇದಕ್ಕೆ ಅದಕ್ಕಿಂತ ಸೂಕ್ತವಾದ ಹೆಸರು ದೊರಕಲಿಲ್ಲವಾದ್ದರಿಂದ ಈ ಹೆಸರು}

ಊರಿಗೆ ಹೋದಾಗಲೆಲ್ಲ ನಾನು ಹೆಚ್ಚಿನ ಸಮಯ ಕಳೆಯುವುದು ಅಂಗಳದಲ್ಲೇ. ಅಲ್ಲಿ ಅಕ್ಕ ಬೆಳೆಸಿರುವ ಒಂದಿಷ್ಟು ಸೇವಂತಿಗೆ, ದಾಸವಾಳ, ಕರಿಬೇವು, ಗುಲಾಬಿ ಗಿಡಗಳು, ಆ ಗಿಡಗಳನ್ನಾಶ್ರಯಿಸಿ ಬದುಕುವ ಹೆಸರು ಗೊತ್ತಿಲ್ಲದ ಅನೇಕಾನೇಕ ಕೀಟಗಳು ಇವನ್ನೆಲ್ಲಾ ಗಮನಿಸುತ್ತಾ ಕುಳಿತುಕೊಳ್ಳುವುದು ಸ್ವರ್ಗ.  ಎದುರಿನ  ರಸ್ತೆಯಲ್ಲಿ ಒಂದಿಷ್ಟು ದನಗಳು ಬಂದು ಕರೆಂಟ್ ಕಂಬಕ್ಕೆ ಮೈ ತಿಕ್ಕಿ ತುರಿಕೆ ಪರಿಹರಿಸಿಕೊಳ್ಳುವುದು, ಮಂಗಗಳು ತಮ್ಮ ಮರಿಗಳನ್ನು ಎದೆಗವಚಿಕೊಂಡು ತೆಂಗಿನಮರವನ್ನು ಸರಸರನೆ ಏರಿ ತೆಂಗಿನಕಾಯಿಯನ್ನು ಕಿತ್ತು ನೀರು ಕುಡಿದು ಎಸೆಯುವುದು, ಯಾರಾದರೂ ಮಾತನಾಡಿಸಿದರೆ ಕುಣಿಕುಣಿದು ಮೈಮೇಲೆ ಬರುವ ಸುಂದರಿ ಎಂಬ ಬೀದಿನಾಯಿಯ ನರ್ತನ ಎಲ್ಲವೂ ನನ್ನ ಪಾಲಿಗೆ ಎಷ್ಟುಬಾರಿ ನೋಡಿದರೂ ಬೇಸರವಾಗದ "ಮಲೆಗಳಲ್ಲಿ ಮದುಮಗಳು" ನಾಟಕದಂತೆ!!

ಇತ್ತೀಚೆಗೊಮ್ಮೆ ಊರಿಗೆ ಹೋದಾಗ ಹೀಗೆ ಒಂದು ಸೇವಂತಿಗೆ ಗಿಡವನ್ನು ನೋಡುತ್ತಾ ನಿಂತಿದ್ದೆ. ಹೂವುಗಳೆಲ್ಲಾ ಅರಳಿ ಬಾಡುವ ಹಂತದಲ್ಲಿದ್ದವು. ಗಿಡದ ಅನೇಕ ಎಲೆಗಳೂ ಬಾಡಿದ್ದವು. ಆಗ ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ತೆಳುವಾದ ಜೇಡರ ಬಲೆಯಂತಹ ದಾರ ಇರುವುದು ಕಾಣಿಸಿತು, ಹಾಗೆ ಅಲ್ಲಿ ಅನೇಕ ಜೇಡಗಳು ಬಲೆ ಕಟ್ಟಿಕೊಂಡಿರುವುದು ಅತೀ ಸಾಮಾನ್ಯ. ಆದರೆ ಈ ತೆಳುವಾದ ಎಳೆಯಲ್ಲಿ  ಒಣಗಿದ ಸೇವಂತಿಗೆ ಎಲೆಯಂತಿದ್ದ ಕಸವೊಂದಿತ್ತು. ಅದು ನಿಧಾನವಾಗಿ ಮುಂದೆ ಚಲಿಸುತ್ತಿತ್ತು!  ಗಾಳಿಯಿಂದಾಗಿ ಹಾಗೆ ಕಾಣಿಸುತ್ತಿದೆಯೇನೋ ಎಂದುಕೊಂಡರೂ ಸ್ವಲ್ಪ ಅನುಮಾನವಾಗಿ ಅದನ್ನೇ ಗಮನಿಸುತ್ತಿದ್ದೆ. ನಿಧಾನವಾಗಿ ಆ ಬಲೆಯ ಎಳೆಯ ಮೇಲೆ ಮುಂದೆ ಹೋದ ಆ ಕಸದಂತಹ ವಸ್ತು ಆ ಕಡೆಯಿದ್ದ ರೆಂಬೆಯ ಬಳಿ ಹೋಗುತ್ತಿದ್ದಂತೆಯೆ ಮುಂದೆ ಮೂರು ಕಾಲು, ಹಿಂದೆ ಮೂರುಕಾಲುಗಳನ್ನು ಒಂದು ಕ್ಷಣ ಅಗಲಿಸಿತು. ತಕ್ಷಣ ಇದ್ಯಾವುದೋ ಕೀಟ ಎಂಬ ಉತ್ಸಾಹದಲ್ಲಿ ನಾನು ಎಳೆಯ ಸಮೇತ ಕೈಗೆತ್ತಿಕೊಂಡೆ. ಒಂದು ನಿಮಿಷ ನನ್ನ ಕೈಯಲ್ಲೇ ಆಕಡೆ ಈಕಡೆ ಚಲಿಸುತ್ತಿದ್ದ ಆ ಕೀಟ ಮತ್ತೊಂದು ಕ್ಷಣದಲ್ಲಿ, ಥೇಟ್ ಜೇಡ ಬಲೆಯನ್ನು ಅಂಟಿಸಿ ಅದರ ಎಳೆಯನ್ನು ಹಿಡಿದು ತೇಲಿ ಹೋಗುವಂತೆಯೆ ನನ್ನ ಕೈಯಿಂದ ಇಳಿದು ತೇಲಿಕೊಂಡು ಹೋಗಿ ಸೇವಂತಿಗೆಯ ಗಿಡದ ಮೇಲೆ ಬಿತ್ತು, ನಂತರ ಎಷ್ಟೇ ಹುಡುಕಿದರೂ ಕಾಣಿಸಲೇ ಇಲ್ಲ.
ಒಣಗಿದ ಸೇವಂತಿಗೆ ಎಲೆ

ಒಣಗಿದ ಎಲೆಯಂತೆಯೆ ಕಾಣುವ ಕೀಟ
ಒಂದು ಕ್ಷಣಮಾತ್ರ ತನ್ನ ಇರುವನ್ನು ತೋರಿ ಕೊನೆಗೆ ನನ್ನ ಭ್ರಮೆಯೇನೋ ಎಂಬಂತೆ ಮಾಯವಾದ ಆ ಕೀಟ ಬಹುಶಃ ಸೇವಂತಿಗೆ ಗಿಡವನ್ನಷ್ಟೇ ತನ್ನ ವಾಸಸ್ಥಾನವನ್ನಾಗಿಸಿಕೊಂಡು ಬದುಕುತ್ತಿರುವ ಜೀವಿಯಾಗಿರಬಹುದೇ? ಅದಕ್ಕಾಗಿಯೇ ತನ್ನ ದೇಹವನ್ನು ಒಣಗಿದ ಸೇವಂತಿಗೆ ಎಲೆಯಂತಾಗಿಸಿಕೊಂಡಿದೆಯೇ ? ಇಂತಹ ಇನ್ನೆಷ್ಟು ಜೀವಿಗಳು ನಮಗೇ ಅರಿವಿಲ್ಲದಂತೆ ನಮ್ಮ ಸುತ್ತಮುತ್ತ ವಾಸಿಸುತ್ತಿವೆಯೋ ಬಲ್ಲವರಾರು?

ಆ ಕೀಟ ಕೊನೆಗೂ ಕಾಣಿಸಲೇ ಇಲ್ಲವೆಂಬ ನಿರಾಶೆಯಲ್ಲಿ, ಇನ್ನೇನಾದರೂ ನಾಟಕ ನೋಡಲು ಸಿಗಬಹುದಾ ಎಂದು ಪರೀಕ್ಷಿಸುತ್ತಿದ್ದವಳಿಗೆ ಮತ್ತೊಂದು ಗಿಡಕ್ಕೆ ಆಧಾರವಾಗಿ ನೆಟ್ಟಿದ್ದ ಕೋಲೊಂದರ ತುದಿಯಲ್ಲಿ ಪುಟ್ಟ ಜೇಡವೊಂದು ಕಾಣಿಸಿತು. ಅದರ ಬಣ್ಣ ಆ ಒಣಗಿದ ಕೋಲಿನ ಬಣ್ಣವನ್ನೇ ಹೋಲುತ್ತಿತ್ತು. ನಾನು ಅದರ ಒಂದು ಫೋಟೋ ತೆಗೆಯೋಣವೆಂದು ಮೊಬೈಲ್ ಹತ್ತಿರ ತೆಗೆದುಕೊಂಡು ಹೋದೆ, ಸರಕ್ಕನೆ ಕೋಲಿನ ಆಚೆ ದಿಕ್ಕಿಗೆ ಚಲಿಸಿತು. ನಾನು ಅಲ್ಲೇ ನನ್ನ ಕೈಚಾಚಿದೆ, ಈ ಬಾರಿ ಇನ್ನೊಂದು ದಿಕ್ಕಿಗೆ ತಿರುಗಿತು! ಹೀಗೇ ಅದು ಹೋದ ದಿಕ್ಕಿಗೆಲ್ಲ ನನ್ನ ಕೈ ಕೂಡಾ ಚಲಿಸಿದ್ದಷ್ಟೇ ಸಿಕ್ಕ ಭಾಗ್ಯ, ಫೋಟೋ ತೆಗೆಯುವಷ್ಟು ಸಮಯ ಅದು ಕೊಡಲೇ ಇಲ್ಲ. ನಾನು ಅದನ್ನು ಮುಟ್ಟಲಿಲ್ಲ, ಅದಿರುವ ಗಿಡವನ್ನೂ ಅಲುಗಾಡಿಸಲಿಲ್ಲ. ಕೇವಲ ಹತ್ತಿರ ಕೈ ಚಾಚಿದ್ದಷ್ಟೇ. ಆ ಪುಟಾಣಿ ಜೀವಿಗೆ ಕೂಡ  ತನ್ನ ಸುತ್ತಮುತ್ತ ನಡೆಯುವ ಅತೀ ಚಿಕ್ಕ ಬದಲಾವಣೆಯನ್ನೂ ಗ್ರಹಿಸುವ ಶಕ್ತಿ ಇದೆಯೆಂದಾಯ್ತಲ್ಲವೆ!

ಮನೆಯಂಗಳದ ಒಂದೆರಡು ಗಿಡಗಳಲ್ಲಿ ಇಷ್ಟೆಲ್ಲಾ ವೈವಿಧ್ಯಮಯ ನಾಟಕ ನಡೆಯುತ್ತಿರುತ್ತದೆಯಾದರೆ  ಇನ್ನು ಸಹಸ್ರಾರು ಗಿಡಮರಗಳುಳ್ಳ ಕಾಡಿನಲ್ಲಿನ್ನೆಷ್ಟು ನಾಟಕ ನಡೆಯುತ್ತದೋ ಎಂಬ ಕುತೂಹಲ ಮನದಲ್ಲಿ ಮೂಡಿತು. ನನಗೆ ಯಾವುದಾದರೂ ಕತೆ, ಕಾದಂಬರಿಗಳಲ್ಲಿ “ಕಾಡಿನ ನೀರವ ಮೌನದಲ್ಲಿ..ನಿಶ್ಚಲವಾಗಿದ್ದ ಕಾಡು...ಎಲೆ ಅಲುಗಿದ ಸದ್ದು.....” ಇತ್ಯಾದಿ ಸಾಲುಗಳನ್ನು ಓದಿದಾಗಲೆಲ್ಲಾ ಅನ್ನಿಸುತ್ತದೆ, ಕಾಡಿನಲ್ಲಿ ಅಷ್ಟೆಲ್ಲ ಜೀವಜಾಲ ಇರುವಾಗ ಮೌನ, ನಿಶ್ಚಲತೆ ಸಾಧ್ಯವೇ? ಪ್ರತೀಕ್ಷಣದಲ್ಲಿ ಅಲ್ಲೊಂದು ಜೈವಿಕಚಟುವಟಿಕೆ ನಡೆಯುತ್ತಿರಲೇಬೇಕು, ನಮ್ಮ ಕಿವಿಗೆ ಕೇಳಿಸದ, ಕಣ್ಣಿಗೆ ಕಾಣಿಸದ ಘಟನೆಗಳು ನಡೆಯುತ್ತಿರಲೇಬೇಕಲ್ಲವೆ?

20 Mar 2019

ವಿಚಿತ್ರ ಜೀವಿಗಳು ೪ - ನೀಲಿ ಸಮುದ್ರ ದೇವತೆ



ಅನಿಮೇಷನ್ ಕಲಾವಿದನೊಬ್ಬ ಸೃಷ್ಟಿಸಿದ ಕಾಲ್ಪನಿಕ ಜೀವಿಯಂತೆ ಕಾಣುವ ಇದು ಹಿಸ್ಕು ಹುಳುವಿನ (ಸ್ಲಗ್) ವರ್ಗಕ್ಕೆ ಸೇರಿದ ಜೀವಿ. “ನೀಲಿ ದೇವತೆ”, ನೀಲಿ ಸಮುದ್ರ ದೇವತೆ, ನೀಲಿ ಡ್ರಾಗನ್ , ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ಇದರ ವೈಜ್ಞಾನಿಕ ನಾಮಧೇಯ Glaucus atlanticus .
ಮಲೆನಾಡಿಗರಿಗೆ ಹಿಸ್ಕನ ಹುಳ  ಎಂದರೆ ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವ ದಟ್ಟ ಹಸಿರು ಅಥವಾ ಕಪ್ಪು ಬಣ್ಣದ ಲೋಳೆ ಲೋಳೆಯಾದ ಜೀವಿಯ ನೆನಪು  ಬರುತ್ತದೆ. ನಿಧಾನವಾಗಿ ಚಲಿಸುವ ಬಸವನ ಹುಳುವಿನ ಸೋದರ ಸಂಬಂಧಿ ಹಿಸ್ಕನ ಹುಳ. ಬಸವನ ಹುಳುವಿಗೆ ಬೆನ್ನ ಮೇಲೆ ಚಿಪ್ಪಿರುತ್ತದೆ, ಹಿಸ್ಕನ ಹುಳುವಿಗೆ ಇರುವುದಿಲ್ಲ ಅಷ್ಟೇ.
ನಾವು ನೋಡುವ ಬಸವನ ಹುಳು ಅಥವಾ ಹಿಸ್ಕನ ಹುಳುಗಳೆಲ್ಲಾ ನೆಲವಾಸಿಗಳು. ಆದರೆ ಈ  “ನೀಲಿ ದೇವತೆ” ಸಮುದ್ರವಾಸಿ. ನೆಲವಾಸಿ ಸ್ಲಗ್ ಗಳಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಸಮುದ್ರವಾಸಿ ಸ್ಲಗ್ ಗಳಿವೆ ಸುಮಾರು ಎರಡೂವರೆಯಿಂದ ಮೂರು ಸಾವಿರ ವಿವಿಧ ಪ್ರಭೇದದ ಸಮುದ್ರವಾಸಿ ಸ್ಲಗ್ ಗಳನ್ನು  ಜೀವವಿಜ್ಞಾನಿಗಳು ಗುರುತಿಸಿದ್ದಾರೆ. ವೈವಿಧ್ಯಮಯವಾದ ಹೊಳೆವ ಬಣ್ಣಗಳಲ್ಲಿ, ವಿವಿಧ ಆಕಾರಗಳಲ್ಲಿ ಸಮುದ್ರದಲ್ಲಿ ಇವು ಕಂಗೊಳಿಸುತ್ತವೆ.
ಈ ನೀಲಿ ಸಮುದ್ರ ಹಿಸ್ಕು ನೀರಿನಲ್ಲಿ ಅಂಗಾತನವಾಗಿ (ಅಂದರೆ ಬೆನ್ನು ಕೆಳಗೆ ಹೊಟ್ಟೆ ಮೇಲೆ) ತೇಲುತ್ತಿರುತ್ತದಂತೆ. ದೇಹದಲ್ಲಿರುವ ಗಾಳಿ ಚೀಲದ ಸಹಾಯದಿಂದ ಹೀಗೆ ತೇಲುವ ಸಾಮರ್ಥ್ಯ ಬರುತ್ತದೆ. ಅದರ ಹೊಟ್ಟೆಯ ಭಾಗದಲ್ಲಿ ಹೊಳೆವ ನೀಲಿ ಬಣ್ಣವೂ ಬೆನ್ನಿನ ಭಾಗದಲ್ಲಿ ಬೂದು ಬಣ್ಣವೂ ಇದೆ. ಕೆಳಗಿನಿಂದ ಮತ್ತು ಮೇಲೆನಿಂದ ನೋಡುವ ಭಕ್ಷಕಗಳಿಗೆ ಸುಳಿವು ಸಿಗದಂತೆ ನೀರಿನ ಬಣ್ಣದೊಂದಿಗೆ ಈ ಬಣ್ಣಗಳು ಮಿಳಿತಗೊಳ್ಳುತ್ತವೆ.
ಚಿಕ್ಕ ಪುಟ್ಟ ಜೀವಿಗಳನ್ನು ಕೊಂದು ತಿನ್ನುವ ಬೇಟೆಗಾರ ಇದು. ಆಶ್ಚರ್ಯಕರ ಸಂಗತಿಯೆಂದರೆ ತಾನು ಕೊಂದು ತಿನ್ನುವ ಕಂಟಕಚರ್ಮಿಗಳ ದೇಹದಲ್ಲಿರುವ ವಿಷಕೋಶವನ್ನು ತನ್ನ ದೇಹದಲ್ಲಿರುವ ಬೆರಳುಗಳಂತಹ ಅಂಗದಲ್ಲಿ ಶೇಖರಿಸಿಟ್ಟುಕೊಳ್ಳುವ ವಿಶಿಷ್ಟ ಕಲೆ ಇದಕ್ಕೆ ಸಿದ್ಧಿಸಿದೆ. ಹೀಗೆ ಶೇಖರಿಸಿಟ್ಟುಕೊಂಡ ವಿಷದಿಂದಾಗಿ ಭಕ್ಷಕಗಳು ಇದರ ಹತ್ತಿರ ಸುಳಿಯುವುದಿಲ್ಲ.
ಹೆಣ್ಣು ಗಂಡು ಎಂಬ ಬೇರೆ ಬೇರೆ ಜಾತಿ ಇವುಗಳಲ್ಲಿಲ್ಲ. ಒಂದೇ ದೇಹದಲ್ಲಿ ಎರಡೂ ರೀತಿಯ ಲೈಂಗಿಕಾಂಗಗಳಿವೆಯಾದ್ದರಿಂದ  ಬೇರೊಂದು ಜೀವಿಯೊಡನೆ  ವೀರ್ಯ ಬದಲಾಯಿಸಿಕೊಂಡು ಎರಡೂ ಏಕಕಾಲದಲ್ಲಿ ಮೊಟ್ಟೆಯಿಡುತ್ತವೆ.
ಈ ಸಮುದ್ರ ಸ್ಲಗ್ ಗಳು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಕಂಡುಬರುತ್ತವೆ. ಆದರೆ ದಡಕ್ಕೆ ಬರುವುದು ಅಪರೂಪವಾದ್ದರಿಂದ ಜನಸಾಮಾನ್ಯರಿಗೆ ಕಾಣಿಸುವುದೂ ಕಡಿಮೆ. ಈ ರೀತಿಯ ಸಮುದ್ರಜೀವಿಗಳ ಬಗ್ಗೆ ವಿಜ್ಞಾನ ಪ್ರಪಂಚಕ್ಕೆ ತಿಳಿದಿರುವುದು ಅತ್ಯಲ್ಪ ಸಂಗತಿಗಳಷ್ಟೇ ಆಗಿರುವುದರಿಂದ, ಇನ್ನೂ ಇಂತಹ ಜೀವಿಗಳು ತಮ್ಮೊಡನೆ ಸೃಷ್ಟಿಯ ಅದೆಷ್ಟು ರಹಸ್ಯಗಳನ್ನು ಅಡಗಿಸಿಕೊಂಡಿವೆಯೋ . 

26 Jul 2018

ಲಕ್ಕಿ ಸೊಪ್ಪಿನ ಗಿಡ



 ಬೆಂಗಳೂರು ಮಹಾನಗರದ ಪಾರ್ಕೊಂದರಲ್ಲಿ  ಒಂದು ಚಿಕ್ಕ ಮರದ ಎಲೆಗಳನ್ನು ನೋಡಿದೊಡನೆ ಅರೆ ಇದು ಲಕ್ಕಿ ಸೊಪ್ಪಿನಂತಿದೆಯಲ್ಲಾ ಎಂದು ಯೋಚಿಸಿದೆ. ಒಂದು ಎಲೆಯನ್ನು ಕೀಳುತ್ತಿದ್ದಂತೆಯೆ ಚಿರಪರಿಚಿತವಾದ ಅದರ ವಾಸನೆ ಮೂಗಿಗಡರಿ ಮನಸ್ಸು ಬಾಲ್ಯಕ್ಕೆ ಜಾರಿತ್ತು.

ಮಲೆನಾಡಿನ ನಮ್ಮ ಊರಿನ ಮಣ್ಣುರಸ್ತೆಯ ಬದಿಯಲ್ಲಿ ಪೊದೆಯಂತೆ ಬೆಳೆವ ಸಸ್ಯ ಲಕ್ಕಿಗಿಡ. ಯಾರೂ ನೆಟ್ಟು ಬೆಳಸದ, ಯಾವುದೇ ಆರೈಕೆಯನ್ನೂ ಬೇಡದ, ತನ್ನ ಪಾಡಿಗೆ ತಾನು ಬೆಳೆದು ನಳನಳಿಸುವ ಈ ಗಿಡ ನಮಗೆ ಅನೇಕ ರೀತಿಯಲ್ಲಿ ಉಪಯೋಗವಾಗುತ್ತಿತ್ತು ಮತ್ತು ಕೆಲವೊಮ್ಮೆ ಅದರಿಂದ ಅಪಾಯವೂ ಎದುರಾಗುತ್ತಿತ್ತು.
ಈ ಗಿಡದ ಕಾಂಡಗಳು ತೆಳ್ಳಗಿರುತ್ತವೆ. ಗಾಳಿ, ಮಳೆಯ ಬಿರುಸನ್ನು ತಡೆದುಕೊಂಡು ನೆಟ್ಟಗೆ ನಿಲ್ಲುವ ಕಾಂಡವು ಸುಲಭವಾಗಿ ತುಂಡಾಗಂತೆ ಗಟ್ಟಿಮುಟ್ಟಾಗಿರುತ್ತವೆ. ಆದ್ದರಿಂದಲೇ ಈ ಸಸ್ಯದ ಕಾಂಡವು ಮಲೆನಾಡಿನ ಶಾಲೆಗಳ ಶಿಕ್ಷಕರುಗಳ ಅತ್ಯಂತ ಪ್ರೀತಿಯ ಆಯುಧವಾಗಿರುತ್ತಿತ್ತು. ತರಗತಿಯ “ಮಾನೀಟರ್’ ಗೆ ಮೇಷ್ಟ್ರು  “ಲಕ್ಕಿಬರಲು ತಗಂಬಾ ಹೋಗ್” ಎಂದು ಹೇಳಿದರೆಂದರೆ ಹೋಂ ವರ್ಕ್ ಮಾಡದವರಿಗೆ, ಪುಂಡ ಹುಡುಗರಿಗೆ ಕಾಲು ನಡುಗಲು ಪ್ರಾರಂಭವಾಗುತ್ತಿತ್ತು!! “ಲಕ್ಕಿಬರಲ” ಹೊಡೆತ ತಿಂದವರು ಅದರ ಉರಿಯನ್ನು ಅನೇಕ ದಿನಗಳವರೆಗೆ ಮರೆಯಲಾಗುತ್ತಿರಲಿಲ್ಲ!!  ತೀರಾ ತುಂಟ ಮಕ್ಕಳನ್ನು ದಾರಿಗೆ ತರಲು ಮನೆಗಳಲ್ಲೂ ಒಂದೆರಡಾದರೂ “ಲಕ್ಕಿ ಬರಲು” ಇದ್ದೇ ಇರುತ್ತಿತ್ತು. ಅಮ್ಮ ಅದನ್ನು ಇಟ್ಟ ಜಾಗವನ್ನು ನೋಡಿಕೊಂಡ, ಅಮ್ಮನಿಗೆ ಕಾಣದಂತೆ ಮುರಿದೆಸೆದು ಗೆದ್ದೆ ಎಂದು ಬೀಗುವ  ತುಂಟರಿಗೇನೂ ಕೊರತೆಯಿರಲಿಲ್ಲ. ಆದರೆ ಮನೆಯ ಅಕ್ಕಪಕ್ಕದಲ್ಲೋ ಎದುರಿನ ಬೀದಿಯಲ್ಲೋ ಲಕ್ಕಿಗಿಡದ ದೊಡ್ಡ ಪೊದೆಯೇ ಇರುತ್ತಿದ್ದುದರಿಂದ ಈ ಸಂತಸ ಹೆಚ್ಚುಹೊತ್ತು ಇರುತ್ತಿರಲಿಲ್ಲ ಅಷ್ಟೇ.

ಇನ್ನು “ಲಕ್ಕಿಸೊಪ್ಪು” ನಮಗೆ ಅನೇಕ ಆಟಕ್ಕೆ ಒದಗುತ್ತಿದ್ದ ಅತ್ಯಂತ ಪ್ರೀತಿಯ ವಸ್ತುವಾಗಿತ್ತು. ಅದೊಂದು ಪರಮ ಪವಿತ್ರವಾದ ಸೊಪ್ಪೆಂಬುದು ನಮ್ಮೆಲ್ಲರ ನಂಬಿಕೆಯಾಗಿದ್ದರಿಂದ ಪ್ರತೀ ದಿನ ಒಂದಿಷ್ಟು ಸೊಪ್ಪನ್ನು ಕೊಯ್ದು ಯೂನಿಫಾರಂ ಲಂಗದ ಸೀಕ್ರೆಟ್ ಜೇಬಿನಲ್ಲೋ ಅಥವಾ ಜಾಮಿಟ್ರಿ ಬಾಕ್ಸಿನಲ್ಲೋ ಇಟ್ಟುಕೊಂಡಿರುತ್ತಿದ್ದೆವು. ಹೀಗೆ ಸೊಪ್ಪನ್ನು ಇಟ್ಟುಕೊಂಡವರಿಗೆ ಸಗಣಿ ಮೆಟ್ಟುವುದರಿಂದಾಗಲೀ, “ಮುಚ್ಚಿಟ್ಟು” ಆದವರನ್ನು ಮುಟ್ಟಿದರಾಗಲೀ ಯಾವುದೇ ಮೈಲಿಗೆ(?) ಉಂಟಾಗುತ್ತಿರಲಿಲ್ಲ!! ಯಾರದರೂ ಹೀಗೆ ಸೊಪ್ಪು ಇಟ್ಟುಕೊಳ್ಳಲು ಮರೆತಿದ್ದರೆ ಅವರಿಗೆ ಹೇಗಾದರೂ ಸಗಣಿ ಮುಟ್ಟಿಸಿ ನೀನು ಮುಚ್ಚಿಟ್ಟು ದೂರ ಹೋಗು ಎಂದು ಅಣಕಿಸಿ ನಗುತ್ತಿದ್ದೆವು!!
ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಒಂದು ಆಟವನ್ನು ಕೂಡಾ ಆಡುತ್ತಿದ್ದ ನೆನಪು. ಜೂಟಾಟದಂತೆಯೆ ಇದ್ದ ಈ ಆಟದಲ್ಲಿ ಲಕ್ಕಿ ಸೊಪ್ಪಿನ ಗಿಡವನ್ನು ಹಿಡಿದುಕೊಂಡವರನ್ನು ಕಳ್ಳ ಔಟ್ ಮಾಡುವಂತಿರಲಿಲ್ಲ!!
ಇನ್ನೊಂದು ವಿಚಿತ್ರ ಆಟದಲ್ಲಿ ಲಕ್ಕಿಸೊಪ್ಪನ್ನು ಕೈಯಲ್ಲಿ ಇಟ್ಟುಕೊಂಡವರು, ಅದಿಲ್ಲದವರ ಬೆನ್ನಿಗೆ “ಲಕ್ಕಿ ಸೊಪ್ಪಿನ ಗುದ್ದು” ಕೊಡುವುದು!! ಒಟ್ಟಿನಲ್ಲಿ ಹೊಡೆದಾಡಿಕೊಳ್ಳಲು ಒಂದು ನೆಪ!!
ಮನೆಕಟ್ಟುವ ಆಟದಲ್ಲಿ ಈ ಗಿಡದ ಹೆರೆಗಳನ್ನು  ಮನೆಯ ಮುಚ್ಚಿಗೆಗೆ ಬಳಸುತ್ತಿದ್ದೆವು. ಅಡಿಗೆ ಆಟದಲ್ಲಿ ಇದರ ಸೊಪ್ಪಿನ ಸಾರು ತಯಾರಾಗುತ್ತಿತ್ತು!!

ಹೀಗೆ ನಮ್ಮ ಬಾಲ್ಯದಲ್ಲಿ ನಮ್ಮ ದಿನನಿತ್ಯದ ಆಟದ ಸರಕಾಗಿದ್ದ ಲಕ್ಕಿಗಿಡ, ದಾರಿಯ ಬದಿಗಳಲ್ಲಿ ಪೊದೆಯಂತೆ  ಹೆಚ್ಚೆಂದರೆ ಏಳೆಂಟು ಅಡಿಗಳಷ್ಟು ಎತ್ತರಕ್ಕೆ ಬೆಳೆವ ಸಸ್ಯ. ಇಲ್ಲಿ ಬೆಂಗಳೂರಿನ ಪಾರ್ಕೊಂದರಲ್ಲಿ ಇದು ಸುಮಾರು ಹತ್ತು ಅಡಿಯ ಚಿಕ್ಕ ಮರದಷ್ಟು ಎತ್ತರಕ್ಕೆ ಬೆಳೆದಿದೆ.  ಹಾಗಾದರೆ ಇವು ಒಂದೇ ಕುಲಕ್ಕೆ ಸೇರಿದವುಗಳಾದರೂ ಬೇರೆ ಬೇರೆ ಪ್ರಭೇದವೇ? ಅಥವಾ ಗಾತ್ರವೊಂದು ಬಿಟ್ಟರೆ ಬೇರೆಲ್ಲ ಗುಣಲಕ್ಷಣಗಳೂ ಒಂದೇ ಆಗಿರುವುದರಿಂದ, ಹವಾಮಾನಕ್ಕೆ ತಕ್ಕಂತೆ  ಗಾತ್ರದಲ್ಲಿ ಬದಲಾವಣೆ ಸಸ್ಯಲೋಕದಲ್ಲಿ ಸಹಜವೂ ಆಗಿರುವುದರಿಂದ ಒಂದೇ ಪ್ರಭೇದವೇ ಸರಿಯಾಗಿ ನಿರ್ಧರಿಸಲಾಗಲಿಲ್ಲ.  

ಸಸ್ಯಶಾಸ್ತ್ರೀಯವಾಗಿ Vitex negundo(Nirgundi) ಎಂದು ಕರೆಸಿಕೊಳ್ಳುವ ಈ ಸಸ್ಯ ಏಷಿಯಾಖಂಡದ ಹೆಚ್ಚಿನ ದೇಶಗಳಲ್ಲಿ, ಆಫ್ರಿಕಾದಲ್ಲಿ ಸಹಜವಾಗಿ ಬೆಳೆಯುತ್ತದೆ. ಕನ್ನಡದಲ್ಲಿ ಲಕ್ಕಿಗಿಡ, ಬಿಳಿನೆಕ್ಕಿ ಎಂಬ ಹೆಸರಿದೆ. ಸಂಸ್ಕೃತದಲ್ಲಿ ಸಿಂಧುವಾರ, ನಿರ್ಗುಂದಿ, ಸುರಸ, ನೀಲಮಂಜರಿ, ಸಿಂಧುಕ ಇತ್ಯಾದಿ ಹೆಸರುಗಳಿವೆ.

ಗಿಡವು ಆರರಿಂದ ಹನ್ನೆರಡು ಅಡಿಗಳವರೆಗೆ ಬೆಳೆಯುತ್ತದೆ. ಗಿಡದ ಕಾಂಡವು ಸಪೂರವಾಗಿದ್ದರೂ ಸದೃಡವಾಗಿರುತ್ತವೆ. ಐದು ಎಲೆಗಳ ಗುಚ್ಛವು ಒಂದೇ ಎಲೆಯಂತೆ ತೋರುತ್ತದೆ. ಹೂಗುಚ್ಛವು ಎರಡು-ಮೂರು ಇಂಚು ಉದ್ದವಾಗಿದ್ದು ತೆಳುನೀಲಿ ಅಥವಾ ನೀಲಿ ಬಣ್ಣದ ಸಣ್ಣ ಹೂವುಗಳಿವೆ. 

ಬಿಳಿಲಕ್ಕಿ ಮತ್ತು ಕರೇಲಕ್ಕಿ ಎಂಬ ವಿಧಗಳಿದ್ದು, ಕರೀಲಕ್ಕಿ ಗಿಡದ ಕಾಂಡ ಮತ್ತು ಎಲೆಗಳು ಸ್ವಲ್ಪ ಕಡುಬಣ್ಣ ಹೊಂದಿರುತ್ತದೆ. ಅಲ್ಲದೇ ಹೂವುಗಳ ಬಣ್ಣದಲ್ಲೂ ಸ್ವಲ್ಪ ವ್ಯತ್ಯಾಸ ಇರುತ್ತದೆ.

ಸಸ್ಯದ ಬೇರು, ಎಲೆಗಳು, ಬೀಜಗಳು ಅತ್ಯಂತ ಔಷಧೀಯ ಗುಣವುಳ್ಳದ್ದಾಗಿರುವುದರಿಂದ ಆಯುರ್ವೇದ, ಯುನಾನಿ, ಹೋಮಿಯೋಪತಿ, ಮನೆಮದ್ದು ಇತ್ಯಾದಿ ವೈದ್ಯಪದ್ಧತಿಯಲ್ಲಿ ಅನೇಕ ರೋಗಗಳಿಗೆ ಇದನ್ನು ಉಪಯೋಗಿಸುತ್ತಾರೆ.

ಆಯುರ್ವೇದ ವೈದ್ಯಪದ್ಧತಿಯಲ್ಲಿ ಈ ಗಿಡದ ಬೇರು, ಎಲೆ, ಬೀಜಗಳಿಂದ ತಯಾರಿಸಿದ ಔಷಧಿಗಳನ್ನು ಅಸ್ತಮಾ, ಕಫ, ಕೆಮ್ಮು ಮುಂತಾದ ರೋಗಗಳಿಗೆ, ಹೊಟ್ಟೆಹುಳುನಾಶಕವಾಗಿ, ಉರಿಯೂತವಿನಾಶಕವಾಗಿ, ವಿಷನಿವಾರಕವಾಗಿ, ಉಪಯೋಗಿಸುತ್ತಾರೆ. 
ಇದಲ್ಲದೇ ಇನ್ನೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.  ಸ್ತ್ರೀಯರಲ್ಲಿ ಋತುಚಕ್ರಕ್ಕೆ ಸಂಭಂದಿಸಿದ ದೋಷಗಳನ್ನು ನಿವಾರಿಸುತ್ತದೆ, ಉತ್ತಮ ಜೀರ್ಣಕಾರಿ, ಉತ್ತಮ ನೋವುನಿವಾರಕ, ಕೀಟನಾಶಕ ಕೂಡಾ.

ರೋಮನ್ನರ ನಂಬಿಕೆಯಂತೆ ಇದರ ಎಲೆಗಳು ಲೈಂಗಿಕಾಪೇಕ್ಷೆಯನ್ನು ಕಡಿಮೆಗೊಳಿಸುತ್ತವೆಯಂತೆ. ಆದ್ದರಿಂದಲೇ ಇದಕ್ಕೆ “ chaste tree” (ಶುಧ್ಧವಾದ, ಪವಿತ್ರವಾದ ಮರ) ಎಂಬ ಹೆಸರೂ ಇದೆ.


ಈಗೆಲ್ಲಾ ಮಾತೆತ್ತಿದರೆ ಲ್ಯಾಬ್ ಟೆಸ್ಟ್, ಸ್ಕ್ಯಾನಿಂಗ್, ಎಕ್ಸ್ ರೇ ಎಂಬ ಕಾಲವಾಗಿರುವುದರಿಂದ ಇಂತಹ ಔಷಧೀಯ ಸಸ್ಯಗಳ ಬಗ್ಗೆ ಅರಿವಿರುವವರು, ಮನೆಯಲ್ಲೇ  ಔಷಧಿ ತಯಾರಿಸಿ ಉಪಯೋಗಿಸುವವರ ಸಂಖ್ಯೆ ತೀರಾ ಕಡಿಮೆಯಾಗಿರುವುದು ವಿಷಾದನೀಯ.

ನಿಜಕ್ಕೂ ಇದರ ಔಷಧೀಯ ಗುಣಗಳ ಬಗ್ಗೆ ಅರಿತಾಗ ಇದೊಂದು ಪವಿತ್ರವಾದ ಮರವೇ ಎಂಬುದು ಅರಿವಾಗುತ್ತದೆ. ಬಾಲ್ಯದಲ್ಲಿ ಇದ್ಯಾವುದರ ಅರಿವಿಲ್ಲದೆಯೂ ಇದೊಂದು ಶುದ್ಧೀಕರಿಸುವ ಗಿಡವೆಂದು ನಂಬಿದ್ದೆವು!! ಹಿರಿಯರು ಕಿರಿಯರಿಗೆ ಇದು ಉಪಯುಕ್ತ ಸಸ್ಯ ಎಂಬ ಅರಿವನ್ನು ಇಂತಹ ನಂಬಿಕೆಗಳನ್ನು ಬಿತ್ತುವುದರ ಮೂಲಕವೇ ದಾಟಿಸುತ್ತಿದ್ದರೇನೋ ಅಲ್ಲವೇ?

(ಜೂನ್ ತಿಂಗಳ "ಹಸಿರುವಾಸಿ" ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ )